ದೇಶ ರಕ್ಷಣೆಗಾಗಿ ಮಡಿದ ಸೈನಿಕರ ತ್ಯಾಗ- ಬಲಿದಾನದಿಂದ ನಮ್ಮ ದೇಶದ ತ್ರಿವರ್ಣ ಧ್ವಜ ಹಾರುತ್ತಿದೆ ಎಂದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ ಮಂಡ್ಯ ಹಾಗೂ ಪಟೇಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 4ನೇ ವರ್ಷದ ವೀರಯೋಧ ಆರ್.ಲೋಕೇಶ್ ಪಟೇಲ್ ಜ್ಞಾಪಕಾರ್ಥ ನಡೆದ ವಿದ್ಯಾರ್ಥಿ ಪುರಸ್ಕಾರ ಹಾಗೂ ನಿಂಗಮ್ಮ ಪಟೇಲ್ ಜೋಗಿಗೌಡ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಯಾವ ಸ್ಥಳದಲ್ಲಿ ಎಂತಹ ಧ್ವಜ ಹಾರಾಟ ಮಾಡುತ್ತದೆಯೋ ಅದರ ಆಧಾರದ ಮೇಲೆ ಆ ಭೂಮಿಯನ್ನು ಅವರದು ಎಂದು ಪರಿಗಣಿಸಲಾಗುತ್ತದೆ. ನಮ್ಮ ದೇಶದಲ್ಲಿ ತ್ರಿವರ್ಣ ಧ್ವಜ ಹಾರುತ್ತಿದೆ ಎಂದು ಅದು ಗಾಳಿಯಿಂದಷ್ಟೆ ಹಾರುತ್ತಿಲ್ಲ, ಸೈನಿಕರ ಉಸಿರಿನಿಂದ ಹಾರುತ್ತಿದೆ ಎಂದು ಕೊಳ್ಳಬೇಕು, ದೇಶ ರಕ್ಷಣೆಗೆ ಸೈನಿಕ ತ್ಯಾಗ ಅಪಾರವಾಗಿದೆ, ಅಕಾಲಿಕವಾಗಿ ಸಾವಿಗೀಡಾದ ಸೈನಿಕ ಲೋಕೇಶ್ ಪಟೇಲ್ ಹೆಸರಿನಲ್ಲಿ ಪುರಸ್ಕಾರ ನೀಡುತ್ತಿರುವುದು ಸ್ವಾಗತಾರ್ಹ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಪುರುಷೋತ್ತಮನಂದನಾಥ ಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ ಜಯಪ್ರಕಾಶ್ ಗೌಡ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅರಕಲಗೂಡು ಮಾಜಿ ಶಾಸಕರಾದ ಎ. ಟಿ ರಾಮಸ್ವಾಮಿ ರವರು ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಪ್ರಶಸ್ತಿ ಪ್ರಧಾನ ಮಾಡಿದರು. ನಾಗಮಂಗಲ ತಾಲೂಕು ತಟ್ಟಹಳ್ಳಿ ಗ್ರಾಮದ ಜ್ಯೋತಿ ಮತ್ತು ಟಿ .ಕೆ.ಶಿವರಾಮು ಅವರಿಗೆ ಕೃಷಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪಟೇಲ್ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಡಿ.ಆರ್.ಕಲಾವತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.