ಮಂಡ್ಯ ವಿಧಾನಸಭಾ ಕ್ಷೇತ್ರ ಅರ್ಹ ಮತದಾರರಾಗಿ ಮಂಗಳಮುಖಿಯರು ಕೂಡ ಸಾಮಾನ್ಯ ಮತದಾರರಂತೆ ಇಂದು ಮಂಡ್ಯ ನಗರದ ಶ್ರೀಲಕ್ಷ್ಮೀಜನಾರ್ಧನ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡರು.
ಬೆಳಗ್ಗೆ 11 ಗಂಟೆಯ ವೇಳೆಗೆ ಆಗಮಿಸಿದ ಮೂವರು ಮಂಗಳಮುಖಿಯರಾದ ಪ್ರಿಯಾಮಣಿ, ನೇತ್ರಾವತಿ, ಅನ್ವಿತಾ ಅವರು ತಮ್ಮ ಹಕ್ಕು ಚಲಾಯಿಸಿದ ಸಂತೃಪ್ತಿಯನ್ನು ತಮ್ಮದಾಗಿಸಿಕೊಂಡರು.
ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ನಮಗೆ ಇಷ್ಟವಾದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಳುಹಿಸುವಂತಹ ವ್ಯವಸ್ಥೆ ನಮ್ಮಲ್ಲಿದೆ. ಇಂತಹ ಅವಕಾಶವನ್ನು ಯಾರೂ ಕಳೆದುಕೊಳ್ಳಬಾರದು. ಪ್ರತಿಯೊಬ್ಬರೂ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಐದು ವರ್ಷಕ್ಕೊಮ್ಮೆ ಸಿಗುವ ಈ ಅವಕಾಶವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ 130 ತೃತೀಯ ಲಿಂಗಿ ಮತದಾರರು
ಮಂಡ್ಯ ಜಿಲ್ಲೆಯಲ್ಲಿ ಸುಮಾರು 145 ಮಂದಿ ಮಂಗಳಮುಖಿಯರಿದ್ದು, ಇದರಲ್ಲಿ 130ಕ್ಕೂ ಹೆಚ್ಚು ಮಂದಿ ತೃತೀಯ ಲಿಂಗಿಗಳಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮತದಾನದ ಹಕ್ಕುಳ್ಳವರು ತಪ್ಪದೇ ಮತ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಮತದಾನ ಶಾಂತಿಯತವಾಗಿ ನಡೆಯಿತು. ಬೆಳಗ್ಗೆ ಪ್ರಾರಂಭವಾದ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಿರಾಯಾಸವಾಗಿ ನಡೆಯಿತು.
ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆ 10 ಗಂಟೆಯವರೆಗೆ ಮಂದ ಗತಿಯಲ್ಲಿ ಸಾಗಿದ ಮತದಾನ 10 ಗಂಟೆಯ ನಂತರ ಸ್ವಲ್ಪ ಪ್ರಮಾಣದಲ್ಲಿ ಚುರುಕು ಪಡೆದುಕೊಂಡಿತು. ಮಧ್ಯಾಹ್ನ ಸುಡು ಬಿಲಿಸಲ್ಲಿ ಸ್ವಲ್ಪ ಪ್ರಮಾಣದಲಿ ಕಡಿಮೆಯಾದಂತೆ ಕಂಡುಬಂದ ಮತದಾನ, ಸಂಜೆಯ ವೇಳೆಗೆ ಮತ್ತಷ್ಟು ಚುರುಕು ಪಡೆದುಕೊಳ್ಳಲಿದೆ.
ಮಂಡ್ಯ ನಗರದ ಹಾಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತ ಕೇಂದ್ರದಲ್ಲಿ 95 ವರ್ಷದ ವೃದ್ಧೆಯೊಬ್ಬರು ವ್ಹೀಲ್ ಚೇರ್ನಲ್ಲಿ ತೆರಳಿ ಮತದಾನ ಮಾಡಿದರೆ, ವಯೋವೃದ್ಧ ರಾಮಚಂದ್ರ ಅವರು ಮೊಮ್ಮಕ್ಕಳ ಸಹಾಯದೊಂದಿಗೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಅಂಗವಿಕಲ ಮಹಿಳೆಯೊಬ್ಬರು ತ್ರಿಚಕ್ರ ವಾಹನದಲ್ಲಿ ತಮ್ಮ ಸಂಬಂಧಿಕರೊಂದಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.