ಹುಟ್ಟುತ್ತಾ ವಿಶ್ವ ಮಾನವರಾಗುತ್ತಾರೆ, ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ. ನಾರಾಯಣ ಗುರು ವಿಶ್ವಮಾನವರಾದವರು. ಜಾತಿ, ಧರ್ಮ ಮೀರಿ ಬೆಳೆದವರು. ಬುದ್ಧ, ಬಸವ, ಕನಕದಾಸ ಎಲ್ಲರೂ ಒಂದೇ ಎಂಬ ಕನಸನ್ನು ನಾರಾಯಣ ಗುರು ಕಂಡರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಆರ್ಯ ಈಡಿಗ ಸಮಾವೇಶದಲ್ಲಿ ಮಾತನಾಡಿದ ಅವರು, ಎಲ್ಲ ಧರ್ಮಗಳು ಕೂಡ ಮನುಷ್ಯತ್ವವನ್ನೇ ಹೇಳುತ್ತವೆ. ದಯವೇ ಧರ್ಮವೇ ಮೂಲ ಎಂದು ಬಸವಣ್ಣನವರು ಹೇಳಿದರು. ಧರ್ಮ ಎಂಬುದು ಯಾರೋ ಒಬ್ಬರ ಸ್ವತ್ತಲ್ಲ, ಜನಕ್ಕಾಗಿ ಧರ್ಮ, ಧರ್ಮಕ್ಕಾಗಿ ಜನರಲ್ಲ ಎಂಬುದನ್ನು ನಾರಾಯಣ ಗುರು ಹೇಳಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.
“ನಾರಾಯಣ ಗುರುಗಳ ವಿಚಾರಗಳು ಇಂದಿಗೂ ಪ್ರಸ್ತುತ, ನಾಳೆಗೂ ಪ್ರಸ್ತುತ. ಜನರನ್ನು ಒಗ್ಗೂಡಿಸುವ ಮೂಲಕ ಸಾಮಾಜಿಕವಾಗಿ ಹಿಂದುಳಿದವರಿಗಾಗಿ ಶ್ರಮಿಸಿದವರು. ಒಂದೇ ಜಾತಿ, ಒಂದೇ ಮತ, ಒಂದೇ ದೇವರ ಜಾತಿ ವ್ಯವಸ್ಥೆಯನ್ನು ತಂದರು. ಕೇರಳದಲ್ಲಿ ಅವರನ್ನು ದೇವಾಲಯಕ್ಕೆ ಸೇರಲು ಬಿಡುತ್ತಿರಲಿಲ್ಲ. ದೇವರು ಎಲ್ಲರಿಗೂ ಒಂದೇ. ನೀವೇ ಒಂದು ದೇವಾಸ್ಥಾನ ಕಟ್ಟಿಕೊಂಡು ನೀವೇ ಪೂಜೆ ಮಾಡಿ” ಎಂದು ಹೊಸ ಚಳುವಳಿಯನ್ನೇ ರೂಪಿಸಿದರು .
“ಶೈಕ್ಷಣಿಕ, ಸಾಮಾಜಿಕ ಅಸಮಾನತೆ ಏಕೆ ಇದೆ ಎಂದರೆ ಶತಶತಮಾನಗಳಿಂದ ಶೂದ್ರ ಸಮಾಜಕ್ಕೆ ಶಿಕ್ಷಣ ಕಲಿಯುವ ಅವಕಾಶ ಇಲ್ಲ. ಬ್ರಿಟಿಷರು ಬಂದ ಮೇಲೆ ಶಿಕ್ಷಣ ಸಿಕ್ಕಿದ್ದು. ಕಾರಕೂನರು(ಗುಮಾಸ್ತ) ಬೇಕಿತ್ತು. ಅದಕ್ಕಾಗಿ ಶಿಕ್ಷಣ ಕೊಟ್ಟರೂ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು” ಎಂದು ಸಿದ್ದರಾಮಯ್ಯ ಹೇಳಿದರು.
“ಜಾತಿ ವ್ಯವಸ್ಥೆಯನ್ನು ಹೋಗಲಾಡಿಸುವ ಸಲುವಾಗಿ ನಾರಾಯಣ ಗುರುಗಳು ಶಿಕ್ಷಣಕ್ಕೆ ಒತ್ತುಕೊಟ್ಟರು. ಶಿಕ್ಷಣದಿಂದ ಮಾತ್ರ ಜವಾಬ್ದಾರಿ ಮನಷ್ಯರಾಗಲು ಸಾಧ್ಯ. ಒಂದೇ ಕುಲ, ಒಂದೇ ಮತ, ಒಂದೇ ಜಾತಿ ಎಂದು ನಾರಾಯಣ ಗುರು ಹೇಳಿದ್ದರು. ಆದರೆ ಈ ತತ್ವ ಇಂದಿಗೂ ಜಾರಿಯಾಗಿಲ್ಲ”ಎಂದು ಬೇಸರ ವ್ಯಕ್ತಪಡಿಸಿದರು.
