ನಾವು ದಿನದಿನ್ಯ ನೀರು ಕುಡಿಯುವಾಗ, ಕರೆಂಟ್ ಹಾಕುವಾಗ, ಊಟ ಮಾಡುವಾಗ ನೆನಪು ಮಾಡಿಕೊಳ್ಳಬೇಕಾಗ ಏಕೈಕ ವ್ಯಕ್ತಿಯೆಂದರೆ ಅನ್ನದಾತ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಗಲ ಎಂ.ಸಿ.ಲಂಕೇಶ್ ಸ್ಮರಿಸಿದರು.
ಮಂಡ್ಯನಗರದ ಹೊಸಹಳ್ಳಿಯಲ್ಲಿ ಕೌಶಲ್ಯ ಯುವತಿ ಮತ್ತು ಮಹಿಳಾ ಮಂಡಳಿ ವತಿಯಿಂದ ನಡೆದ ನಾಲ್ವಡಿಯವರ 140ನೇ ಜನ್ಮ ದಿನಾಚರಣೆ ಹಾಗೂ ಝುನ್ಸಿ ರಾಣಿ ಲಕ್ಷ್ಮೀಬಾಯಿಯವರ ಹುಟ್ಟುಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಕಡ್ಡಾಯ ಶಿಕ್ಷಣ, ಉದ್ಯೋಗ ಹಕ್ಕು ಕಲ್ಪಿಸಿದ ಮಹಾನ್ ವ್ಯಕ್ತಿ ನಾಲ್ವಡಿ ಹಾಗೂ ಮಹಿಳೆಯರಿಗೆ ಮಾರಕವಾಗಿದ್ದ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಿದ ರಾಜರೆಂದರೆ ಅದು ನಾಲ್ವಡಿಯವರು ಎಂದರು.
ಆರೋಗ್ಯ, ಲಲಿತಾ, ಕಲೆ, ಶಿಕ್ಷಣ, ನೀರಾವರಿ ವಿಚಾರಗಳಿಗೆ ಹೆಚ್ಚಿನ ಒತ್ತು ಕೊಟ್ಟು ನಾಡಿನೆಲ್ಲಡೆ ಕಾರ್ಖಾನೆಗಳನ್ನು ತೆರೆದು ಕೃಷಿ ಹಾಗೂ ನೀರಾವರಿಗೆ ಅಣೆಕಟ್ಟೆದಗಳನ್ನು ಕಟ್ಟಿಸಿ, ಆರ್ಥಿಕಾಭಿವೃದ್ದಿಗೆ ಬ್ಯಾಂಕುಗಳನ್ನು ಸ್ಥಾಪಿಸಿದರು. ವೈದ್ಯಕೀಯ ಸೇವೆಗಾಗಿ ಆಸ್ಪತ್ರೆಗಳನ್ನು ತೆರೆದು, ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಆಧುನಿಕ ಇತಿಹಾಸದಲ್ಲಿ ಸುವರ್ಣಯುಗವನ್ನು ನಿರ್ಮಿಸಿದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅಜರಾಮರಾಗಿದ್ದಾರೆ ಎಂದರು.
ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಕೆಂಪರಾಜು ಮಾತನಾಡಿ, ಒಬ್ಬ ಪುರುಷನ ಹಿಂದೆ ಓರ್ವ ಮಹಿಳೆ ಇರುತ್ತಾರೆ. ನಾಲ್ವಡಿಯವರ ಹಿಂದೆ ಅವರ ತಾಯಿ ಕೆಂಪನಂಜಮ್ಮಣಿ ಹಾಗೂ ಅವರ ಪತ್ನಿ ಇರುವುದನ್ನು ಕಾಣಬಹುದು ಎಂದರು.
ಕನ್ನಂಬಾಡಿ ನಿರ್ಮಾಣದ ಸಂದರ್ಭದಲ್ಲಿ ಹಣದ ಕೊರೆತೆ ಎದುರಾದಾಗ ಅರಮನೆಯ ಚಿನ್ನದ ಒಡವೆಗಳ ಜೊತೆಗೆ ತಮ್ಮ ಮೈ ಮೇಲಿದ್ದಂತಹ ಚಿನ್ನಾಭರಣಗಳನ್ನು ನೀಡಿ, ಅಣೆಕಟ್ಟೆಯು ಪೂರ್ಣಗೊಳ್ಳಲು ಕೊಡುಗೆ ನೀಡಿದ ಕೀರ್ತಿ ನಾಲ್ವಡಿಯವರ ಪತ್ನಿಯವರಿಗೆ ಸಲ್ಲುತ್ತದೆ ಎಂದರು.
1850ರ ದಶಕದಲ್ಲಿ ಅಪ್ರತಿಮ ಮಹಿಳೆಯಾಗಿ ಝುನ್ಸಿ ರಾಣಿ ಲಕ್ಷ್ಮಿಬಾಯಿವರು ಬ್ರಿಟಿಷರ ವಿರುದ್ದ ಹೋರಾಟ ಮಾಡಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕೌಶಲ್ಯ ಯುವತಿ ಮತ್ತು ಮಹಿಳಾ ಮಂಡಳಿ ಅಧ್ಯಕ್ಷರಾದ ವಿಜಯ ನಾಗಣ್ಣ ಅಧ್ಯಕ್ಷತೆ ವಹಿಸಿದ್ದರು. ಮಮತ ಸ್ವಾಗತಿ, ಉಷಾ ನಿರೂಪಿಸಿ, ಕಾರ್ಯದರ್ಶಿ ಅರುಣ ಕೆಂಪರಾಜು ವಂದಿಸಿದರು. ಮಂಡಳಿ ಸದಸ್ಯರು ಭಾಗವಹಿಸಿದ್ದರು.