ಇತ್ತೀಚೇಗೆ ಬಿಜೆಪಿಗೆ ಸೇರ್ಪಡೆಯಾಗಿರುವ ಫೈಟರ್ ರವಿ ಅವರ ಬೆಂಬಲಿಗರು ಸೂಕ್ತ ದಾಖಲೆಗಳಿಲ್ಲದೇ ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಲು ಬಂದು ಪತ್ರಕರ್ತರ ಎದುರು ತಬ್ಬಿಬ್ಬಾದ ಘಟನೆ ಇಂದು ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆಯಿತು.
ಸುದ್ದಿಗೋಷ್ಠಿ ಆರಂಭಿಸಿದ ಫೈಟರ್ ರವಿ ಬೆಂಬಲಿಗ ಪವನ್ ಕುಮಾರ್, ನಮ್ಮ ನಾಯಕ ಫೈಟರ್ ರವಿ ಅವರ ಮೇಲೆ ಪ್ರಸ್ತುತ ಯಾವ ಕ್ರಿಮಿನಲ್ ಕೇಸ್ ಗಳು ಇಲ್ಲ ಎಂದು ಸ್ಪಷ್ಟನೆಗೆ ಮುಂದಾದರೂ, ಈ ಸಂದರ್ಭದಲ್ಲಿ ಪ್ರಶ್ನೆ ಮಾಡಿದ ಸುದ್ದಿಗಾರರು, ಫೈಟರ್ ರವಿ ಅವರ ಮೇಲೆ ಈ ಹಿಂದೆ ಯಾವ ಪ್ರಕರಣಗಳಿದ್ದವು ? ಈಗ ಯಾವ ಪ್ರಕರಣಗಳಿಂದ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ ? ದಾಖಲೆ ಕೊಡಿ ಪ್ರಶ್ನಿಸಿದರು. ಇದರಿಂದ ತಬ್ಬಿಬ್ಬಾದ ಚೇತನ್ ಕುಮಾರ್, ಈಗ ದಾಖಲೆಗಳು ನಮ್ಮ ಬಳಿ ಇಲ್ಲ, ಮುಂದಿನ ದಿನಗಳಲ್ಲಿ ಒದಗಿಸಲಾಗುವುದು ಎಂದು ಜಾರಿಕೊಳ್ಳಲು ಮುಂದಾದರು.
ಆದರೆ ಇಷ್ಟಕ್ಕೆ ಸುಮ್ಮನಾಗದ ಸುದ್ದಿಗಾರರೂ ಸೂಕ್ತ ದಾಖಲೆಗಳಿಲ್ಲದೇ ಹೇಗೆ ಸುದ್ದಿಗೋಷ್ಠಿಯಲ್ಲಿ ನಡೆಸಲು ಬಂದಿದ್ದೀರಿ ? ಫೈಟರ್ ರವಿ ಸೇರಿದಂತೆ ಸೈಲೆಂಟ್ ಸುನೀಲ್ ಮತ್ತಿತರರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದರೂ ಬಿಜೆಪಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ ಎಂದು ರಾಜ್ಯ ಮಟ್ಟದಲ್ಲಿಯೇ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಬಿಜೆಪಿ ವಿರುದ್ಧ ಮುಗಿಬಿದ್ದಿವೆ. ಹೀಗಿರುವಾಗ ಯಾವುದೇ ದಾಖಲೆಗಳಿಲ್ಲ ಫೈಟರ್ ರವಿ ಎಲ್ಲಾ ಪ್ರಕರಣಗಳಿಂದ ಖುಲಾಸೆಗೊಂಡಿದ್ಧಾರೆ ಎಂದು ಹೇಗೆ ಸಮರ್ಥಿಸಿಕೊಳ್ಳುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು. ಇದರಿಂದ ಇನ್ನಷ್ಟು ಗಲಿಬಿಲಿಕೊಂಡ ಫೈಟರ್ ರವಿ ಬೆಂಬಲಿಗರು ಮುಂದಿನ ದಿನಗಳಲ್ಲಿ ದಾಖಲೆ ನೀಡುವುದಾಗಿ ತಿಳಿಸಿ ಸುದ್ದಿಗೋಷ್ಠಿ ಮುಕ್ತಾಯಗೊಳಿಸಿ ತೆರಳಿದರು.
ಗೋಷ್ಠಿಯಲ್ಲಿ ಪ್ರವೀಣ್ ಕುಮಾರ್, ಪ್ರಭಾಕರ್, ಎನ್.ಡಿ.ದಾಸಪ್ಪ ಉಪಸ್ಥಿತರಿದ್ದರು.