ಮೈಸೂರು ಭಾಗದ ದಲಿತ ಸಮುದಾಯದ ಪ್ರತಿನಿಧಿಯಾಗಿರುವ ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದರು.
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ಬಳಿಕ ಜಿಲ್ಲಾ ಪರಿಷತ್ ಮಾಜಿ ಸದಸ್ಯ ಜಯರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಲ್ಕೈದು ಜಿಲ್ಲೆಗಳ ದಲಿತ ಸಮುದಾಯದ ನಾಯಕತ್ವ ವಹಿಸಿಕೊಳ್ಳುವುದರ ಜೊತೆಗೆ ಹೋರಾಟಗಾರ, ಕೆಚ್ಚೆದೇಯ ನಾಯಕ ಅಭಿವೃದ್ದಿ ಹರಿಕಾರರು ಆಗಿರುವ ಪಿ.ಎಂ ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಹೋರಾಟದ ಮೂಲಕ ಅಧಿಕಾರ ಪಡೆಯಬೇಕೆಂದು ಕರೆ ಕೊಟ್ಟಿದ್ದಾರೆ, ಅವರ ಆಶಯದಂತೆ ಪಿ.ಎಂ ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ತಪ್ಪಿದ್ದರೇ ಅಹಿಂದ ಸಮುದಾಯ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿಯ ದುರಾಡಳಿತದಿಂದ ಬೇಸತ್ತ ದಲಿತರು, ಹಿಂದುಳಿದವರು, ಶೋಷಿತ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಸ್ವಷ್ಟ ಬಹುಮತ ಬರಲು ಕಾರಣರಾಗಿದ್ದಾರೆ, ಜನಸಂಖ್ಯೆಯ ಅನುಗುಣವಾಗಿ ದಲಿತ ಸಮುದಾಯದ ಸುಮಾರು 10 ಶಾಸಕರಿಗೆ ಸಚಿವಸ್ಥಾನ ನೀಡಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೇ ದಲಿತ ನಾಯಕರೊಬ್ಬರು ಮುಖ್ಯಮಂತ್ರಿಯೂ ಅಥವಾ ಉಪ ಮುಖ್ಯಮಂತ್ರಿಯೂ ಆಗುತ್ತಾರೆಂದು ನಂಬಿಕೆ ಇಟ್ಟಿಕೊಳ್ಳಲಾಗಿತ್ತು, ಆದರೇ ಕೆಲವೊಂದು ಬದಲಾವಣೆಯಿಂದಾಗಿ ಎರಡು ಸ್ಥಾನಗಳು ಕೈ ತಪ್ಪಿವೆ, ದಲಿತರಿಗೆ ನ್ಯಾಯ ಒದಗಿಸಲು ಹೆಚ್ಚು ಮಂದಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಜೆಡಿಎಸ್ ಭದ್ರಕೋಟೆಯಂತಿದ್ದ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರಾದ ಚಲುವರಾಯಸ್ವಾಮಿ ಹಾಗೂ ಪಿ.ಎ ನರೇಂದ್ರಸ್ವಾಮಿ ಅವರು ಸಂಘಟಿತ ಹೋರಾಟ ಮಾಡಿ, ಪಕ್ಷ ಸಂಘಟಿಸಿ ವಿಧಾನಸಭಾ ಚುನಾವಣೆಯಲ್ಲಿ ಆರು ಸ್ಥಾನಗಳನ್ನು ಪಡೆಯುವಂತೆ ಮಾಡಿದ್ದಾರೆ. ಇಬ್ಬರು ವಿಧಾನ ಪರಿಷತ್ ಸದಸ್ಯರನ್ನು ಗೆಲ್ಲಿಸಲಾಗಿದೆ, ಮುಂದೆ ಬರುವ ತಾ.ಪಂ., ಜಿ.ಪಂ ಹಾಗೂ ಲೋಕಸಭೆ ಚುನಾವಣೆಯನ್ನು ಮಂಡ್ಯ ಜಿಲ್ಲೆಯ ಹಿರಿಯ ನಾಯಕರಾದ ಪಿ.ಎಂ ನರೇಂದ್ರಸ್ವಾಮಿ ಹಾಗೂ ಚಲುವರಾಯಸ್ವಾಮಿ ಅವರ ನೇತೃತ್ವದಲ್ಲೇ ಗೆಲ್ಲಬೇಕಾಗಿರುವುದರಿಂದ ಇವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ತಾ.ಪಂ ಉಪಾಧ್ಯಕ್ಷ ಸಿ.ಮಾಧು, ಪುರಸಭೆ ಮಾಜಿ ಸದಸ್ಯ ಕಿರಣ್ ಶಂಕರ್, ಡಿಎಸ್ಎಸ್ ಮುಖಂಡ ಸಾಗ್ಯ ಕೆಂಪಯ್ಯ, ಜಿಲ್ಲಾ ಉಪಾಧ್ಯಕ್ಷ ಬಸವರಾಜು, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಪ್ರಸಾದ್, ಮುಖಂಡರಾದ ಡಾ.ಪ್ರಸಾದ್, ಮುತ್ತುರಾಜ್, ಕೆ.ಎಂ ನಂಜುಂಡಸ್ವಾಮಿ, ಡಿ.ವಿ ಲಿಂಗಣ್ಣಯ್ಯ, ಶಂಕರ್, ಅಂಬೇಡ್ಕರ್ ಸೇನೆಯ ಸಿದ್ದರಾಜು, ನಾಗರಾಜು, ಸುರೇಶ್, ಶಿವಕುಮಾರ್, ಮಹೇಶ್, ರಂವೀಧ್ರ, ಪುಟ್ಟಸ್ವಾಮಿ ಸೇರಿದಂತೆ ಇತರರು ಇದ್ದರು.