ಜನರ ಬದುಕಿನ ಬಗ್ಗೆ ಚಿಂತಿಸಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ದಿಪಡಿಸುವ ಶಕ್ತಿ ಹೊಂದಿರುವ ನಿಮ್ಮ ನರೇಂದ್ರಸ್ವಾಮಿಗೆ ಮತ ಹಾಕುವುದರ ಮೂಲಕ ಜಯಶೀಲರನ್ನಾಗಿ ಮಾಡಿ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ ಮನವಿ ಮಾಡಿದರು.
ಮಳವಳ್ಳಿ ಪಟ್ಟಣದ ಗಂಗಾಮತ ಬೀದಿಯಲ್ಲಿ ಗಂಗಮತ ಸಮುದಾಯದ ಕುಲ ದೇವತೆ ಗಂಗಪರಮೇಶ್ವರಿ ಹಾಗೂ ದಾರ್ಶನಿಕ ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹಾಲಿನ ಅಭಿಷೇಕ ಮಾಡಿದ ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ದಿಯನ್ನು ಮುಂದಿಟ್ಟುಕೊಂಡು ಮತ ಕೇಳುವ ಬದಲು ಕ್ಷೇತ್ರದಲ್ಲಿ ಸುಳ್ಳುಗಳನ್ನು ಹೇಳುತ್ತಾ ದಿಕ್ಕು ತಪ್ಪಿಸುತ್ತಿರುವವರಿಗೆ ಮತದಾರರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಜೆಡಿಎಸ್ ಅಭ್ಯರ್ಥಿ ಶಾಸಕ ಡಾ. ಕೆ.ಅನ್ನದಾನಿ ವಿರುದ್ದ ಕಿಡಿಕಾರಿದರು.
ಪಕ್ಷದ ದೊಡ್ಡ ನಾಯಕರ ಕೈಯಲಿ ಚೀಟಿ ಬರೆದು ಸುಳ್ಳುಗಳನ್ನು ಹೇಳಿಸುತ್ತಿದ್ದಾರೆ, ಚುನಾವಣೆ ಸಮೀಪಿಸುತ್ತಿದ್ದಂತೆ ನಕಲಿ ಆಡಿಯೋ ಹರಿದಾಡಿಸುತ್ತಿದ್ದಾರೆ, ಜನರಿಗೆ ಸುಳ್ಳುಗಳನ್ನು ನಂಬಿಸಿ ಗೆಲ್ಲಬಹುದು ಎಂದು ಕೊಂಡಿದ್ದಾರೆ, ಮಳವಳ್ಳಿ ಜನರು ಬುದ್ದಿವಂತರಾಗಿದ್ದು, ಕ್ಷೇತ್ರದಲ್ಲಿ ಯಾರನ್ನು ಆಯ್ಕೆ ಮಾಡಿದರೇ ಕ್ಷೇತ್ರ ಅಭಿವೃದ್ದಿಯಾಗುತ್ತದೆ ಎನ್ನುವುದನ್ನು ಈಗಗಲೇ ತೀರ್ಮಾನ ಮಾಡಿದ್ದಾರೆಂದು ಹೇಳಿದರು.
