ವರದಿ: ಪ್ರಭು ವಿ ಎಸ್
ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಮೈಗೂಡಿಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಿ ರೂಪಗೊಳ್ಳಬೇಕೆಂದು ಮದ್ದೂರು ರೋಟರಿ ಸಂಸ್ಥೆಯ ಅಧ್ಯಕ್ಷ ಎಂ.ಸಿ ಶಶಿಗೌಡ ತಿಳಿಸಿದರು
ಮದ್ದೂರು ತಾಲೂಕಿನ ಕೆಸ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ರೋಟರಿ ಸಂಸ್ಥೆ ಹಾಗೂ ಪ್ರಗತಿ ಮತ್ತು ಪ್ರಥಮ್ ಮೈಸೂರು ಸಂಸ್ಥೆಗಳ ಸಹಯೋಗದಲ್ಲಿ ನಡೆದ ಶಾಲಾ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ ಹಂತದಲ್ಲಿಯೇ ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಮೈಗೂಡಿಸಿಕೊಂಡಲ್ಲಿ ಉತ್ತಮ ಪ್ರಜೆಗಳಾಗಿ ರೂಪಗೊಳ್ಳುವ ಜತೆಗೆ ಜೀವನದಲ್ಲಿ ಏನನ್ನಾದರೂ ಸಾಧಿಸಿ ಉತ್ತಮ ಗುರಿ ಮುಟ್ಟಬಹುದೆಂದು ಕಿವಿಮಾತು ಹೇಳಿದರು.
ಮದ್ದೂರು ತಾಲೂಕು ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಹನುಮಶೆಟ್ಟಿ ಮಾತನಾಡಿ ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯವೆಂದರು, ಶಾಲಾ ಗ್ರಂಥಾಲಯದಲ್ಲಿ ದೇಶಕ್ಕಾಗಿ ಹೋರಾಟ ಮಾಡಿದ ಮಹನೀಯರ ಮತ್ತು ಆದರ್ಶ ವ್ಯಕ್ತಿಗಳ ಪುಸ್ತಕಗಳನ್ನು ಹೆಚ್ಚು ಓದುವುದರ ಮೂಲಕ ಅವರಂತೆ ತಾವು ಸಾಧನೆ ಮಾಡಬೇಕೆಂದರು.
ಗ್ರಾಪಂ ಅಧ್ಯಕ್ಷ ಈಶ್ವರ್, ಪ್ರಥಮ್ ಸಂಸ್ಥೆಯ ದೇವಯ್ಯ, ಪದಾಧಿಕಾರಿಗಳಾದ ಕೆ.ಬಿ ಶಶಿಧರ್, ಬಸವರಾಜು, ಕೆ.ಆರ್ ಸ್ವಾಮಿ, ಶಾಲಾ ಮುಖ್ಯ ಶಿಕ್ಷಕಿ ಯಶೋಧ, ಎಸ್ ಡಿ ಎಂ ಸಿ ಅಧ್ಯಕ್ಷ ಕೃಷ್ಣ, ಶಿಕ್ಷಕರಾದ ನಾರಾಯಣಸ್ವಾಮಿ, ವರಲಕ್ಷ್ಮಿ, ಉಮಾಪತಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.