ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿ ಮಾಡುವುದಾಗಿ ಘೋಷಿಸಿದೆ, ಹಾಗಾಗಿ ಈ ಯೋಜನೆಯ ಜಾರಿಗಾಗಿ ಶಿಕ್ಷಕ ಮತದಾರರು ದಕ್ಷಿಣ ಶಿಕ್ಷಕರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರನ್ನು ಬೆಂಬಲಿಸುವಂತೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮನವಿ ಮಾಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿಯಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಎದುರಿಸುತ್ತಿದ್ದು ಅವರು ಮೇಲ್ಮನೆಯ ಸಭಾಪತಿಯಾಗುವ ಎಲ್ಲಾ ಅವಕಾಶಗಳಿವೆ. ಹಾಗಾಗಿ ಮತ್ತೊಮ್ಮೆ ಅವರನ್ನು ಶಿಕ್ಷಕ ಬಂಧುಗಳು ಬೆಂಬಲಿಸಬೇಕು. ಶಿಕ್ಷಕರ ಸೇವಾ ಭದ್ರತೆಯನ್ನು ಮುಂದೆ ಸರಿಪಡಿಸಲಿದ್ದು, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷವಾಗಿದೆ ಎಂದರು.
ಮರಿತಿಬ್ಬೇಗೌಡರು ನಾಲ್ಕು ಬಾರಿ ಮೇಲ್ಮನೆ ಪ್ರವೇಶಿಸಿದ್ದು ಹಿರಿಯ ನಾಯಕರಾಗಿದ್ದಾರೆ. ಅವರು ಶಿಕ್ಷಕರ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಆದ್ದರಿಂದ ಮತ್ತೊಮ್ಮೆ ಅವರನ್ನು ಆಯ್ಕೆ ಮಾಡಿ ಸೇವೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ಬಿಜೆಪಿ ಮತ್ತು ಜೆಡಿಎಸ್ ನೇತೃತ್ವದ ಸರಕಾರ ಇದ್ದ ಸಂದರ್ಭದಲ್ಲಿ ಶಿಕ್ಷಕರ ಸಮಸ್ಯೆಗಳು ಬಗೆಹರಿದಿಲ್ಲ. ಹಳೆ ಪಿಂಚಣಿ ನೀತಿ ಬಗ್ಗೆ ಹೋರಾಟ ಮಾಡಲಾಗಿತ್ತು. ಎಪಿಎಂಸಿ ಕಾಯ್ದೆ ವಿಚಾರದಲ್ಲಿ ಬಿಜೆಪಿ ರೈತ ವಿರೋಧಿ ನೀತಿ ಅನುಸರಿಸಿತ್ತು. ಆದರೆ ಕಾಂಗ್ರೆಸ್ ಪಕ್ಷ ರೈತ ಪರ ನಿಂತ ಸರ್ಕಾರವಾಗಿದ್ದು, ಆ ಸಂದರ್ಭದಲ್ಲಿ ಮರಿತಿಬ್ಬೇಗೌಡರು ರೈತ ವಿರೋಧಿ ಕಾಯ್ದೆಯನ್ನು ವಿರೋಧಿಸಿದ್ದರು ಎಂದು ಸ್ಮರಿಸಿದರು.