ಗಣಪತಿ ಪೂಜೆಗೆ ಪ್ರಧಾನಿಯನ್ನು ಮನೆಯೊಳಗೆ ಬಿಟ್ಟುಕೊಂಡ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ನಡೆಯ ಕುರಿತು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ತೀವ್ರ ಕಳವಳ ವ್ಯಕ್ತಪಡಿಸಿದೆ.
ಪ್ರಧಾನಿಯ ಈ ನಡೆ ಸಮಾಜಕ್ಕೆ ಒಯ್ಯುವ ಸಂದೇಶ ಅತ್ಯಂತ ನಕಾರಾತ್ಮಕವಾಗಿರುತ್ತದೆ ದೇಶದ ನ್ಯಾಯಾಂಗದ ಸಾರ್ವಭೌಮತೆಯ ಬಗ್ಗೆ ಜನ ಕಳವಳ ಪಡುವಂತೆ ಅನುಮಾನ ಪಡುವಂತೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಮಂಡ್ಯ ಜಿಲ್ಲಾಧ್ಯಕ್ಷರಾದ ಬಿ ಟಿ ವಿಶ್ವನಾಥ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಧಾನಿಯ ಇಂತಹ ಉಪದ್ವ್ಯಾಪಿ ನಡೆಯನ್ನು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ತೀವ್ರವಾಗಿ ಖಂಡಿಸುತ್ತದೆ. ನ್ಯಾಯಮೂರ್ತಿಗಳು ಇಂತಹ ಬಹಿರಂಗ ನಡವಳಿಕೆಗಳಿಂದ ದಯವಿಟ್ಟು ದೂರವಿರಬೇಕೆಂದು ಅವರು ಆಗ್ರಹಿಸಿದ್ದಾರೆ.
ಕೋಮುದಳ್ಳುರಿಯಿಂದ ಮಂಡ್ಯ ಜಿಲ್ಲೆಯನ್ನು ರಕ್ಷಿಸಿ
ನಿರುದ್ಯೋಗ, ಹೆಣ್ಣುಭ್ರೂಣ ಹತ್ಯೆ, ಬಾಲ್ಯ ವಿವಾಹಗಳಂತಹ ಸಾಮಾಜಿಕ ರಾಜಕೀಯ ಆಡಳಿತಾತ್ಮಕ ಸಮಸ್ಯೆಗಳಿಂದ ನರಳುತ್ತಿರುವ ಮಂಡ್ಯ ಜಿಲ್ಲೆ ಕೋಮುದಳ್ಳುರಿಯಿಂದ ನಲುಗಲು ಅವಕಾಶವಾಗದಂತೆ ರಕ್ಷಿಸಲು ಮಂಡ್ಯ ಜಿಲ್ಲೆಯ ಎಲ್ಲಾ ಧರ್ಮ ಜಾತಿಗಳ ಎಲ್ಲ ರಾಜಕೀಯ ಪಕ್ಷಗಳ ಕಾರ್ಯಕರ್ತರು, ನಾಯಕರು, ಯುವ ಜನತೆ ಸಾರ್ವಜನಿಕರನ್ನು ಮುಂದಾಗಬೇಕೆಂದು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಮನವಿ ಮಾಡಿದೆ.
ಕರ್ನಾಟಕದ ಬುದ್ದಿವಂತರ ಜಿಲ್ಲೆಗಳಿಗೆ ಸೀಮಿತವಾಗಿದ್ದ ಈ ಕಾಯಿಲೆ ಕೋಮು ಸೌಹಾರ್ದಕ್ಕೆ ಹೆಸರಾದ ಮಂಡ್ಯ ಜಿಲ್ಲೆಗೆ ವ್ಯಾಪಿಸಲು ಜಿಲ್ಲೆಯ ಹೆಸರಿಗೆ ಕಪ್ಪು ಮಸಿ ಬಳಿಯಲು ಹೊರಟ ಎಲ್ಲಾ ರಾಜಕೀಯ ಧಾರ್ಮಿಕ ಕಿಡಿಗೇಡಿಗಳನ್ನು ಮುಲಾಜಿಲ್ಲದೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಒತ್ತಾಯಿಸುತ್ತದೆ ಎಂದು ನ್ಯಾಯವಾದಿ ಬಿ.ಟಿ ವಿಶ್ವನಾಥ್ ತಿಳಿಸಿದ್ದಾರೆ.