ನ್ಯಾ.ಎ.ಜೆ.ಸದಾಶಿವ ಆಯೋಗ ಶಿಫಾರಸ್ಸು ಮಾಡಿರುವ ಒಳ ಮೀಸಲಾತಿಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ಮಾಜಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮೀಸಲಾತಿ ಎಂಬ ತುಪ್ಪವನ್ನು ಬೇರೆ ಬೇರೆ ವರ್ಗದ ಜನರ ಮೂಗಿಗೆ ಸವರುವ ಮೂಲಕ ಅಸಂವಿಧಾನಿಕವಾಗಿ ನಡೆದುಕೊಳ್ಳುತ್ತಿದೆ. ಮೀಸಲಾತಿ ಬೇಡಿಕೆ ಇಟ್ಟಿರುವ ಎಲ್ಲಾ ವರ್ಗಗಳಿಗೂ ಚುನಾವಣೆಯ ಹಿನ್ನೆಲೆಯಲ್ಲಿ ಭರವಸೆ ನೀಡುತ್ತಿದೆ. ಆದರೆ ಬಿಜೆಪಿಗೆ ಮೀಸಲಾತಿ ಕೊಡುವ ಬದ್ಧತೆ ಇಲ್ಲ ಎಂದು ಟೀಕಿಸಿದರು.
ರೈತರ ಪರ ಮಾತನಾಡುತ್ತಿಲ್ಲ
ಕಳೆದ ಎರಡು ತಿಂಗಳಿಂದ ರೈತರು ಕಬ್ಬಿನ ಬೆಲೆ ನಿಗದಿಗೆ ಆಗ್ರಹಿಸಿ ಚಳುವಳಿ ಮಾಡುತ್ತಿದ್ದರೂ, ಜಿಲ್ಲೆಯ ಏಳು ಜೆಡಿಎಸ್ ಶಾಸಕರು ರೈತರಿಗೆ ಬೆಂಬಲ ಕೊಡದೆ ಸುಮ್ಮನಿದ್ದಾರೆ. ಅವರು ರೈತರಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ ಎಂದು ಜೆಡಿಎಸ್ ಪಕ್ಷದ ವಿರುದ್ಧ ಕಿಡಿಕಾರಿದರು.
ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ರೈತರ ಪರ ಯಾವ ಕಾರ್ಯಕ್ರಮಗಳನ್ನು ಘೋಷಿಸಿತ್ತು. ಅದನ್ನೆಲ್ಲ ಈಡೇರಿಸಿದ್ದಾರಾ ಎಂಬ ಬಗ್ಗೆ ಜಿಲ್ಲೆಯ ಜನರು ತಿಳಿದು, ಯೋಚನೆ ಮಾಡುವುದು ಒಳ್ಳೆಯದು. ಜೆಡಿಎಸ್ ಪಕ್ಷ ಜಿಲ್ಲೆಯ ಜನರನ್ನ ಪದೇ ಪದೇ ಯಾಮಾರಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಚಲುವರಾಯಸ್ವಾಮಿ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದು, ಜಿಲ್ಲೆಯ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ. ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸುವುದು ಖಚಿತ ಒಂದು ವಿಶ್ವಾಸ ವ್ಯಕ್ತಪಡಿಸಿದರು.