ಬಿಜೆಪಿ ಪಕ್ಷಕ್ಕೆ ಎನ್ ಮಹೇಶ್ ಜೀತದಾಳಾಗಿ ದುಡಿಯುತ್ತಿದ್ದಾರೆ, 101 ಪ್ರಶ್ನೆ ಮಾಡಿದ್ದ ಮಹೇಶ್ ಅವರು ಬಿಜೆಪಿ ಸರ್ಕಾರದಲ್ಲಿ ಕೇವಲ ಒಂದು ಪ್ರಶ್ನೆಗೆ ಉತ್ತರವನ್ನು ಪಡೆದುಕೊಂಡಿಲ್ಲ ಎಂದು ದಲಿತ ಮುಖಂಡರು ಕಿಡಿಕಾರಿದ್ದಾರೆ.
ಮಳವಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಸಾಗ್ಯ ಕೆಂಪಯ್ಯ, ಹಣಕ್ಕಾಗಿ ಹಾಗೂ ಸ್ವಾರ್ಥಕ್ಕಾಗಿ ರಾಜ್ಯದ ದಲಿತರನ್ನು ಬೀದಿಗೆ ತಳ್ಳಿ, ಅವಮಾನ ಮಾಡಿರುವ ನಿಮಗೆ ಭೀಮಾ ಸಮಾವೇಶ ಮಾಡುವ ನೈತಿಕತೆ ಇಲ್ಲ, ಮಹೇಶ್ ರವರ ನಾಟಕವನ್ನು ರಾಜ್ಯದ ಜನರು ಕಂಡಿದ್ದಾರೆಂದು ದೂರಿದರು.
ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರು ದಕ್ಷ ಆಡಳಿತಗಾರರಾಗುವುದರ ಜೊತೆಗೆ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷರಾಗಿ ದಲಿತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಆದರೆ ಎನ್.ಮಹೇಶ್ ಕೋಮುವಾದಿಗಳ ಜೊತೆ ಸೇರಿ ದಲಿತರನ್ನು ದಾರಿ ತಪ್ಪಿಸುತ್ತಿದ್ದಾರೆಂದು ಕಿಡಿಕಾರಿದರು.
ಎಸ್ಸಿಎಸ್ಟಿ ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಶಾಂತರಾಜು ಮಾತನಾಡಿ, ಕೊಳ್ಳೇಗಾಲ ಕ್ಷೇತ್ರದ ಮಾಜಿ ಶಾಸಕ ಎನ್ ಮಹೇಶ್ ಮದ್ದೂರಿನಲ್ಲಿ ನಡೆದ ಭೀಮಾ ಸಮಾವೇಶದಲ್ಲಿ, ಭೂ ಸುಧಾರಣೆ ಕಾಯ್ದೆಯಲ್ಲಿ ಕಾಂಗ್ರೆಸ್ ಪಾತ್ರ ಏನು ಇಲ್ಲ ಎಂದು ಸುಳ್ಳು ಹೇಳಿದ್ದಾರೆ, ದೇಶದ ಭವಿಷ್ಯವನ್ನು ಕಟ್ಟಿರುವುದು ಕಾಂಗ್ರೆಸ್ ಪಕ್ಷ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು, ವಿದ್ಯಾವಂತ ಮಾಜಿ ಶಾಸಕರಾಗಿರುವ ಅವರು ಸುಳ್ಳು ಹೇಳುವುದನ್ನು ಬಿಡಬೇಕು, ಮುಂದುವರೆಸಿದರೇ ಕಾಂಗ್ರೆಸ್ ಪಕ್ಷದಿಂದ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಪರಿಷತ್ ಮಾಜಿ ಸದಸ್ಯ ಜಯರಾಜು, ತಾ.ಪಂ ಮಾಜಿ ಉಪಾಧ್ಯಕ್ಷ ಸಿ.ಮಾಧು, ಪುರಸಭೆ ಮಾಜಿ ಸದಸ್ಯ ಕಿರಣ್ಶಂಕರ್, ರವಿಂದ್ರ ಕುಮಾರ್, ಪ್ರಭುಲಿಂಗು ಮಹದೇವಯ್ಯ ಸೇರಿದಂತೆ ಮತ್ತಿತರರಿದ್ದರು.