ವರದಿ : ನ.ಲಿ.ಕೃಷ್ಣ
ಪಂಚಾಯತ್ ರಾಜ್ ವ್ಯವಸ್ಥೆಯ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗ್ರಾಮ ಸ್ವರಾಜ್ ಆಶಯಗಳ ವಿರೋಧಿ ಧೋರಣೆ ಖಂಡಿಸಿ ಮದ್ದೂರಿನ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟವು ಮದ್ದೂರು ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿತು.
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಿಂದ ಇಂದು ಬೆಳಿಗ್ಗೆ ಪ್ರತಿಭಟನಾ ಮೆರವಣಿಗೆ ಹೊರಟ ಪ್ರತಿಭಟನಕಾರರು ಪೇಟೆ ಬೀದಿಯಲ್ಲಿ ಮೆರವಣಿಗೆ ಸಾಗಿ ಅಧಿಕಾರಿಗಳ ಜನವಿರೋಧಿ ಧೋರಣೆ ಖಂಡಿಸಿ ಧಿಕ್ಕಾರ ಮೊಳಗಿಸಿದರು. ಜಿ.ಪಂ. ಸಿಇಓ, ತಾ.ಪಂ. ಇಓ ಹಾಗೂ ಗ್ರಾ.ಪಂ. ಪಿಡಿಓಗಳು ಗ್ರಾಮ ಸ್ವರಾಜ್ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದರು.
ಗ್ರಾ. ಪಂ. ಪಿಡಿಓ ಗಳು ಕೇಂದ್ರಸ್ಥಾನದಲ್ಲಿ ವಾಸಿಸಬೇಕು, ಸಾಮಾನ್ಯಸಭೆಯ ನಿರ್ಣಯಗಳು ಜಾರಿಯಾಗಬೇಕು,
ಎನ್ ಎಸ್ ಎಲ್ ಕಾರ್ಖಾನೆ ಎಥನಾಲ್ ಘಟಕ ಲೈಸನ್ಸ್ ನೀಡುವಲ್ಲಿ ಇ ಓ ಕರ್ತವ್ಯ ಲೋಪ ಎಸಗಿರುವ ಕ್ರಮದ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಇ ಓ ಅವರು ಗ್ರಾ. ಪಂ. ಬೇಡಿಕೆಗಳಿಗೆ ಮಾನ್ಯತೆ ನೀಡಬೇಕು, ಪಿ ಡಿ ಓ ಗಳು ನಿಯಮಾನುಸಾರ ಅಧ್ಯಕ್ಷರಿಗೆ ರಜೆ ನೀಡಬೆಕು, ಪಿ ಡಿ ಓ, ಕಾರ್ಯದರ್ಶಿ, ಲೆಕ್ಕಸಹಾಯಕರ ವೇತನ ನಿಯಾಮಾನುಸಾರ ಪಂಚಾಯಿತಿ ನಿಧಿಗೆ ಬಿಡುಗಡೆ ಮಾಡಬೇಕು, ಅಶ್ವಾಸನಾ ನಿಧಿಗೆ ಜಮೆಗೊಂಡಿರುವ ಅನುದಾನವನ್ನು ವಾಪಸ್ಸು ಗ್ರಾಪಂಗೆ ನೀಡಬೇಕು, ಗ್ರಾಮ ಠಾಣಾ ಪರಿಮಿತಿ ವಿಸ್ತರಣೆ ಮಾಡಬೇಕು, ಇ – ಖಾತೆ ನಿಯಾಮಾವಳಿಗಳಲ್ಲಿ ಪಂಚಾಯಿತಿ ವಾರು ಭಿನ್ನತೆ ಕೈ ಬಿಡಬೇಕೆಂದು ಒತ್ತಾಯಿಸಿದರು.
ಹದಿನೈದನೆ ಹಣಕಾಸು ಅನುದಾನಗಳ ಷರತ್ತು ಸಡಿಲಿಸಬೇಕು, ಜಲಜೀವನ್ ಮಿಷನ್ ಯೋಜನೆಯ ಕಳಪೆ ಕಾಮಗಾರಿ ತನಿಖೆ ಆಗಬೇಕು, ಲೈಸನ್ಸ್ ನೀಡುವಲ್ಲಿ ನಿಯಮ ಪಾಲನೆ ಮಾಡದ ಪಿ ಡಿ ಓ ಗಳ ಮೇಲೆ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು.
ಪ್ರತಿಭಟನೆ ನೇತೃತ್ವವನ್ನು ಗ್ರಾ.ಪಂ.ಸದಸ್ಯರ ಒಕ್ಕೂಟದ ಅಧ್ಯಕ್ಷ ಜಿ. ಎನ್. ಸತ್ಯ, ಕಾರ್ಯದರ್ಶಿ ಎಮ್.ಇ.ಕೃಷ್ಣ ಗೌರವಾಧ್ಯಕ್ಷ ದಯಾನಂದ್ ವಹಿಸಿದ್ದರು. ಮದ್ದೂರು ತಾಲ್ಲೂಕಿನ ಎಲ್ಲಾ ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.