ಅಯೋಡಿನ್ ನಿಸರ್ಗದತ್ತವಾಗಿ ದೊರೆಯುವ ಒಂದು ಸೂಕ್ಷ್ಮ ಪೋಷಕಾಂಶ ಇದು ಮನುಷ್ಯನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯಗತ್ಯವಾಗಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಪ್ರಪುಲ್ಲಾ ಹೇಳಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಕೆ ಆರ್ ಸಾಗರದ ಜನತಾ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ಕೆ ಆರ್ ಸಾಗರ್ ಆರೋಗ್ಯ ಕೇಂದ್ರದ ವತಿಯಿಂದ ಆಯೋಜಿಸಿದ್ದ “ರಾಷ್ಟ್ರೀಯ ಅಯೋಡಿನ್ ಕೊರತೆಯ ನ್ಯೂನತೆಗಳ ನಿಯಂತ್ರಣ ದಿನ ಹಾಗೂ ಸಪ್ತಾಹ “ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಉಪ್ಪು ಮಾನವನ ಜೀವನದಲ್ಲಿ ಅಮೂಲ್ಯವಾದ ಒಂದು ನೈಸರ್ಗಿಕ ಪೋಷಕಾಂಶವಾಗಿದೆ ಅಯೋಡಿನ್ ಕೊರತೆಯಿಂದ ಮಕ್ಕಳಲ್ಲಿ ಬುದ್ಧಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಸರಿಪಡಿಸಲಾಗದ ದೈಹಿಕ ಹಾಗೂ ಮಾನಸಿಕ ವಿಕಲತೆ, ಬೆಳವಣಿಗೆಯಲ್ಲಿ ಕುಂಠಿತ, ಕಿವುಡು ಹಾಗೂ ಮೂಕತನ, ಮೆಳ್ಳೆಗಣ್ಣು,ಕುಬ್ಜತನ, ನಡಿಗೆಯಲ್ಲಿ ಸರಿಪಡಿಸಲಾಗದಂತಹ ಲೋಪದೋಷಗಳು ಉಂಟಾಗುತ್ತವೆ ಹಾಗೂ ವಯಸ್ಕರಲ್ಲಿ ಗಳಗಂಡ, ಗೊಗ್ಗರು ದ್ವನಿ, ದೇಹದಲ್ಲಿ ಬಾವು, ಸ್ಥೂಲಕಾಯ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಆದ್ದರಿಂದ ಪ್ರತಿಯೊಬ್ಬರು ದಿನ ನಿತ್ಯದ ಆಹಾರದಲ್ಲಿ ಅಯೋಡಿನ್ ಉಪ್ಪನ್ನೆ ಬಳಸಿರಿ ಮತ್ತು ಅದರ ಕೊರತೆಯಿಂದಾಗುವ ನ್ಯೂನತೆಗಳನ್ನು ತಡೆಗಟ್ಟಿರಿ ಎಂದು ತಾಯಂದಿರಿಗೆ ಸಲಹೆ ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಮಾತನಾಡಿ, ಗರ್ಭಿಣಿಯರಾದಾಗ ಅಯೋಡಿನ್ ಕೊರತೆ ತೀವ್ರವಾಗಿದ್ದರೆ ಹುಟ್ಟುವ ಮಗುವಿನಲ್ಲಿ ದೈಹಿಕ ಮತ್ತು ಮಾನಸಿಕ ವಿಕಲತೆ, ಪದೇ ಪದೆ ಗರ್ಭಪಾತ, ನಿರ್ಜೀವ ಶಿಶುವಿನ ಜನನ ಆಗುತ್ತವೆ ಹಾಗೆಯೇ ಖರೀದಿಸಿದ ಅಯೋಡಿನ್ ಉಪ್ಪನ್ನು ಗಾಳಿ ಬೆಳಕಿಗೆ ತೆರೆದಿಡದೆ ಸುರಕ್ಷಿತವಾಗಿ ರಕ್ಷಿಸಿ ಇಡಬೇಕು. ದಿನನಿತ್ಯ ಆಹಾರದಲ್ಲಿ ಅಯೋಡಿನ್ ಯುಕ್ತ ಉಪ್ಪಿನ ಬಳಕೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದು ಹಾಗೂ ಅಯೋಡಿನ್ ಕೊರತೆಯಿಂದ ಉಂಟಾಗುವ ನ್ಯೂನತೆಗಳನ್ನು ತಡೆಗಟ್ಟಲು ಪ್ರತಿ ವರ್ಷ ಅಕ್ಟೋಬರ್ 21 ರಿಂದ 27 ರವರೆಗೆ ಸಪ್ತಾಹ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದರು
ನಂತರ ಉಪ್ಪು ಪರೀಕ್ಷಾ ಕಿಟ್ ನ ಸಹಾಯದಿಂದ ಉಪ್ಪಿನ ಮಾದರಿ ಪರೀಕ್ಷಿಸಿ ಪ್ರಾತ್ಯಕ್ಷಿಕೆ ಮೂಲಕ ತಾಯಂದಿರಿಗೆ ಗುಣ ಮಟ್ಟದ ಅಯೋಡಿನ್ ಉಪ್ಪಿನ ಬಗ್ಗೆ ತೋರಿಸಿಕೊಟ್ಟರು .
ಈ ವೇಳೆ ಗ್ರಾ ಪಂ ಸದಸ್ಯೆ ರಾಣಿ, ಶಶಿಕಲಾ, ಆಯುಷ್ ವೈದ್ಯ ಸುದೀಪ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಗೀತಾ, ಆರೋಗ್ಯ ನಿರೀಕ್ಷಣಾಧಿಕಾರಿ ರಮ್ಯ, ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಮ್ಮ ಹಾಗೂ ಆಶಾ ಕಾರ್ಯಕರ್ತೆ ಜಯಲಕ್ಷ್ಮೀ, ಲತಾ ಹಾಗೂ ಮಕ್ಕಳ ತಾಯಂದಿರು ಹಾಜರಿದ್ದರು.