Friday, September 20, 2024

ಪ್ರಾಯೋಗಿಕ ಆವೃತ್ತಿ

ಲೂಟಿ ಮಾಡುವ ಜೋಡೆತ್ತುಗಳು ಅಮಿತ್ ಶಾ- ನರೇಂದ್ರ ಮೋದಿ: ಮುಖ್ಯಮಂತ್ರಿ ಚಂದ್ರು

“ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಲೂಟಿ ಮಾಡುವ ಜೋಡೆತ್ತುಗಳು” ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಆರೋಪಿಸಿದರು.

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ), ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬುಬೆಳೆಗಾರರ ಸಂಘದ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ನಡೆದ ’ವಿಶ್ವ ರೈತ ದಿನ, ರಾಷ್ಟ್ರೀಯ ರೈತರ ಮಹಾ ಅಧಿವೇಶನ’ದಲ್ಲಿ ಅವರು ಮಾತನಾಡಿದರು.

ಸ್ವಾಮಿನಾಥನ್‌ ವರದಿಯನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು. ಕೋಟಿ ಕೋಟಿ ಲೂಟಿ ಮಾಡಿದವರ ಸಾಲವನ್ನು ಮನ್ನಾ ಮಾಡುವ ನೀವು, ನಮ್ಮ ಸಾಲ ಮನ್ನಾ ಮಾಡಲು ಆಗುತ್ತಿಲ್ಲವೇಕೆ? ಮೋದಿ ಮತ್ತು ಶಾ ಲೂಟಿ ಮಾಡುವ ಜೋಡೆತ್ತುಗಳಾಗಿವೆ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ರಾಜ್ಯದಲ್ಲಿನ ಜೋಡೆತ್ತುಗಳಾಗಿವೆ. ಸಾಲ ಕಟ್ಟಿದರೆ ಬಡ್ಡಿ ಬಿಡುತ್ತಾರಂತೆ. ಈ ಜೋಡೆತ್ತುಗಳು ಕೂಡ ರಾಜ್ಯದ ಪ್ರಗತಿಗಿಲ್ಲ; ಸ್ವಂತದ ಪ್ರಗತಿಗೆ ಮಾತ್ರ ಎಂದು ದೂರಿದರು.

“ಬೆಳೆದವನಿಗೆ ಬೆಲೆ ಇಲ್ಲ. ಕಾರ್ಖಾನೆ ಮಾಲೀಕರು ಉದ್ಧಾರ ಆಗುತ್ತಿದ್ದಾರೆ. ಭತ್ತ ಬೆಳೆಯುತ್ತೇವೆ. ನಮಗೆ ಬೆಲೆ ಸಿಗುವುದಿಲ್ಲ. ಆದರೆ ಮಾಲ್‌ಗಳಲ್ಲಿ ದುಬಾರಿ ಬೆಲೆಗೆ ಅಕ್ಕಿ ಮಾಡುತ್ತಾರೆ. ರಾಗಿ, ಗೋದಿ ಬೆಳೆಯೋರು ನಾವು. ಆದರೆ ಲಾಭ ಯಾರಿಗೋ ಆಗುತ್ತಿದೆ. ಎಪ್ಪತ್ತೈದು ವರ್ಷಗಳಿಂದ ಇದು ನಡೆಯುತ್ತಾ ಬಂದಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸುಮಾರು 65 ಸಕ್ಕರೆ ಕಾರ್ಖಾನೆಗಳು ಇವೆ. ಇವುಗಳಲ್ಲಿ ಅರ್ಧದಷ್ಟು ಕಾರ್ಖಾನೆಗಳು ಎಂಎಲ್‌ಎ, ಎಂಪಿಗಳ ಕೈಯಲ್ಲಿವೆ. ಅವರು ನಮಗೆ ಮೋಸ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳು ಯಾವುವೂ ನಮ್ಮ ಪರವಾಗಿ ಇಲ್ಲ. ಸಾಲವನ್ನು ಕಟ್ಟಿದರೆ ಸಾಲ ಮನ್ನಾ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಾವು ಸಾಲವನ್ನು ಎಲ್ಲಿಂದ ಕಟ್ಟಲಿ? ಬರಗಾಲ, ಅನಾವೃಷ್ಟಿ, ಅನಾವೃಷ್ಟಿಯಿಂದ ರೈತರು ಹಾಳಾಗಿದ್ದಾರೆ. ನಿಮ್ಮಗಳ ಕುತ್ತಿಗೆಗೆ ರೈತರು ನೇಣು ಹಾಕುವ ಸ್ಥಿತಿ ಬರುತ್ತಿದೆ. ನಮ್ಮ ಕುತ್ತಿಗೆಗೆ ನೇಣು ಹಾಕುವ ಸ್ಥಿತಿಯನ್ನು ತರಲಾಗುತ್ತಿದೆ. ವಿಧಾನಸಭೆ, ಲೋಕಸಭೆಯೊಳಗೆ ಹಸಿರು ಶಾಲುಗಳು ಬರಬೇಕಿದೆ ಎಂದು ಗುಡುಗಿದರು.

