ಸುಮಲತಾ ಅಂಬರೀಷ್ ಅವರು ಸಂಸದೆಯಾಗಲು ಜಿಲ್ಲೆಯ ಕಾಂಗ್ರೆಸ್ ನಾಯಕರಾದ ಚಲುವರಾಯಸ್ವಾಮಿ, ರಮೇಶ್ ಬಾಬು ಮತ್ತಿತರ ನಾಯಕರು ಕಾರಣರಾಗಿದ್ದಾರೆ. ಈಗ ಅವರಿಗೆ ನಂಬಿಕೆ ದ್ರೋಹ ಮಾಡಿ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆಯಾಗಲು ಮುಂದಾಗಿದ್ದಾರೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಪಂಪಿನ ಹೊಸಹಳ್ಳಿ ಗ್ರಾಮದ ಮುಖ್ಯ ರಸ್ತೆ ಡಾಂಬರೀಕರಣ, ಸ್ಮಶಾನ ರಸ್ತೆ ಕಾಮಗಾರಿ ಹಾಗೂ ಬಸ್ ನಿಲ್ದಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಹಾಗೂ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ಮೈತ್ರಿ ಸರ್ಕಾರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಣದಲ್ಲಿದ್ದರೂ ಪಕ್ಷದ ಸಿದ್ದಾಂತ ಹಾಗೂ ನಾಯಕರ ಆಜ್ಞೆಯನ್ನು ಧಿಕ್ಕರಿಸಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ನೀಡಿದ್ದರು. ಆದರೆ ಈಗ ಸುಮಲತಾ ಬಿಜೆಪಿ ಸೇರ್ಪಡೆಗೊಳ್ಳುವ ಮೂಲಕ ಕಾಂಗ್ರೆಸ್ಗೆ ಮೋಸ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಪಾಠ ಕಲಿಯಬೇಕು. ಬೆಂಬಲ ನೀಡಿ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸುಮಲತಾ ಅವರು ಅಂಬರೀಷ್ ಅವರ ಅನುಕಂಪದ ಮೇಲೆ ಜಯ ಸಾಧಿಸಿದ್ದರು. ಸುಮಲತಾ ಅವರಿಗೆ ಭವಿಷ್ಯದ ದಿನಗಳಲ್ಲಿ ರಾಜಕೀಯ ನೆಲೆ ಬೇಕು. ಆದ್ದರಿಂದ ಬಿಜೆಪಿ ಸೇರ್ಪಡೆಯಾಗಲು ಮುಂದಾಗಿದ್ದಾರೆ ಎಂದು ಟೀಕಿಸಿದರು.