ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜಲ ಜೀವನ್ ಮಿಷನ್ ಹೆಸರಿನಲ್ಲಿ ಜನರನ್ನು ಎದುರಿಸಿ ಮೀಟರ್ ಅಳವಡಿಸಿರುವ ನಲ್ಲಿಗಳನ್ನು ಅಳವಡಿಸಲಾಗುತ್ತಿದೆ, ಬೇಡ ಎಂದವರಿಗೆ ಕೇಸ್ ಹಾಕಿಸುವ ಬೆದರಿಕೆ ಹಾಕಲಾಗುತ್ತಿದೆ, ಈ ಮೂಲಕ ಕ್ಷೇತ್ರದಲ್ಲಿ ಅರಾಜಕತೆ ಸೃಷ್ಠಿಯಾಗಿದೆ, ಯಾರು ಹೇಳೂರು ಕೇಳೂರು ಇಲ್ಲವಾಗಿದೆ ಎಂದು ಶಾಸಕ ಅನ್ನದಾನಿ ವಿರುದ್ಧ ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ ವಾಗ್ದಾಳಿ ನಡೆಸಿದರು.
ಮಳವಳ್ಳಿ ತಾಲ್ಲೂಕಿನ ಬಂಡೂರು ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ನಡೆದ ಕಿರುಗಾವಲು ಹೋಬಳಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿಯೇ ಪ್ರಥಮ ಬಾರಿಗೆ 593 ಕೋಟಿ ರೂ.ಗಳ ವೆಚ್ಚ ಹನಿ ನೀರಾವರಿ ಯೋಜನೆಯನ್ನು ತಂದಿದ್ದು ನಾನು, ನಿಮ್ಮ ಸಾಧನೆ ಏನು ಎಂಬುದನ್ನು ಜನರ ಮುಂದಿಡಿ ಎಂದು ಶಾಸಕ ಅನ್ನದಾನಿ ಅವರಿಗೆ ಸವಾಲು ಹಾಕಿದರು.
ನಾನು ಬೇರೆ ಎಲ್ಲಾದರೂ ಮನೆ ಮಾಡಿದ್ದೀನಾ ? ಯಾರದಾದ್ರೂ ಮನೆ ಹಾಳು ಮಾಡಿದ್ದೀನಾ ? ಯಾರ ಮೇಲಾದ್ರೂ ಸುಳ್ಳು ಕೇಸ್ ಹಾಕಿಸಿದ್ದೀನಾ ? ಸುಳ್ಳು ಕೇಸು ಹಾಕಿಸಿ ಕಾರ್ಯಕರ್ತರನ್ನ ಪಕ್ಷಕ್ಕೆ ಸೇರಿಸಿಕೊಂಡಿದ್ದೀನಾ ? ಈ ಹಿಂದೆ ನನ್ನ ಅವಧಿಯಲ್ಲಿ ಆಡಳಿತ ಸುಭದ್ರವಾಗಿತ್ತು. ಆದರೆ ಈಗ ಕ್ಷೇತ್ರದಲ್ಲಿ ಆರಾಜಕತೆ ಉಂಟಾಗಿದೆ, ಇದಕ್ಕೆ ಇಲ್ಲಿನ ಶಾಸಕರೇ ನೇರ ಕಾರಣರಾಗಿದ್ದಾರೆಂದು ಎಂದು ಶಾಸಕ ಅನ್ನದಾನಿ ವಿರುದ್ಧ ಕಿಡಿಕಾರಿದರು.
ಮಳವಳ್ಳಿಯಲ್ಲಿ ಹಿಂದೆ ಆಡಳಿತ ಸುಭದ್ರವಾಗಿತ್ತು. ಆದರೆ ಈಗ ಆಡಳಿತ ಹದಗೆಟ್ಟಿದೆ, ಮಂಡ್ಯ ಜಿಲ್ಲೆಯಲ್ಲಿ ಹಾಲು ಮತ್ತು ನೀರಿನ ಹಗರಣ ನಡೆಸಿದ್ದು ಯಾರು ? ಒಂದು ಹಗರಣ ಜೆಡಿಎಸ್ ಮಾಡಿದ್ದು, ಒಂದು ಹಗರಣ ಬಿಜೆಪಿಗೆ ಸೇರಿದ್ದು, ನಮ್ಮ ತಾಲ್ಲೂಕಿ ವಡ್ಡರಹಳ್ಳಿಯಲ್ಲಿ ಬಿಎಂಎಸ್ ಘಟಕ ಸ್ಥಾಪನೆ ಮಾಡಲಾಗಿತ್ತು, ಅದು ಈಗ ನಡಿತಿದ್ಯಾ ಎಂದು ಪ್ರಶ್ನಿಸಿದರು.
ಶಾಸಕ ಅನ್ನದಾನಿ 5 ವರ್ಷಗಳಲ್ಲಿ ಶಾಸಕ ಅನ್ನದಾನಿ ಮಾಡಿದ ಸಾಧನೆ ಏನು ? ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಕಿರುಗಾವಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಕ್ಷೇತ್ರಕ್ಕೆ ತಂದಿದ್ದು ನಾನು, ಆದರೆ 5 ವರ್ಷದಲ್ಲಿ ಈ ಯೋಜನೆಯಲ್ಲಿ ಏನಾದರೂ ಪ್ರಗತಿ ಆಗಿದ್ಯಾ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಮುಖಂಡರಾದ ಕೆಪಿಸಿಸಿ ಸದಸ್ಯ ಚನ್ನಪಿಳ್ಳೇಕೊಪ್ಪಲು ಸಿದ್ದೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಆರ್ ರಾಮಚಂದ್ರಯ್ಯ, ಸದಸ್ಯರಾದ ಶಕುಂತಲ ಮಲ್ಲಿಕ್, ಸುಜಾತ ಕೆ.ಎಂ.ಪುಟ್ಟು, ವಿಶ್ವಾಸ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಚಿಕ್ಕಲಿಂಗಯ್ಯ, ವಿ.ಪಿ ನಾಗೇಶ್, ಪುಟ್ಟಸ್ವಾಮಿ, ಬ್ಲಾಕ್ ಕಾಂಗ್ರೆಸ್ ಕಾರ್ಯಧ್ಯಕ್ಷ ಮಲ್ಲಯ್ಯ, ತಾಲ್ಲೂಕು ಅಧ್ಯಕ್ಷ ದೇವರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ದ್ಯಾಪೇಗೌಡ, ಮುಖಂಡರಾದ ಖಾಲೀದ್, ಮಸೂದ್,ಕರಿಯಪ್ಪ, ನರೇಂದ್ರ, ಸೇರಿದಂತೆ ಇತರರು ಇದ್ದರು.