ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ವಿರುದ್ದ ನಾಗಮಂಗಲ ಪಟ್ಟಣದಲ್ಲಿ ಜಾ.ದಳ ಕಾರ್ಯಕರ್ತರು ಶುಕ್ರವಾರ ಪೇ ಸಿಎಸ್ ಅಭಿಯಾನ ನಡೆಸಿದರು.
ರಾಜ್ಯಪಾಲರಿಗೆ ಪತ್ರ ಬರೆದ ವಿಷಯಕ್ಕೆ ಸಂಬಂಧಿಸಿದಂತೆ ಜಾ.ದಳದ ಮಾಜಿ ಶಾಸಕ ಸುರೇಶ ಗೌಡ ಮತ್ತು ಸಚಿವ ಚಲುವರಾಯಸ್ವಾಮಿ ನಡುವಿನ ವಾಕ್ಸಮರ ಸಮಯದಲ್ಲೇ ಜೆಡಿಎಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಮೊದಲು ಬಿಜೆಪಿ ಪ್ರಾರಂಭಿಸಿದ್ದ ಪೇ ಸಿಎಸ್ ಅಭಿಯಾನವನ್ನು ಜಾ.ದಳ ಮುಂದುವರೆಸಿದೆ.
ನಾಗಮಂಗಲ ಪಟ್ಟಣದ ಸೌಮ್ಯಕೇಶವ ಸ್ವಾಮಿ ದೇವಾಲಯ ಆವರಣದಿಂದ ಮೆರವಣಿಗೆ ಹೊರಟು ಪ್ರತಿಭಟನಾಕಾರರು, ಮರಿಯಪ್ಪ ವೃತ್ತದವರೆಗೆ ತೆರಳಿ ಮೆರವಣಿಗೆ ಯುದ್ದಕ್ಕೂ ಸಚಿವ ಚಲುವರಾಯಸ್ವಾಮಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನ ಕೂಗಿದರು. ಅಲ್ಲದೆ ಪೇ ಸಿಎಸ್ ಪೋಸ್ಟರ್ ಅನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಂಟಿಸಿ ಕಿಡಿಕಾರಿದರು.
ಮುಖಂಡ ಕೆಂಪೇಗೌಡ ಮಾತನಾಡಿ, ಚಲುವರಾಯಸ್ವಾಮಿ ವರ್ತನೆ ಮಿತಿ ಮೀರಿದೆ, ಅವರು ಸುರೇಶ್ ಗೌಡ ವಿರುದ್ಧ ಕಾಂಗ್ರೆಸ್ ಮುಖಂಡರನ್ನು ಎತ್ತಿ ಕಟ್ಟಿದ್ದಾರೆ, ಇಂತಹವರು ಸುರೇಶ್ ಗೌಡರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದಾರೆಂದು ಕಿಡಿಕಾರಿದರು.
ಸುರೇಶ್ ಗೌಡ ಸ್ವಂತ ಹಣದಿಂದ ಚುನಾವಣೆ ಮಾಡಿದ್ದಾರೆ, ಯಾರಿಗೂ ಕೂಡ ಬಾಕಿದಾರನಲ್ಲ, ನಿಮಗೇನಾದರೂ ಹಣ ಕೊಡಬೇಕಾಗಿದ್ದರೆ ಜೆಡಿಎಸ್ ಕಾರ್ಯಕರ್ತರು ಶಕ್ತಿವಂತರಾಗಿದ್ದಾರೆ ನಮ್ಮ ಬಳಿ ಬನ್ನಿ ಕೊಡುತ್ತೇವೆ ಎಂದು ಜೆಡಿಎಸ್ ಮುಖಂಡ ಬಿದರಕೋಟೆ ಕುಶ ತಿರುಗೇಟು ನೀಡಿದರು. ಪ್ರತಿಭಟನೆಯಲ್ಲಿ ವಕೀಲ ಸಿದ್ದಲಿಂಗಯ್ಯ ಸೇರಿದಂತೆ ಮತ್ತಿತರರಿದ್ದರು