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಮಾತನಾಡಿ, “ನಲವತ್ತೈದು ಲಕ್ಷ ರೈತರು ಸಾಲಗಾರರಾಗಿದ್ದಾರೆ. ಒಂದು ತಿಂಗಳಲ್ಲಿ ಸಾಲಮನ್ನಾ ಮಾಡಿದ್ದರೆ ಪಾರ್ಲಿಮೆಂಟಿಗೆ ಮುತ್ತಿಗೆ ಹಾಕುತ್ತೇವೆ” ಎಂದು ಎಚ್ಚರಿಸಿದರು.

ಸಾಲಮನ್ನಾ ಮಾಡಬೇಕೆಂಬ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ರೈತರಿಗೆ ಉಚಿತವಾಗಿ ವಿದ್ಯುತ್ ಕೊಡುತ್ತಿದ್ದಾರೆ. ಆದರೆ ವಿದ್ಯುತ್‌ ಖಾಸಗೀಕರಣ ಮಾಡಿ, ರೈತರನ್ನು ಇಕ್ಕಟ್ಟಿಗೆ ಸಿಲುಕಿಸಲು ಯೋಚಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಪಂಜಾಬ್‌ನ ರೈತ ಮುಖಂಡ ಜಗಜಿತ್ ಸಿಂಗ್‌ ದಲೈವಾಲಾ ಮಾತನಾಡಿ, “ಕೇಂದ್ರ ಸರ್ಕಾರ ಸರ್ವಾಧಿಕಾರಿ ನೀತಿ ಅನುಸರಿಸುತ್ತಿದೆ. ಹಿಟ್ಲರ್‌‌ನಂತೆ ಆಡಳಿತ ನಡೆಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

ರೈತರ ಸಾಲಮನ್ನಾ ಮಾಡದೆ, ಉದ್ಯಮಿಗಳ ಸಾಲವನ್ನು ರೈಟ್ ಆಫ್ ಮಾಡುತ್ತಿರುವ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಬೆಂಬಲ ಬೆಲೆ ನೀಡಬೇಕು, ಬರ ಪರಿಹಾರ ನಷ್ಟ ಎಕರೆಗೆ 25,000 ರೂ. ಬಿಡುಗಡೆ ಮಾಡಬೇಕು, 60 ವರ್ಷ ಪೂರೈಸಿದ ರೈತರಿಗೆ ಮಾಸಿಕ 5000 ರೂ. ಪಿಂಚಣಿ ನೀಡಬೇಕು, ರೈತನ ಮಗನನ್ನು ಮದುವೆಯಾಗುವ ವಧುವಿಗೆ ಸರ್ಕಾರಿ ಕೆಲಸದಲ್ಲಿ ಶೇ. 10ರಷ್ಟು ಮೀಸಲಾತಿ ನೀಡುವ ನೀತಿ ಜಾರಿಗೆ ತರಬೇಕು ಎಂಬ ಬೇಡಿಕೆ ಸೇರಿದಂತೆ ಹತ್ತಾರು ಆಗ್ರಹಗಳನ್ನು ಈ ಅಧಿವೇಶನ ಮಾಡಿತು. ಮಾದರಿ ಕೃಷಿಕರಿಗೆ ಇಂಡಿಯನ್ ಅಗ್ರಿಕಲ್ಚರಲ್‌ ಸರ್ವಿಸ್‌ (ಅಂದರೆ ಐಎಎಸ್) ಪ್ರಶಸ್ತಿ ನೀಡಲಾಯಿತು.

ಕೃಪೆ:ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!