-
ಮತಕ್ಕಾಗಿ ಪುಕ್ಕಟೆ ವಸ್ತುಗಳ ವಿತರಣೆ
- ರಾಷ್ಟ್ರ ಮಟ್ಟದಲ್ಲಿ ಕೃಷ್ಟಿ ಬಿಕ್ಕಟ್ಟು
ಏಳೆಂಟು ತಿಂಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ನಕಲಿ ಸಮಾಜಸೇವಕರು ವಿವಿಧ ವಸ್ತುಗಳನ್ನು ಪುಕ್ಕಟೆಯಾಗಿ ನೀಡಲು ನಾ ಮುಂದು ತಾ ಮುಂದು ಮುನ್ನುಗ್ಗುತ್ತಿರುವುದು ಜನರನ್ನು ಬಲಿ ತೆಗೆದುಕೊಳ್ಳುವ ಸಂಚಾಗಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟಮಾದು ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಚುನಾವಣೆ ಸಮೀಪಿಸುತ್ತಿರುವುದರಿಂದ ಮದ್ಯ, ಸೀರೆ, ಗಣಪತಿ ವಿತರಣೆ ಹೆಚ್ಚಾಗಿ ನಡೆಯುತ್ತಿದೆ, ಉಚಿತ ತಪಾಸಣೆ ಹಾಗೂ ಆರೋಗ್ಯ ಶಿಬಿರಗಳು ಹೆಚ್ಚಾಗಿ ನಡೆಯುತ್ತಿವೆ, ಇವುಗಳ ಮೂಲ ಉದ್ದೇಶಗಳನ್ನು ಜನಸಾಮಾನ್ಯರು ಅರ್ಥ ಮಾಡಿಕೊಂಡು, ಇಂತಹ ಕಾರ್ಯಕ್ರಮಗಳಿಂದ ದೂರವಿರಬೇಕೆಂದು ಹೇಳಿದರು.
ರಾಷ್ಟ್ರದಲ್ಲಿ ಕೃಷ್ಟಿ ಬಿಕ್ಕಟ್ಟು ತೀವ್ರಗೊಂಡಿರುವ ಪರಿಣಾಮ ಶೇ.45ರಷ್ಟು ಕೃಷಿ ಕೂಲಿಕಾರರ ಸಂಖ್ಯೆ ಹೆಚ್ಚಳವಾಗಿದೆ, ಜೀವನಾವಶ್ಯಕ ವಸ್ತುಗಳ ಮೇಲೆ ದಿನೇ ದಿನೇ ಹೆಚ್ಚಳವಾಗುತ್ತಿದೆ, ಈ ಪದಾರ್ಥಗಳ ಮೇಲೆ ಜಿಎಸ್ಟಿ ಏರಿಕೆ ಮಾಡಲಾಗಿದೆ. ಇದರಿಂದಾಗಿ ಮಕ್ಕಳು ಪೌಷ್ಟಿಕ ಆಹಾರವಿಲ್ಲದೇ ಅಪೌಷ್ಟಿಕತೆಯಿಂದ ನರಳುವಂತಾಗಿದೆ ಎಂದು ದೂರಿದರು.
ಕೊಪ್ಪಳದಲ್ಲಿ ಅಧ್ಯಯನ ಶಿಬಿರ
ಸೆ.13 ರಿಂದ 17ರ ವರೆಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಕೃಷಿ ಕೂಲಿಕಾರರ ಸಂಘದ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಆಯೋಜಿಸಲಾಗಿದೆ ಎಂದರು. ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಎ.ವಿಜಯ ರಾಘವನ್ ಶಿಬಿರ ಉದ್ಘಾಟಿಸುವರು ಎಂದರು.
ಶಿಬಿರಕ್ಕೆ ಮಂಡ್ಯದಿಂದ 50 ಮಂದಿ ಶಿಬಿರಾರ್ಥಿಗಳು ತೆರೆಳಲಿದ್ದಾರೆ, ಪ್ರಸಕ್ತ ರಾಜಕೀಯ, ಸಮಾಜ ಬದಲಾವಣೆ, ಕೋಮುವಾದ, ಜಾತಿ ಪದ್ದತಿ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಿದರು.
ಉಚಿತ ವಿದ್ಯುತ್ ನೀಡಿ
ಎಸ್ಸಿ, ಎಸ್ಟಿ ಹಾಗೂ ಬಿಪಿಎಲ್ ಕಾರ್ಡ್ದಾರರಿಗೆ ಉಚಿತ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿದ ಅವರು, ಮುಂಚಿತವಾಗಿ ಬಳಸಿದ್ದ ಯೂನಿಟ್ ಹಣವನ್ನು ಕಟ್ಟಬೇಕು ಎಂಬ ನಿಯಮ ಕೈಬಿಟ್ಟು, ಹಳೇ ಬಾಕಿ ಕೇಳದೆ 75 ಯೂನಿಟ್ ಉಚಿತ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಮಂಡ್ಯ ತಾಲ್ಲೂಕು ಕಾರ್ಯದರ್ಶಿ ಆರ್.ರಾಜು ಹಾಗೂ ಮದ್ದೂರು ತಾಲ್ಲೂಕು ಕಾರ್ಯದರ್ಶಿ ಟಿ.ಪಿ.ಅರುಣ್ ಕುಮಾರ್ ಉಪಸ್ಥಿತರಿದ್ದರು.