ಅಮೃತ ಸಮಾನವಾದ ಹಾಲಿಗೆ ಯಾರೂ ಸಹ ಕಲಬೆರಕೆ ಮಾಡಬಾರದು. ಪರಿಶುದ್ದ ಹಾಲು ಪೂರೈಕೆ ಮಾಡುವ
ಮೂಲಕ ಸಹಕಾರ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ಸಲಹೆ ನೀಡಿದರು.
ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಿಶೇಷ ವಾರ್ಷಿಕ
ಮಹಾಸಭೆಯನ್ನು ಉದ್ಘಾಟಿಸಿ, ಸಂಘಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡಿದ ಸಂಘದ ಷೇರುದಾರರನ್ನು ಬಹುಮಾನ ನೀಡುವ ಮೂಲಕ ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ಗುಣಮಟ್ಟದ ಹಾಲು ಪೂರೈಕೆ ಮಾಡುವವರಿಗೆ ಸರ್ಕಾರವು ಪ್ರತಿ ಲೀಟರ್ಗೆ 5 ರೂ. ಪ್ರೋತ್ಸಾಹ ಧನ ನೀಡುತ್ತದೆ. ಕಳಪೆ ಹಾಲು ಪೂರೈಕೆ ಮಾಡಿದರೆ ಸರ್ಕಾರದ ಹಣ ಸಿಗುವುದಿಲ್ಲ. ಅಲ್ಲದೆ ಹಾಲಿಗೆ ಕಲಬೆರಕೆ ಮಾಡಿ
ಸಂಘಕ್ಕೆ ಹಾಕಿದರೆ ಸರ್ಕಾರದ ಆಹಾರ ಸುರಕ್ಷತಾ ಕಾನೂನಿನ ಪ್ರಕಾರ 1 ಲಕ್ಷ ರೂ.ವರೆಗೆ ದಂಡ ಹಾಗೂ ಜೈಲು ಶಿಕ್ಷೆಗೂ ಅರ್ಹರಾಗುತ್ತೀರಿ, ಹಾಗಾಗಿ ಕಡ್ಡಾಯವಾಗಿ ಗುಣಮಟ್ಟದ ಹಾಲು ಪೂರೈಕೆ ಮಾಡಿ ತಮ್ಮ ಗ್ರಾಮದ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಸಂಘದ 2021-22ನೇ ವಿಶೇಷ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಮನ್ಮುಲ್ ಮಾರ್ಗದ ವಿಸ್ತರಣಾಧಿಕಾರಿ ಗುರುರಾಜ್ ಸುರಗೀಹಳ್ಳಿ ವಹಿಸಿದ್ದರು. ಮನ್ಮುಲ್ ಉಪ ವ್ಯವಸ್ಥಾಪಕ ಮರಿರಾಚಯ್ಯ, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಕುಮಾರ್, ಮುಖಂಡರಾದ ಕೆ.ಎಸ್.ಶಿವರಾಮಯ್ಯ, ಸುರೇಶ್, ವಾಸು, ಸಂಘದ ಕಾರ್ಯದರ್ಶಿ ಕೆ.ಬಿ.ಕೃಷ್ಣ, ಹಾಲು ಪರೀಕ್ಷಕ ಕೆ.ಎಂ.ನಾಗೇಶ್, ಎಸ್.ಬಿ.ಮಂಜುನಾಥ್ ಸೇರಿದಂತೆ ನೂರಾರು ಷೇರುದಾರರು ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದರು.