ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯುವ ರಾಮ ಮಂದಿರದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಲು ದೇಶದಾದ್ಯಂತ ಸಾವಿರಾರು ಜನರು ಆಹ್ವಾನ ಸ್ವೀಕರಿಸ್ದಾರೆ. ಪ್ರಮುಖ ದಲಿತ ನಾಯಕರು, ರಾಮ ಮಂದಿರ ‘ಕರಸೇವಕರು’ ಮತ್ತು ಹಲವಾರು ಅತಿ ಗಣ್ಯ ವ್ಯಕ್ತಿಗಳ ಕುಟುಂಬಗಳಿಗೆ ಬೃಹತ್ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಸಂದೇಶ ರವಾನಿಸಲಾಗಿದೆ. ಆದರೆ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹೊರತುಪಡಿಸಿ, ದೇಶದ ಇನ್ಯಾವುದೇ ಮುಖ್ಯಮಂತ್ರಿಗಳಿಗೆ ಟ್ರಸ್ಟ್ ಆಹ್ವಾನ ಕಳುಹಿಸಿಲ್ಲ ಎಂದು ಮೂಲಗಳು ತಿಳಿಸಿವೆ.
‘ರಾಮ ಮಂದಿರ ಉದ್ಘಾಟನೆಯಾಗುವ ರಾಜ್ಯವಾದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊರತುಪಡಿಸಿ, ಯಾವುದೇ ಮುಖ್ಯಮಂತ್ರಿಯನ್ನು “ಪ್ರಾಣ ಪ್ರತಿಷ್ಠಾಪನಾ” ಸಮಾರಂಭಕ್ಕೆ ಆಹ್ವಾನಿಸಲಾಗಿಲ್ಲ’ ಎಂದು ಎನ್ಡಿಟಿವಿ ವರದಿ ಮಾಡಿದೆ.
ಕೇಂದ್ರ ಸಚಿವರು ಮತ್ತು ಇತರ ಉನ್ನತ ರಾಜಕೀಯ ನಾಯಕರನ್ನು ಸಹ ಆಹ್ವಾನಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಜನವರಿ 22 ರಂದು ನಡೆಯಲಿರುವ ಸಮಾರಂಭಕ್ಕೆ ಆಹ್ವಾನಿತರಲ್ಲಿ ದಲಿತ ಐಕಾನ್ಗಳಾದ ಬಿ.ಆರ್. ಅಂಬೇಡ್ಕರ್, ಜಗಜೀವನ್ ರಾಮ್, ಕಾನ್ಶಿರಾಮ್ ಅವರ ಕುಟುಂಬದ ಸದಸ್ಯರು ಸೇರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ಕಾರ್ಯಕ್ರಮಕ್ಕೆ ರಾಮ ಜನ್ಮಭೂಮಿ ಆಂದೋಲನದ ಸಂದರ್ಭದಲ್ಲಿ ಮಡಿದ ಕರಸೇವಕರ ಕುಟುಂಬ ಸದಸ್ಯರಿಗೂ ಆಹ್ವಾನ ನೀಡಲಾಗಿದೆ.
ಸುಪ್ರೀಂ ಕೋರ್ಟಿನ ಮೂವರು ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು, ಸೇನೆ, ನೌಕಾಪಡೆ ಮತ್ತು ವಾಯುಪಡೆಯ ನಿವೃತ್ತ ಮುಖ್ಯಸ್ಥರು, ಮಾಜಿ ರಾಯಭಾರಿಗಳು, ಉನ್ನತ ಅಧಿಕಾರಿಗಳು, ಐಪಿಎಸ್ ಅಧಿಕಾರಿಗಳು, ಅತಿ ಗಣ್ಯ ವ್ಯಕ್ತಿಗಳು ಮತ್ತು ನೋಬೆಲ್ ಪ್ರಶಸ್ತಿಯಿಂದ ಗೌರವಿಸಲ್ಪಟ್ಟವರು ಆಹ್ವಾನಿತರ ಪಟ್ಟಿಯಲ್ಲಿದ್ದಾರೆ.
ರಾಮಮಂದಿರ ಕಾರ್ಯಕ್ರಮದ ಆಹ್ವಾನಗಳು ರಾಜಕೀಯ ಗದ್ದಲಕ್ಕೆ ಕಾರಣವಾಗಿದ್ದು, ಸಮಾರಂಭವನ್ನು ತಿರಸ್ಕರಿಸಿದ್ದಕ್ಕಾಗಿ ಕಾಂಗ್ರೆಸ್ ಸೇರಿದಂತೆ ಉಳಿದ ವಿರೋಧ ಪಕ್ಷಗಳನ್ನು ಬಿಜೆಪಿ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಅಧೀರ್ ರಂಜನ್ ಚೌಧರಿ ಅವರು ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಕಾರ್ಯಕ್ರಮವನ್ನು ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ “ರಾಜಕೀಯ ಯೋಜನೆ” ಎಂದು ಕರೆದಿದ್ದಾರೆ. “ಧರ್ಮವು ವೈಯಕ್ತಿಕ ವಿಷಯ” ಎಂದು ಪ್ರತಿಪಾದಿಸಿದ್ದಾರೆ. ಎಡಪಕ್ಷಗಳು ಮತ್ತು ತೃಣಮೂಲ ಕಾಂಗ್ರೆಸ್ ಕೂಡ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸಿವೆ.
ಕರ್ನಾಟಕಟದಲ್ಲಿ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ಹಾಗೂ ಸಂಘಪರಿವಾರದ ನಾಯಕರಿಗೆ ಆಹ್ವಾನ ನೀಡಲಾಗಿದೆ. ಆದರೆ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಯಾವುದೇ ಸಚಿವರಿಗೆ ಆಹ್ವಾನ ನೀಡಿಲ್ಲ.