ದೆಹಲಿ ನ್ಯಾಯಾಲಯದ ಆವರಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮೇಲೆ ಹಲ್ಲೆ ನಡೆಸಿದ್ದ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು, ತಮ್ಮೊಂದಿಗೂ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಕೇಜ್ರಿವಾಲ್ ಅವರು ದೆಹಲಿಯ ರೂಸ್ ಅವೆನ್ಯೂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತರುತ್ತಿದ್ದಾಗ ಸಹಾಯಕ ಪೊಲೀಸ್ ಕಮಿಷನರ್ ಎ.ಕೆ ಸಿಂಗ್ ಅವರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ತಿಳಿಸಿದ್ದಾರೆ. ಆ ಅಧಿಕಾರಿಯನ್ನು ತಮ್ಮ ಭದ್ರತಾ ತಂಡದಿಂದ ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ.
ಕಳೆದ ವರ್ಷ ಇದೇ ನ್ಯಾಯಾಲಯದ ಆವರಣದಲ್ಲಿ ಪತ್ರಕರ್ತರು ಪ್ರಶ್ನೆ ಕೇಳುತ್ತಿದ್ದಾಗ ಸಿಸೋಡಿಯಾ ಅವರನ್ನು ಕುತ್ತಿಗೆಗೆ ಬಿಗಿದು ನಿಲ್ಲಿಸಿದ ಆರೋಪಕ್ಕೆ ಇದೇ ಎ.ಕೆ ಸಿಂಗ್ ಅವರು ಗುರಿಯಾಗಿದ್ದರು. ಆ ಕೃತ್ಯವು ವಿಡಿಯೋದಲ್ಲಿ ಸೆರೆಯಾಗಿತ್ತು. ಸಿಸೋಡಿಯಾ ಅವರು ಲಿಖಿತ ದೂರು ದಾಖಲಿಸಿದ್ದರು. ಆದರೆ, ದೆಹಲಿ ಪೊಲೀಸರು ಆ ತಪ್ಪನ್ನು ನಿರಾಕರಿಸಿದ್ದರು. ಅಲ್ಲದೆ, ವೀಡಿಯೊದಲ್ಲಿ ತೋರಿಸಿರುವ ದೃಶ್ಯವು ಭದ್ರತೆಗೆ ಅಗತ್ಯವಾಗಿತ್ತು ಎಂದು ಪೊಲೀಸರು ಹೇಳಿದ್ದರು.
ಕಳೆದ ವರ್ಷ ಫೆಬ್ರವರಿಯಲ್ಲಿ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಬಂಧಿಸಿದ್ದ ಇಡಿ, ಇದೀಗ ಗುರುವಾರ ರಾತ್ರಿ ಕೇಜ್ರಿವಾಲ್ ಅವರನ್ನು ಬಂಧಿಸಿದೆ. ಬಂಧನಕ್ಕೊಳಗಾದ ದೇಶದ ಮೊದಲ ಹಾಲಿ ಮುಖ್ಯಮಂತ್ರಿ ಕೇಜ್ರಿವಾಲ್ ಆಗಿದ್ದಾರೆ. ಕೇಜ್ರಿವಾಲ್ ಅವರನ್ನು ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಅವರನ್ನು ಏಳು ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿದೆ.
ಇಡಿ ಪ್ರಕಾರ, ಪ್ರಕರಣದಲ್ಲಿ 600 ಕೋಟಿ ರೂ. ಅವ್ಯವಹಾರ ನಡೆದಿದೆ. ದೆಹಲಿ ಅಬಕಾರಿ ನೀತಿಯು ಸಗಟು ವ್ಯಾಪಾರಿಗಳಿಗೆ 12% ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಸುಮಾರು 185% ನಷ್ಟು ಲಾಭಾಂಶವನ್ನು ಒದಗಿಸಿದೆ ಎಂದು ಇಡಿ ಹೇಳಿದೆ. 12%ರಲ್ಲಿ 6%ಅನ್ನು ಸಗಟು ವ್ಯಾಪಾರಿಗಳಿಂದ ಎಎಪಿ ನಾಯಕರು ಕಿಕ್ಬ್ಯಾಕ್ ಆಗಿ ವಸೂಲಿ ಮಾಡಲಾಗುತ್ತಿತ್ತು ಎಂದು ಕೂಡ ಇಡಿ ಆರೋಪಿಸಿದೆ.