ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿ ಗ್ರಾಮದಲ್ಲಿನ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆವರಣದಲ್ಲಿ ಜಿಲ್ಲಾಡಾಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ರಾಜ್ಯ ಮಟ್ಟದ ರಾಸಾಯನಿಕ ವಿಪತ್ತುಗಳ ಅಣುಕು ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮ ನಡೆಯಿತು.
ಅನಿಲ ಸೋರಿಕೆಯಾದ ಸಂದರ್ಭದಲ್ಲಿ ಕೆಲಸ ಮಾಡುವ ಕಾರ್ಮಿಕರು ಮಾಹಿತಿ ನೀಡಿದ ನಂತರ ಯಾವ ರೀತಿಯಾಗಿ ಸಮಸ್ಯೆಯನ್ನು ಬಗೆಹರಿಸಬೇಕು ಮತ್ತು ಅಪಾಯದಿಂದ ಪಾರಾಗುವಂತಹ ಮಾರ್ಗ ಸೂಚಿಯ ಪ್ರದರ್ಶನ ನೀಡಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಅನಿಲ ಸೋರಿಕೆಯಾದ ಸ್ಥಳದಲ್ಲಿದ್ದ ಅಸ್ವಸ್ಥಗೊಂಡ ವ್ಯಕ್ತಿಗಳಿಗೆ ಪ್ರಥಮ ಚಿಕಿತ್ಸೆ ನೀಡುವಂಹ ಕಾರ್ಯವನ್ನು ಆರೋಗ್ಯ ಇಲಾಖೆಯು ಆಂಬುಲೆನ್ಸ್ ಸಹಾಯದೊಂದಿಗೆ ಕೈಗೊಂಡಿತು. ಅಗ್ನಿಶಾಮಕದಳದ ಸಿಬ್ಬಂದಿಗಳು ಅನಿಲ ಸೋರಿಕೆಯನ್ನು ನಿಯಂತ್ರಿಸುವ ಕೆಲಸ ನಿರ್ವಹಿಸಿದರು.ಪೊಲೀಸ್ ಇಲಾಖೆಯು ಅನಿಲ ಸೋರಿಕೆ ಸಂದರ್ಭದಲ್ಲಿ ಜನ ಸಂದಣಿಯಾಗದಂತೆ ರಕ್ಷಣಾ ಕಾರ್ಯಗಳು ಸುಗಮವಾಗಿ ನಡೆಯುವಂತೆ ಕೆಲಸ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದ ಜನ ಸಾಮಾನ್ಯರಿಗೆ ಅನಿಲ ಸೋರಿಕೆ ಹಾಗೂ ಇನ್ನಿತರ ಅವಘಡಗಳ ತಡೆಯುವ ಕುರಿತು ಅಣುಕು ಪ್ರದರ್ಶನ ಕಾರ್ಯಾಚರಣೆ ಮಾಡಿ ಜಾಗೃತಿ ಮೂಡಿಸುವಂತಹ ಕೆಲಸ ಮಾಡಲಾಯಿತು.
ಕಾರ್ಯಾಚರಣೆಯ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಆರ್. ಐಶ್ವರ್ಯ, ಆರೋಗ್ಯಾಧಿಕಾರಿ ಡಾ. ಟಿ.ಎನ್.ಧನಂಜಯ, ಜಿಲ್ಲಾ ವಾರ್ತಾಧಿಕಾರಿ ಎಸ್.ಹೆಚ್. ನಿರ್ಮಲ, ಕಾರ್ಖಾನೆಗಳ ಸಹಾಯಕ ನಿರ್ದೇಶಕರಾದ ಹೆಚ್.ಸುರೇಶ್, ವಿಪತ್ತು ನಿರ್ವಹಣಾ ಪರಿಣಿತರಾದ ಪುನೀತ್, ಕಾರ್ಯಪಾಲಕ ಅಭಿಯಂತರ ನರೇಶ್, ಜಂಟಿ ನಿರ್ದೇಶಕ ಶಿವಲಿಂಗಯ್ಯ, ತಾಲ್ಲೂಕು ಅಗ್ನಿಶಾಮಕಾಧಿಕಾರಿ ರಾಜೇಶ್, ಶಿರಸ್ತೇದಾರರಾದ ಲಕ್ಷ್ಮಿ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವಿಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.