ಬಿಜೆಪಿ ಸಂಸದ ಓಂ ಬಿರ್ಲಾ ಅವರು ಮತ್ತೊಮ್ಮೆ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಆಡಳಿತ ಕೂಟ ಎನ್ಡಿಎ ಸ್ಪೀಕರ್ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಗೆಲುವಿನ ನಂತರ, ಓಂ ಬಿರ್ಲಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ನಾಮ ನಿರ್ದೇಶಿತರಾಗಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅಭಿನಂದಿಸಿದರು. ಇಬ್ಬರೂ ನಾಯಕರು ಸ್ಪೀಕರ್ ಅನ್ನು ಅವರ ಪೀಠಕ್ಕೆ ಕರೆದೊಯ್ದರು.
” ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಪೀಕರ್ ಆಗಿದ್ದ ಬಿರ್ಲಾ ಅವರ ಅನುಭವವು ದೇಶಕ್ಕೆ ಮತ್ತಷ್ಟು ಮಾರ್ಗದರ್ಶನ ನೀಡಲು ಸಹಾಯ ಮಾಡಲಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
ಸುಮಾರು 50 ವರ್ಷಗಳ ಬಳಿಕ ಸ್ಪೀಕರ್ ಹುದ್ದೆಗೆ ಇಂದು (ಜೂನ್ 26) ಚುನಾವಣೆ ನಡೆಯಿತು. ಆಡಳಿತ ಪಕ್ಷ ಸ್ಪೀಕರ್ ಸ್ಥಾನ ಪಡೆದರೆ, ಪ್ರತಿಪಕ್ಷಕ್ಕೆ ಉಪ ಸ್ಪೀಕರ್ ಸ್ಥಾನ ಬಿಟ್ಟು ಕೊಡುವುದು ಸಂಪ್ರದಾಯವಾಗಿತ್ತು. ಆದರೆ, ಈ ಬಾರಿ ಆಡಳಿತ ಪಕ್ಷ ಎನ್ಡಿಎ ಉಪ ಸ್ಪೀಕರ್ ಸ್ಥಾನ ಬಿಟ್ಟು ಕೊಡದ ಹಿನ್ನೆಲೆ, ಪ್ರತಿಪಕ್ಷ ಇಂಡಿಯಾ ಕೂಟ ಕೇರಳದ ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು.