ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಬಂದ್ ಇರುವುದಿಲ್ಲ. ಇದರ ಬದಲು ಬಂಡಿಹೊಳೆ ಬಳಿ ಹೇಮಾವತಿ ನದಿಗೆ ಇಳಿದು ಪ್ರತಿಭಟನೆ ನಡೆಸಿ, ನಂತರ ತಹಸೀಲ್ದಾರ್ ಕಚೇರಿಗೆ ವರೆಗೆ ಬೈಕ್ ರಾಲಿ ನಡೆಸಿ ತಾಲ್ಲೂಕು ಕಚೇರಿ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ತಾಲ್ಲೂಕು ಕಾವೇರಿ- ಹೇಮಾವತಿ ಹಿತರಕ್ಷಣಾ ಸಮಿತಿಯು ತಿಳಿಸಿದೆ.
ರೈತರ ಬಗ್ಗೆ ಲಘುವಾಗಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೇಷರತ್ ಕ್ಷಮೆಯಾಚಿಸಬೇಕು ಎಂದು ಪ್ರಗತಿಪರ ಸಂಘಟನೆಗಳು ಹಾಗೂ ರೈತ ಮುಖಂಡರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಬಂದ್ ನಡೆಸದೇ ಇರಲು ತೀರ್ಮಾನಿಸಿರುವುದರಿಂದ ಎಲ್ಲಾ ವರ್ತಕರು ಎಂದಿನಂತೆ ವ್ಯಾಪಾರ ವಹಿವಟು ನಡೆಸಬಹುದು ಎಂದು ಕಾವೇರಿ ಹೇಮಾವತಿ ಹಿತರಕ್ಷಣಾ ಸಮಿತಿಯ ಸಂಚಾಲಕ ಮರುವನಹಳ್ಳಿ ಶಂಕರ್ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಸೇನೆಯ ತಾಲ್ಲೂಕು ಅಧ್ಯಕ್ಷ ಸಮೀರ್, ಗೌರವಾಧ್ಯಕ್ಷ ಎ.ಸಿ.ಕಾಂತರಾಜು, ಕರವೇ ಪದವೀಧರ ಘಟಕದ ತಾಲೂಕು ಅಧ್ಯಕ್ಷ ಸಿ.ಬಿ.ಚೇತನಕುಮಾರ್, ಮದನ್, ಕರಸೇ ತಾಲೂಕು ಅಧ್ಯಕ್ಷ ಪ್ರಶಾಂತ್, ಉಪಾಧ್ಯಕ್ಷ ಪೃಥ್ವಿ, ಜಯಕರ್ನಾಟಕ ಸಂಘಟನೆಯ ಕೆ.ಎಲ್. ಮಹೇಶ್, ಮಂಗಳಮ್ಮ, ಮಧುಶ್ರೀ, ಒಕ್ಕಲಿಗರ ಸಂಘಟನೆಯ ಮಹಿಳಾ ವಿಭಾಗದ ತಾಲೂಕು ಅಧ್ಯಕ್ಷೆ ಪ್ರೇಮನಾಗರಾಜು ಮತ್ತಿತರಿದ್ದರು.