“ಸ್ವಾತಂತ್ರ ಉಳಿಯಬೇಕಾದರೆ, ಎಲ್ಲರಿಗೂ ಸಿಗಬೇಕಾದರೆ ಸಾಮಾಜಿಕ ಆರ್ಥಿಕ ತಳಹದಿಯ ಮೇಲೆ ರಾಜಕೀಯ ನಿಲ್ಲಬೇಕು. ಇಲ್ಲವಾದರೆ ಈ ಅಸಮಾನತೆ ಇರುವ ಸಮಾಜದಲ್ಲಿ ರಾಜಕೀಯ ಸೌಧವನ್ನು ದ್ವಂಸ ಮಾಡುತ್ತಾರೆ. ನಾರಾಯಣ ಗುರುಗಳನ್ನು ಏಕೆ ಪೂಜೆಸುತ್ತೇವೆ? ಈಡಿಗರಲ್ಲಿ ಹುಟ್ಟಿದರು ಅಂತಾನಾ? ಕನಕದಾಸರನ್ನು ಗೌರವಿಸುವುದು ಅವರು ಕುರುಬರು ಅಂತ ಗೌರವಿಸುತ್ತೇವೆ ಅಂತಾನಾ? ಬಸವಣ್ಣನವರನ್ನು ಬ್ರಾಹ್ಮಣರನ್ನು ಅಂತಾನಾ? ಇಲ್ಲ. ಇವರೆಲ್ಲ ಬದಲಾವಣೆಗಳನ್ನು ತರಲು ಪ್ರಯತ್ನ ಮಾಡಿದರು” ಎಂದು ಸಿದ್ದರಾಮಯ್ಯ ಹೇಳಿದರು.
“ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದರು. ಜಾಲಪ್ಪನವರು, ಜನಾರ್ದನ್ ಪೂಜಾರಿ ಇದ್ದರು. ರಾಜ್ ಕುಮಾರ್ ಇದ್ದರು. ಅಷ್ಟಕ್ಕೆ ಸೀಮಿತವಾಗಬಾರದು. ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ನಾರಾಯಣ ಗುರು, ಕನಕದಾಸರು ಹೇಳಿದ ಮಾರ್ಗದಲ್ಲಿ ನಾವು ಸಾಗಬೇಕು. ಅಂಬೇಡ್ಕರ್ ಹೇಳಿದಂತೆ ನಾವು ಹೋರಾಟವನ್ನು ಬದಲಾವಣೆ ಮಾತ್ರ ತರಲು ಸಾಧ್ಯ. ಸ್ವಾತಂತ್ರ ಬಂದು 75 ವರ್ಷಗಳಾಯಿತು. ನಾವು ಎಲ್ಲಿದ್ದೇವೆ, ಏನಾಗಿದ್ದೇವೆ? ಮುಖ್ಯವಾಹಿನಿಗಳಿಗೆ ಬರಬೇಕೆಂದರೆ ಏನು ಮಾಡಬೇಕು? ಇಂತಹ ಚರ್ಚೆ ಮಾಡಲು ಇಂತಹ ಕಾರ್ಯಕ್ರಮ ಅಗತ್ಯ. ಅದಕ್ಕಾಗಿ ಶಿಕ್ಷಣ ಪಡೆಯಬೇಕು. ಈ ಸಮಾಜದಿಂದ ನಾವು ಮೇಲೆ ಬಂದಾಗ ಸಮಾಜದ ಋಣವನ್ನು ತೀರಿಸುವ ಕೆಲಸ ಮಾಡಬೇಕು. ಸಮಾಜದ ಋಣದಿಂದಾಗಿ ಈ ಎತ್ತರಕ್ಕೆ ಬಂದಿದ್ದೇವೆ”ಎಂದು ಹೇಳಿದರು.
“ಆರ್ಯ ಈಡಿಗ ಸಮಾವೇಶವನ್ನು ಆಗ ಜಾಲಪ್ಪನವರು ನಡೆಸಿದ್ದಾಗ ದೇವೇಗೌಡರು ಭಾಗವಹಿಸಿದ್ದರು. ಅನೇಕ ಬೇಡಿಕೆಗಳನ್ನು ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ನಾವು ಚರ್ಚೆ ಮಾಡಿದ್ದೆವು. ಈಗ ಬೆಳಗಾವಿಯಲ್ಲಿ ಸಮಾವೇಶ ನಡೆಯುತ್ತಿರುವುದರಿಂದ ಯಾವುದೇ ಭರವಸೆಯನ್ನು ನೀಡಲು ಸಾಧ್ಯವಿಲ್ಲ. ಆದರೆ ಸಮಾವೇಶ ಮುಗಿದ ಮೇಲೆ ನನ್ನನ್ನು ಭೇಟಿಯಾಗಿ ಎಂದು ಸಮುದಾಯದ ಮುಖಂಡರಿಗೆ ತಿಳಿಸಿದ್ದೇನೆ. ಎಲ್ಲ ಮನವಿಗಳನ್ನು ಈಡೇರಿಸುತ್ತೇನೆ” ಎಂದು ಮುಖ್ಯಮಂತ್ರಿಗಳು ತಿಳಿಸಿದರು.