ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದಿಂದ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿರುವುದರಿಂದ, ರೈತರು ಬೆಳೆ ಬೆಳೆಯುವುದಕ್ಕೆ ನೀರಿಲ್ಲದ ಕಾರಣ ಗಾಂಜಾ ಬೆಳೆಯಲು ಅವಕಾಶ ಕೊಡಬೇಕೆಂದು ಕೋರಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.
ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿದರು.
ಬಿಜೆಪಿ ಮುಖಂಡ ಶಿವಕುಮಾರ್ ಆರಾಧ್ಯ ಮಾತನಾಡಿ, ಕೆ.ಆರ್.ಎಸ್ ಅಣೆಕಟ್ಟಿನ ಕಾವೇರಿ ನೀರನ್ನು ಸಂಪೂರ್ಣವಾಗಿ ತಮಿಳುನಾಡಿಗೆ ಹರಿಯಲು ಬಿಟ್ಟಿದೆ.ಅಲ್ಲದೆ ಕಾವೇರಿ ಪ್ರಾಧಿಕಾರ ಇಂದಿನಿಂದ 18 ದಿನ 3000 ಕ್ಯೂಸೆಕ್ ನೀರು ಬಿಡಲು ಸೂಚಿಸಿದ್ದು,ಇದರಿಂದಾಗಿ ರೈತರ ಭತ್ತ, ರಾಗಿ, ಅಥವಾ ಕಬ್ಬು ಬೆಳೆಯಲು ನೀರಿಲ್ಲದಂತಾಗಿದೆ.ಆದ್ದರಿಂದ ರೈತರ ಮೇಲೆ ತಾವುಗಳು ಕೃತಜ್ಞತೆ ತೋರಿ, ದೊಡ್ಡ ಮನಸ್ಸು ಮಾಡಿ ಗಾಂಜಾವನ್ನು ಬೆಳೆಯಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಗಾಂಜಾ ಬೆಳೆ ಬೆಳೆಯಲು ಕಾವೇರಿ ನೀರಿನ ಅವಶ್ಯಕತೆಯಿಲ್ಲ. ನಮ್ಮ ಮನೆಯ ತಿಪ್ಪೆ ಗುಂಡಿ, ನಾವು ಸ್ನಾನ ಮಾಡಿದ ತ್ಯಾಜ್ಯ ನೀರು, ಪಾತ್ರೆ ತೊಳೆದ ನೀರು ಸಾಕು. ದಿನ ನಿತ್ಯ ಕರ್ಮಕ್ಕೆ ಬಳಸಿದ ಕೊಳಚೆ ನೀರಿನಿಂದ ಕುಂಡಗಳಲ್ಲಿ, ಮನೆಯ ಹಿತ್ತಲಿನ ಕೀರೆಮಡಿಯಲ್ಲಿ ಮತ್ತು ಕೈ ತೋಟದಲ್ಲಿ ಗಾಂಜಾ ಬೆಳೆಯನ್ನು ರೈತರ ಹೊಟ್ಟೆ ಪಾಡಿಗೋಸ್ಕರ ಬೆಳೆಯಲು ಅವಕಾಶ ನೀಡಬೇಕು. ಇಲ್ಲವಾದರೆ, ಮಂಡ್ಯ ಜಿಲ್ಲೆಯ ಕಾವೇರಿ ಕೊಳ್ಳದ ಎಲ್ಲಾ ರೈತರಿಗೆ ಸನ್ಮಾನ್ಯ ರಾಷ್ಟ್ರಪತಿಯವರ ಮೂಲಕ ದಯಾಮರಣ ಕೊಡಿಸಿ ಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೊಸಹಳ್ಳಿ ಶಿವು, ಸಾತನೂರು ಯೋಗೇಶ್, ಹೆಚ್.ಎನ್.ಶಿವಣ್ಣ, ಬಿ.ಟಿ.ಶಿವಲಿಂಗೇಗೌಡ, ರೇವ ನಂಜುಂಡ ಸ್ವಾಮಿ,ಮುಂಜುನಾಥ್ ಮತ್ತಿತರರಿದ್ದರು.