ಪೋ ಷಕರು ತಮ್ಮ ಮಕ್ಕಳು ವಯಸ್ಕರಾಗಿ ಚಾಲನಾ ಪರವಾನಗಿ ಪಡೆಯುವವರೆಗೂ ಯಾವುದೇ ಕಾರಣಕ್ಕೂ ವಾಹನ ಚಲಾಯಿಸಲು ಅವಕಾಶ ನೀಡಬಾರದು. ಅಪ್ರಾಪ್ತ ಮಕ್ಕಳು ವಾಹನ ಚಲಾಯಿಸಿದರೆ ದಂಡ ವಿಧಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಕಛೇರಿಯ ಅಧಿಕಾರಿ ವಿವೇಕಾನಂದ ತಿಳಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ವತಿಯಿಂದ ಮಂಡ್ಯ ನಗರದ ಎಸ್.ಬಿ ಸಮುದಾಯ ಭವನದಲ್ಲಿಂದು ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋವಿಡ್ ನಿಂದ ಸಾವನ್ನಪ್ಪಿದ್ದಕ್ಕಿಂತ ಅಧಿಕ ಜನ ವಾಹನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ನಮ್ಮ ದೇಶದಲ್ಲಿ 2022ರ ಅಂಕಿ ಅಂಶಗಳ ಪ್ರಕಾರ 1.50 ಲಕ್ಷಜನ ಆಕ್ಸಿಡೆಂಟ್ ಆಗಿ ಸಾವನ್ನಪ್ಪಿದ್ದಾರೆ, ಅದರಲ್ಲೂ 14 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳ ಸಾವೇ ಹೆಚ್ಚಿದೆ, ಹಾಗಾಗಿ ಎಲ್ಲರೂ ರಸ್ತೆ ನಿಯಮಗಳನ್ನು ಪಾಲಿಸಿ ಎಂದರು.
ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು, ದ್ವಿಚಕ್ರ ವಾಹನದಲ್ಲಿ ಇಬ್ಬರು ಮಾತ್ರ ಕೂರಬೇಕು, ಕಾರು ಚಲಿಸುವಾಗ ಸೀಟ್ ಬೆಲ್ಟ್ ಧರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ಸಾಹೇಬ್ ಗೌಡ ಮಾತನಾಡಿ, ಭಾರತ ಯುವಜನರ ದೇಶವಾಗಿದೆ, ಅದ್ದರಿಂದ ಯುವಕರು ರಸ್ತೆ ನಿಯಮಗಳನ್ನು ಪಾಲಿಸಿ ತಮ್ಮ ಜೀವವನ್ನು ರಕ್ಷಿಸಿಕೊಳ್ಳಿ ಎಂದರು. ಇದೇ ವೇಳೆ 18 ವರ್ಷ ವಯಸ್ಸು ಆಗುವವರೆಗೂ ವಾಹನ ಚಾಲನೆ ಮಾಡುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ನಂತರ ವಾಹನ ಚಾಲನೆ ಮಾಡುವಾಗ ಆಗುವ ರಸ್ತೆ ಅಪಘಾತ ಕುರಿತು ಕಿರುಚಿತ್ರ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಬಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕ್ಷಕ ಎಂ ಜಿ ಎನ್ ಪ್ರಸಾದ್, ಸಂತೋಷ್, ಮೋಟಾರು ವಾಹನ ನಿರಿಕ್ಷಕ ಕೆ.ಜವರಯ್ಯ, ಮಾಂಡವ್ಯ ಕಾಲೇಜಿ ಪ್ರಾಂಶುಪಾಲ ಚಂದ್ರಶೇಖರ್, ಉಪನ್ಯಾಸಕ ಸಿದ್ದರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.