ಜಿಲ್ಲೆ ಜೀವನಾಡಿ ಮೈಷುಗರ್ ಕಾರ್ಖಾನೆ ಬಾಯ್ಲರ್ಗೆ ಆ.8ರಂದು ಚಾಲನೆ ನೀಡಲಾಗುವುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು.
ಮಂಡ್ಯದ ಮೈಷುಗರ್ ಕಾರ್ಖಾನೆಯ ಆವರಣದಲ್ಲಿರುವ ಕಚೇರಿಯಲ್ಲಿ ಇಂದು ರೈತ ಹಿತರಕ್ಷಣಾ ಸಮಿತಿ ಸದಸ್ಯರು ಹಾಗೂ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಪಾಟೀಲ ಅಪ್ಪಾ ಸಾಹೇಬರೊಡನೆ ಕಾರ್ಖಾನೆ ಆರಂಭದ ಕುರಿತು ಚರ್ಚೆ ನಡೆಸಿದರು.
ನಂತರ ಮಾತನಾಡಿದ ಶ್ರೀಕಂಠೇಗೌಡ ಅವರು, ಅಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಬಾಯ್ಲರ್ಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಮೈಷುಗರ್ ದುರಸ್ತಿಗೆ ಸರ್ಕಾರ ಈಗಾಗಲೇ ಸುಮಾರು 20ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಸದ್ಯದಲ್ಲೆ ಇನ್ನು 13 ಕೋಟಿ ಹಣವನ್ನ ಬಿಡುಗಡೆ ಮಾಡುವುದಕ್ಕೆ ಎಲ್ಲಾ ಸಿದ್ದತೆ ನಡೆದಿದೆ. ಕಾರ್ಖಾನೆ ದುರಸ್ತಿ ಕಾರ್ಯ ಪರಿಣಾಮಕಾರಿಯಾಗಿ ಮತ್ತು ಯಶಸ್ವಿಯಾಗಿ ನಡೆ ಯುತ್ತಿದೆ ಎಂದರು.
ಮೈಷುಗರ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ 4 ಲಕ್ಷ ಟನ್ ಕಬ್ಬಿಗೆ ಒಪ್ಪಿಗೆ ಪಡೆಯಲಾಗಿದೆ. ಕಬ್ಬನ್ನು ಅರೆಯಲ್ಲು ಎಲ್ಲ ಏರ್ಪಾಡು ಮಾಡಲಾಗಿದೆ. ಕಾರ್ಖಾನೆ ಬಾಯ್ಲರ್ಗೆ ಚಾಲನೆ ನೀಡುವ ದಿನದಂದು ಕಾರ್ಖಾನೆ ಯಾವಾಗ ಪ್ರಾರಂಭವಾಗುತ್ತದೆ ಎಂದು ಮುಖ್ಯಮಂತ್ರಿಗಳು ನಿರ್ಧರಿಸಿ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.
ಸಧ್ಯದಲ್ಲೇ ಕಾರ್ಖಾನೆ ಪ್ರಾರಂಭವಾಗುವ ಎಲ್ಲ ಲಕ್ಷಣಗಳಿದ್ದು, ಕಾರ್ಖಾನೆ ಆರಂಭವಾಗುವ ವಿಶ್ವಾಸವಿದೆ. ಮೈಷುಗರ್ ಕಾರ್ಖಾನೆ ಹಿಂದಿನ ಸ್ಥಿತಿಗೆ ಬರುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ಇದು ಆಶಾದಾಯಕ ಬೆಳವಣಿಗೆ ಎಂದು ಹೇಳಿದರು.
ಸರ್ಕಾರದ ಹಂತದಲ್ಲಿ ಮೈಷುಗರ್ ಕಾರ್ಖಾನೆ ಪ್ರಾರಂಭ ಮಾಡುವುದಕ್ಕೆ ಏನೇನು ಆಗಬೇಕು ಅದನ್ನು ಮಾಡಿಸುತ್ತಿದ್ದೇವೆ. ಮೈಷುಗರ್ ಎಂ.ಡಿ. ಹಾಗೂ ಅಧಿಕಾರಿ ಗಳಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಒಟ್ಟಾರೆ ಮೈಷು ಗರ್ ಕಾರ್ಖಾನೆ ಆರಂಭವಾಗು ಸೂಚನೆ ಸಿಕ್ಕಿದೆ ಎಂದರು.
ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ಮೈಷುಗರ್ ದುರಸ್ತಿ ಕಾರ್ಯ ಶೇ.80 ರಷ್ಟು ಮುಗಿದಿದ್ದು, ಮೈಷುಗರ್ ಕಾರ್ಖಾನೆ ಪ್ರಾರಂಭದ ದಿನಾಂಕವನ್ನು ಸರ್ಕಾರ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಕಾರ್ಖಾನೆ ಪ್ರಾರಂಭ ವಿಳಂಭವಾಗಿದೆ. ಆಗಸ್ಟ್ 15ರೊಳಗೆ ಪ್ರಾರಂಭ ಮಾಡದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಮೈಷುಗರ್ ಕಾರ್ಖಾನೆಯಲ್ಲಿ ಗುತ್ತಿಗೆ ನೇಮಕಾತಿ ಪ್ರಕ್ರಿಯೆ, ಬಗಾಸ್ ಪ್ರಕ್ರಿಯೆ ಯಾವ ಹಂತದಲ್ಲಿದೆ. ವಿದ್ಯುತ್ ಸರಬರಾಜು, ಸ್ಟೋರ್ಗಳಲ್ಲಿರುವ ಸಾಮಾಗ್ರಿಗಳ ಬಗ್ಗೆ ಮಾಹಿತಿ ಪಡೆದಿದ್ದೇವೆ ಎಂದರು.
ಮೈಷುಗರ್ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಪಾಟೀಲ ಅಪ್ಪಾ ಸಾಹೇಬ ಮಾತನಾಡಿ, ತಮ್ಮೆಲ್ಲರ ನಿರೀಕ್ಷೆಗಳಿಗನುಗುಣವಾಗಿ ನಿಗದಿತ ಸಮಯಕ್ಕೆ ಕಾರ್ಖಾನೆ ಪ್ರಾರಂಭ ಮಾಡಲು ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ಯಾವುದೇ ತಾಂತ್ರಿಕ ದೋಷವಾಗದಂತೆ ಶಾಶ್ವತವಾಗಿ ಕಬ್ಬು ನುರಿಸುವ ಕೆಲಸ ಪ್ರಾರಂಭಿಸುತ್ತೇವೆ ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ ಎಂದರು. ಸಭೆಯಲ್ಲಿ ಕಬ್ಬು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ರೈತ ಸಂಘದ ಮುಖಂಡರು ಸಭೆಯಲ್ಲಿದ್ದರು.