ಸಂಸದೆ ಸುಮಲತಾ ಅಂಬರೀಶ್ ಅವರ ಜನ್ಮದಿನದ ಅಂಗವಾಗಿ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ವತಿಯಿಂದ ಮನೆ- ಮನಗಳಲ್ಲಿ ಅಂಬರೀಶಣ್ಣ ಎಂಬ ವಿಶಿಷ್ಠ- ವಿನೂತನ ಕಾರ್ಯಕ್ರಮ ನಡೆಯಿತು.
ಮಂಡ್ಯದ ಅಶೋಕನಗರದ ವಿವೇಕಾನಂದ ಜೋಡಿ ರಸ್ತೆಯಲ್ಲಿರುವ ಸುಮಲತಾ ಅಂಬರೀಶ್ ಅವರ ಸಂಸದರ ನಿಧಿಯಿಂದ ನಿರ್ಮಿಸಲಾಗಿರುವ ಬಸ್ ನಿಲ್ದಾಣದ ಬಳಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಪೌರ ಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಲಾಯಿತು.
ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ಮಾತನಾಡಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿರುವ ಖ್ಯಾತ ಪಂಚಭಾಷಾ ನಟಿ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ದೇಶದ ಇತಿಹಾಸ ಸೃಷ್ಟಿ ಮಾಡಿದ್ದಾರೆ ಎಂದು ಹೇಳಿದರು.
ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ಬರೆಯಲು ಅನುಕೂಲವಾಗುವಂತೆ ಸದನದಲ್ಲಿ ಚರ್ಚೆ ಮಾಡಿದ್ದಾರೆ. ಜನರ ಸಮಸ್ಯೆಗಳು,ಪೌರಕಾರ್ಮಿಕರ ಸಮಸ್ಯೆಗಳು,ಆಶಾ ಕಾರ್ಯಕರ್ತರ ಸಮಸ್ಯೆಗಳು ಸೇರಿದಂತೆ ದಿಶಾ ಸಮಿತಿ ಸಭೆಯ ಮೀಟಿಂಗ್ ಅನ್ನು ಹೆಚ್ಚು ನಡೆಸುವ ಮೂಲಕ ದೇಶದ ಸಂಸದರಲ್ಲಿಪ್ರಥಮ ಸ್ಥಾನದಲ್ಲಿ ಇದ್ದಾರೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ 3೦೦ ಕೋಟಿ ಅನುದಾನ ತಂದು ಕೆಲಸ ಮಾಡಿಸಿದ್ದಾರೆ. ಸಂಸದರ ನಿಧಿಯನ್ನು ಬಳಕೆ ಮಾಡುವಲ್ಲಿ ದೇಶದ ಮಹಿಳಾ ಪ್ರತಿನಿಧಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಒಳ್ಳೆಯ ಭವಿಷ್ಯವಿದೆ. ನಿಮ್ಮೆಲ್ಲರ ಆಶೀರ್ವಾದ ಅವರ ಮೇಲೆ ಇರಲಿ ಎಂದು ಹುಟ್ಟುಹಬ್ಬದ ಅಂಗವಾಗಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಮುಡಾ ಮಾಜಿ ಅಧ್ಯಕ್ಷ ಮುನಾವರ್ ಖಾನ್, ನಗರಸಭಾ ಸದಸ್ಯ ನಯೀಮ್, ಮಹದೇವು, ಮಧು, ಬಸವರಾಜು, ಪುಟ್ಟಸ್ವಾಮಿ, ಹೊಂಬಯ್ಯ,ಸತೀಶ, ಪ್ರತಾಪ್, ಸೇರಿದಂತೆ ಇತರರು ಹಾಜರಿದ್ದರು. ಸಂಸದೆ ಸುಮಲತಾ ಅಂಬರೀಶ್ ಅವರ ಹುಟ್ಟುಹಬ್ಬದ ಅಂಗವಾಗಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.