ಮಂಡ್ಯ ನಗರದ ಪುಷ್ಪ ಮತ್ತು ಡಾ.ಕಕ್ಕಿಲಾಯ ದಂಪತಿಯ ಪುತ್ರಿ, ಭರತನಾಟ್ಯ ಕಲಾವಿದೆ ಮೇಘ ಪಿ.ರಾವ್ ಅವರಿಗೆ ಕದಂಬ ಸೈನ್ಯದ ವತಿಯಿಂದ ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ನಾಟ್ಯರಾಣಿ ಶಾಂತಲಾ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದುಷಿ ಮೇಘ ಪಿ.ರಾವ್ ಅವರಿಗೆ ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಹಾಗೂ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಎಂ.ಎಸ್.ಆತ್ಮಾನಂದ ಮಾತನಾಡಿ, ಪ್ರಸ್ತುತ ಅಮೇರಿಕಾದಲ್ಲಿ ನೆಲಸಿ ಭರತನಾಟ್ಯವನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಸ್ವೀಕರಿಸಿರುವ ಅವರು, ಪ್ರತಿಷ್ಠಿತ 50 ಕ್ಕೂ ವೇದಿಕೆಗಳಲ್ಲಿ ಹೆಚ್ಚು ಭರತನಾಟ್ಯ ಕಾರ್ಯಕ್ರಮಗಳನ್ನು ನೀಡಿದ್ದು, ಕೀರ್ತಿ ತಂದಿದ್ದಾರೆ ಎಂದು ಹೇಳಿದರು.
ಪ್ರೊ. ಜಯಪ್ರಕಾಶ್ಗೌಡ ಮಾತನಾಡಿ, ಮೇಘ ಪಿ.ರಾವ್ ಮಂಡ್ಯದ ಪ್ರತಿಭಾನ್ವಿತ ಕಲಾವಿದರಲ್ಲಿ ಒಬ್ಬರು, ಮಂಡ್ಯದಲ್ಲಿ ಹುಟ್ಟಿ ಬೆಳೆದು ಮಂಡ್ಯದ ಕೀರ್ತಿಯನ್ನು ಅಮೇರಿಕಾದಲ್ಲಿ ಬೆಳಗುತ್ತಿರುವರು. ಅಮೇರಿಕಾದಲ್ಲಿ ಧೀರನ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆ ಮೂಲಕ ನೂರಾರು ಮಕ್ಕಳನ್ನು ಭರತನಾಟ್ಯ ಕಲಾವಿದರನ್ನಾಗಿ ರೂಪಿಸುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ಡಾ.ಪ್ರದೀಪ್ಕುಮಾರ ಹೆಬ್ರಿ, ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಕನ್ನಡ ಹೋರಾಟಗಾರ ಥಾಮಸ್ ಬೆಂಜಮಿನ್, ಕರ್ನಾಟಕ ಸಂಘದ ಹರೀಶ್ ಕುಮಾರ್, ಡಾ. ಕಕ್ಕಿಲಾಯ, ಕದಂಬ ಸೈನ್ಯದ ರಾಜ್ಯ ಸಹಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಜಿಲ್ಲಾ ಉಪಾಧ್ಯಕ್ಷ ರಾಮು ಚಿಕ್ಕೇಗೌಡನದೊಡ್ಡಿ, ಮುಖಂಡ ಆರ್.ಟಿ.ಓ. ಕೃಷ್ಣ ಉಪಸ್ಥಿತರಿದ್ದರು.