ಮಂಡ್ಯ ನಗರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡುವುದಕ್ಕಾಗಿ ಗೆಜಟ್ನಲ್ಲಿ ಘೋಷಿಸಿರುವುದಾಗಿ ಶಾಸಕರಾದ ರವಿಕುಮಾರ್ ಗಣಿಗೆ ಅವರು ತಿಳಿಸಿರುತ್ತಾರೆ. ಮಂಡ್ಯ ಜಿಲ್ಲೆಯಲ್ಲಿ 2000ರಿಂದೀಚೆಗೆ ಆಯ್ಕೆಯಾಗಿ ಬಂದ ಜನಪ್ರತಿನಿಧಿಗಳು ಮಂಡ್ಯ ನಾಗರೀಕರನ್ನು, ರೈತರನ್ನು ವಂಚಿಸುತ್ತಾ, ನಂಬಿಕೆದ್ರೋಹವೆಸಗಿ ಸಾರ್ವಜನಿಕ ಸರ್ಕಾರಿ ಸ್ವತ್ತುಗಳನ್ನು ಮಾರಾಟ ಮಾಡಿ ಅಕ್ರಮ ಲಾಭ ಮಾಡಿಕೊಂಡು ಅವರುಗಳು ಅಭಿವೃದ್ಧಿಯಾಗುತ್ತಿದ್ದಾರೆಯೇ ಹೊರತು, ಮಂಡ್ಯ ನಾಗರೀಕರು ಹಾಗೂ ರೈತರನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವಲ್ಲಿ ವಿಫಲರಾಗಿರುತ್ತಾರೆ ಎಂದು ಅಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಬೂದುನೂರು ಬೊಮ್ಮಯ್ಯ ಆರೋಪಿಸಿದರು.
ಈಗ ಲೋಕಸಭಾ ಚುನಾವಣೆ ಇರುವುದರಿಂದ ಮಂಡ್ಯ ಜಿಲ್ಲೆಯ ಮತದಾರರಿಗೆ ಭರವಸೆ ಮತ್ತು ಆಶ್ವಾಸನೆ ನೀಡಿ ಮತ ಪಡೆಯುವ ಹುನ್ನಾರವಾಗಿರಬಹುದು ಎಂಬ ಅನುಮಾನ ಮಂಡ್ಯ ನಾಗರೀಕರಲ್ಲಿ ಮೂಡಿದೆ. ಏಕೆಂದರೆ, ಇತಿಹಾಸ ಪುಟ ಸೇರಿದ ವಿಷ್ಯಾ ಖಂಡದಲ್ಲೇ 2ನೇಯ ಅತಿ ದೊಡ್ಡ ಕಾರ್ಖಾನೆ ಎಂದು ಪ್ರಸಿದ್ದಿ ಪಡೆದಿದ್ದೆ ದಿ ಮೈಸೂರು ಅಸಿಟೇಟ್ ಕೆಮಿಕಲ್ ಕಾರ್ಖಾನೆಯನ್ನು 2006ರಲ್ಲಿ ಅಂದಿನ ಸರ್ಕಾರ ಕಾನೂನು ವ್ಯಾಪ್ತಿಯೊಳಗೆ ರಹಸ್ಯ ಹರಾಜಿನ ಮೂಲಕ ಕೊಪ್ಪದ ಎಸ್.ಎಂ. ಶುಗರ್ ಕಂಪನಿಗೆ 114 ಎಕರೆ ಸ್ವತ್ತಿನಲ್ಲಿದ್ದ ಕಾರ್ಖಾನೆಗೆ ಸಂಬಂಧಿಸಿದ ಯಂತ್ರೋಪಕರಣಗಳು ಮತ್ತು ಕಟ್ಟಡಗಳು ಸೇರಿದಂತೆ 15.20 ಕೋಟಿ ರೂ.ಗಳಿಗೆ ಮಾರಾಟ ಮಾಡಿತ್ತು. ಎಸ್.ಎಂ. ಶುಗರ್ ಕಂಪನಿಯು ಸದರಿ ಸ್ವತ್ತನ್ನು ಚಿನ್ನಮಸ್ತ ಕಂಪನಿಗೆ ನಾಮಿನಿ ಮಾಡಿ ಚಿನ್ನಮಸ್ತ ಕಂಪನಿಗೆ ನೇರವಾಗಿ ಕ್ರಯ ಮಾಡಿಸಿತ್ತು. ಈಗ ಚಿನ್ನಮಸ್ತ ಕಂಪನಿ ಆ ಸ್ಥಳದಲ್ಲಿ ಕಾವೇರಿ ಸಿರಿ ಎಂಬ ಶೀರ್ಷಿಕೆಯಡಿಯಲ್ಲಿ ನಿವೇಶನ ಮಾಡಿ ಮಾರಾಟ ಮಾಡುತ್ತಿದೆ.
