Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕಲ್ಲಡ್ಕ ಪ್ರಭಾಕರ್ ಭಟ್ ಬಂಧಿಸದ ಸರ್ಕಾರದ ವಿರುದ್ಧ ಆಕ್ರೋಶ

ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಎಫ್ಐಆರ್ ದಾಖಲಾಗಿದ್ದರೂ ಆತನನ್ನು ಬಂಧಿಸದಿರುವ ರಾಜ್ಯ ಸರ್ಕಾರದ ವಿರುದ್ದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಜನಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಮಂಡ್ಯನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಮಂಡ್ಯನಗರದ ಸಂಜಯ ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಭಟನಕಾರರು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಶ್ರೀರಂಗಪಟ್ಟಣದಲ್ಲಿ ನಡೆದ ಹನುಮ ಸಂಕೀರ್ತನ ಯಾತ್ರೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಮುಸ್ಲಿಂ ಮಹಿಳೆಯರು ದಿನಕ್ಕೊಬ್ಬ ಗಂಡನ ಜೊತೆ ಇರುತ್ತಿದ್ದರು, ಅವರಿಗೆ ಪರ್ಮನೆಂಟ್ ಗಂಡ ಕೊಟ್ಟಿದ್ದು ಮೋದಿ ಎಂದು ಹೇಳುವ ಮೂಲಕ ಮಹಿಳೆಯರನ್ನ ಅವಹೇಳನ ಮಾಡಿದ್ದಾರೆ, ಈ ವೇಳೆ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಇದ್ದರೂ ಸಹ ಕ್ರಮ ಜರುಗಿಸದೆ ಇರುವುದು ವಿಪರ್ಯಾಸ, ಮಹಿಳೆಯರ ಘನತೆಗೆ ಚ್ಯುತಿ ತರುವ ಮಾತು ಹಾಗೂ ಮುಸ್ಲಿಂ ಸಮುದಾಯ ಅಪಮಾನಿಸಿ ಅವರ ವಿರುದ್ಧ ಪ್ರಚೋದಿಸುವ ದೇಶ ಭಾಷಣ ಅಪರಾಧವಾಗಿದೆ ಎಂದು ಹೇಳಿದರು.

ದ್ವೇಷ ಭಾಷಣ ನಿಯಂತ್ರಿಸಲು ಸರ್ವೋಚ್ಚ ನ್ಯಾಯಾಲಯ ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ, ಆದರೂ ಸಹ ರಾಜ್ಯ ಸರ್ಕಾರ ಯಾವುದೇ ಕ್ರಮ ವಹಿಸದಿರುವುದು ಸರಿಯಲ್ಲ, ಸಾರ್ವತ್ರಿಕವಾಗಿ ಮಹಿಳೆಯರ ಅವಹೇಳನ, ದ್ವೇಷ ಭಾಷಣ ಮಾಡಿದರು ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಲ್ಲ, ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ತಕ್ಷಣ ಬಂಧಿಸದೆ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ, ಈ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೋಮುಗಲಭೆ ಸೃಷ್ಟಿಸಿ ಮಾನಹಾನಿ, ಅಶಾಂತಿ ಉಂಟುಮಾಡುವ ಕಲ್ಲಡ್ಕ ಪ್ರಭಾಕರ್ ಭಟ್ ನನ್ನು ಸರ್ಕಾರ ರಕ್ಷಿಸಲು ಹೊರಟಿರುವುದು ಜಾತ್ಯತೀತ ಮನೋಭಾವ ಹಾಗೂ ಸಂವಿಧಾನ ವಿರೋಧಿ ನಡೆಯಾಗಿದೆ, ದ್ವೇಷ ಬಿತ್ತಲು ಸಮಾವೇಶ ಆಯೋಜಿಸಿದ ಇಂದು ಜಾಗರಣ ವೇದಿಕೆಯ ಸ್ಥಳೀಯ ಮುಖಂಡರು ಹಾಗೂ ಆಯೋಜಕರ ಮೇಲೆ ದೂರು ದಾಖಲಿಸಬೇಕು, ಮಂಡ್ಯ ಜಿಲ್ಲೆ ಸೌಹಾರ್ದ ನೆಲೆಯಾಗಿದ್ದು, ಇಂಥ ಸೌಹಾರ್ದತೆಗೆ ಬೆಂಕಿ ಹಚ್ಚುವ, ವಿಷ ಬೀಜ ಬಿತ್ತುವ ಮಾನವ ವಿರೋಧಿ ಚಟುವಟಿಕೆ ಜಿಲ್ಲಾಡಳಿತ, ಪೋಲಿಸ್ ಇಲಾಖೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ, ಡಿ.ಕೆ ಲತಾ, ಸುಶೀಲ, ಶೋಭಾ, ರಾಣಿ, ಮಂಜುಳಾ,ಜಯಶೀಲ, ಜಯಲಕ್ಷ್ಮಿ, ಸಿಐಟಿಯೂನ ಪ್ರಧಾನ ಕಾರ್ಯದರ್ಶಿ ಸಿ. ಕುಮಾರಿ, ಪ್ರಾಂತ ರೈತ ಸಂಘದ ಎನ್. ಎಲ್.ಭರತ್ ರಾಜ್, ರೈತಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಮಹಿಳಾ ಮುನ್ನಡೆಯ ಪೂರ್ಣಿಮಾ, ಶಿಲ್ಪ, ಬಿಸಿಯೂಟ ನೌಕರರ ಸಂಘದ ಮಹದೇವಮ್ಮ, ಎಜಾಜ್ ಪಾಷಾ, ಚಂದ್ರಶೇಖರ್ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!