ಮೂಲತಃ ಮೈಷುಗರ್ ಕಾರ್ಖಾನೆಗೆ ಸೇರಿದ ಸ್ವತ್ತಾಗಿದ್ದು, ಕಾರ್ಖಾನೆ ಮುಚ್ಚಿದ ಮೇಲೆ ಬೆಲೆಬಾಳುವ ಸ್ವತ್ತನ್ನು ಮೈಷುಗರ್ ಕಾರ್ಖಾನೆಯ ಸುಪರ್ದಿಗೆ ನೀಡಬೇಕಿತ್ತು ಅಥವಾ ಮಂಡ್ಯ ನಗರಾಭಿವೃದ್ಧಿ ಕಾರ್ಯ ಬಳಸಬಹುದಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಮಹಾರಾಜರು ಕಟ್ಟಿದ ಮಂಡ್ಯ ಕೆರೆಯನ್ನು ಉಳಿಸಿಕೊಂಡು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ 114 ಎಕರೆ ಜಾಗದಲ್ಲಿ ನಿವೇಶನ ನಿರ್ಮಾಣ ಮಾಡಬಹುದಿತ್ತು. ಏಕೆ ಮಾಡಲಿಲ ಜನಪ್ರತಿನಿಧಿಗಳು ಕಾಲಕ್ಕೆ, ಸಮಯಕ್ಕೆ ತಕ್ಕಂತೆ ಮಾತು ಬದಲಾಯಿಸುತ್ತಾರೆ ಎಂದು ಕಿಡಿಕಾರಿದರು.
ಮಾನ್ಯ ಮಂಡ್ಯ ಶಾಸಕರು ಮೈಷುಗರ್ ಕಾರ್ಖಾನೆಯ ಜಾಗದಲ್ಲಿ ಸಾಪ್ಟವೇರ್ ಪಾರ್ಕ್ ಮಾಡುತ್ತೇನೆಂಬ ನೆಪದಲ್ಲಿ ಮಂಡ್ಯದ ಎರಡು ಕಣ್ಣುಗಳಾಗಿದ್ದ ಅಸಿಟೇಟ್ ಫ್ಯಾಕ್ಟರಿಯ ಒಂದು ಕಣ್ಣನ್ನು ಕಳೆದುಕೊಂಡಿದ್ದು ಈಗ ಹಾಲಿ ಇರುವ ಈ ಒಂದು ಕಣ್ಣನ್ನು ಕಿತ್ತುಕೊಂಡು ಷುಗರ್ ಫ್ಯಾಕ್ಟರಿ ಆಸ್ತಿಯನ್ನು ರಿಯಲ್ ಎಸ್ಟೇಟ್ ಕಾರ್ಖಾನೆಗೆ ಮಾರಾಟ ಮಾಡುತ್ತಾರೆಂಬ ಭಯ ನಮ್ಮನ್ನು ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಾನ್ಯ ಮಂಡ್ಯ ಶಾಸಕರು ಮನೆ ಮನೆಯಿಂದ ಮಣ್ಣು ತರುವ ಬಾಲಿಶ ಹೇಳಿಕೆಗಳನ್ನು ನೀಡುವ ಬದಲು ಸರ್ಕಾರದಿಂದ ಹೊನ್ನು ತಂದು ಅತ್ಯಾಧುನಿಕ ತಂತ್ರಜ್ಞಾನದ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಬಿಸಲಿ. ಈಗ ಇರುವ ಸಕ್ಕರೆ ಕಾರ್ಖಾನೆಯ ಜಾಗದಲ್ಲೇ ಹೊಸ ಸಕ್ಕರೆ ಕಾರ್ಖಾನೆಯನ್ನು ನಿರ್ಮಿಸಲಿ, ಸಕ್ಕರೆ ಕಾರ್ಖಾನೆಯ ನಿರ್ಮಾಣ ಪಾರದರ್ಶಕವಾಗಿರಲಿ, ಕಾರ್ಖಾನೆಗೆ ಸ್ಥಳ ಸಾಲದೇ ಹೋದರೆ ಸರ್ಕಾರ ಈ ಹಿಂದೆ ಮಾರಾಟ ಮಾಡಿರುವ ಚಿನ್ನಮಸ್ತ ಕಂಪನಿಯಿಂದ ಕಾನೂನು ವ್ಯಾಪ್ತಿಯೊಳಗೆ ಸಾರ್ವಜನಿಕ ಉದ್ದೇಶಕ್ಕೆ ಭೂಸ್ವಾಧೀನಪಡಿಸಿಕೊಂಡು ಸಕ್ಕರೆ ಕಾರ್ಖಾನೆ ನಿರ್ಮಿಸಲಿ ಎಂದು ಮಂಡ್ಯ ನಾಗರೀಕರು ಮತ್ತು ರೈತರ ಪರವಾಗಿ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಎಎಪಿಯ ಜಿಲ್ಲಾ ಕಾರ್ಯದರ್ಶಿ ಚೆಲುವರಾಜು, ಪುಟ್ಟಸ್ವಾಮಿ, ಮಾಧ್ಯಮ ಉಸ್ತುವಾರಿಯ ದಿನೇಶ್, ಜಿಲ್ಲಾ ತಾಲ್ಲೂಕು ಘಟಕದ ಸುರೇಶ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.