ಗಂಗಾಮತ ಸಮುದಾಯದ ಅಭಿವೃದ್ದಿಗಾಗಿ ಏತನೀರಾವರಿ ಮೂಲಕ ತಾಲ್ಲೂಕಿನಲ್ಲಿರುವ ಕೆರೆಗಳನ್ನು ತುಂಬಿಸಿ ಮೀನುಗಾರಿಕೆಗೆ ಸೌಲಭ್ಯ ಕಲ್ಪಿಸಲಾಯಿತು, ರಸ್ತೆ ಬದಿಯಲ್ಲಿ ಮೀನು ಮಾರಾಟವನ್ನು ನಿಲ್ಲಿಸಬೇಕೆಂದು ಆಧುನಿಕ ಮೀನು ಮಾರುಕಟ್ಟೆಯನ್ನು ಕಟ್ಟಿಸಿಕೊಟ್ಟಿದ್ದೇನೆ, ಮಳೆಗಾಲದಲ್ಲಿ ಮನೆಗಳಿಗೆ ನೀರು ತುಂಬುತ್ತಿರುವುದನ್ನು ತಪ್ಪಿಸಲು ತಡೆಗೋಡೆಯನ್ನು ನಿರ್ಮಿಸಲಾಯಿತು, ದೂರದೃಷ್ಠಿಯಿಂದ ಅಭಿವೃದ್ದಿಗೆ ಮುಂದಾಗುವ ನನಗೆ ಶಕ್ತಿ ತುಂಬಲು ಚುನಾವಣೆಯಲ್ಲಿ ಗೆಲ್ಲಿಸಿದರೇ ಕಾಂಗ್ರೆಸ್ ಪಕ್ಷ ಸ್ವಷ್ಟ ಬಹುಮತದೊಂದಿಗೆ ಅಧಿಕಾರ ಬರಲಿದ್ದು, ತಾನು ಕೂಡ ಸಚಿವನಾಗುವ ಅವಕಾಶವಿರುವುದರಿಂದ ಇನ್ನಷ್ಟು ಕ್ಷೇತ್ರವನ್ನು ಅಭಿವೃದ್ದಿಪಡಿಸಲಿದ್ದೇನೆಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ ನರೇಂದ್ರಸ್ವಾಮಿ ಅವರ ಅಭಿವೃದ್ದಿ ಸಾಧನೆಯನ್ನು ಮೆಚ್ಚಿ ಗಂಗಮತ ಸಮುದಾಯದ ವತಿಯಿಂದ ಪ್ರೀತಿ ಪೂರ್ವಕವಾಗಿ ಹಾಲಿನ ಅಭಿಷೇಕ ಮಾಡುವ ಉದ್ದೇಶವನ್ನು ಹೊಂದಲಾಗಿತ್ತು, ಇದಕ್ಕೆ ಒಪ್ಪದ ನರೇಂದ್ರಸ್ವಾಮಿ ಅವರು, ದೇವರಿಗೆ ಹಾಲಿನ ಅಭಿಷೇಕ ಮಾಡಬೇಕೆ ಹೊರತು ಮನುಷ್ಯರಿಗಲ್ಲ ಎಂದು ಹೇಳಿ ಗಂಗಮತ ಸಮುದಾಯದ ಕುಲ ದೇವತೆ ಗಂಗಪರಮೇಶ್ವರಿ ಹಾಗೂ ದಾರ್ಶನಿಕ ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹಾಲಿನ ಅಭಿಷೇಕ ಮಾಡಿರುವುದು ಅವರ ದೊಡ್ಡತನವನ್ನು ಎತ್ತಿ ತೋರಿಸುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪೇಟೆ ಒಕ್ಕಲಗೇರಿ ಬೀದಿ ಹಾಗೂ ಗಂಗಮತ ಬೀದಿಯಲ್ಲಿ ರಸ್ತೆ ಉದ್ದಕ್ಕೂ ಕಾಂಗ್ರೆಸ್ ನರೇಂದ್ರಸ್ವಾಮಿ ಅವರನ್ನು ಜಯ ಘೋಷಣೆದೊಂದಿಗೆ ಸ್ವಾಗತಿಸಿದರು. ಹಲವು ಮಂದಿ ಚುನಾವಣಾ ಖರ್ಚಿಗಾಗಿ ಪಿ.ಎಂ ನರೇಂದ್ರಸ್ವಾಮಿ ಅವರಿಗೆ ಧನಸಹಾಯ ಮಾಡಿದರು.
ಪ್ರಚಾರದ ಮಧ್ಯೆ ಗಂಗಾಮತ ಬೀದಿಯ ಗಂಗಾಪರಮೇಶ್ವರಿ ಗೋಪುರದ ಬಾಗಿಲಿನಲ್ಲಿ ಗಂಗಮತ ಸಮುದಾಯದ ಕುಲ ದೇವತೆ ಗಂಗಪರಮೇಶ್ವರಿ ಹಾಗೂ ದಾರ್ಶನಿಕ ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹಾಲಿನ ಅಭಿಷೇಕವನ್ನು ಪಿ.ಎಂ ನರೇಂದ್ರಸ್ವಾಮಿ ಮಾಡಿದರು.
ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೇವರಾಜು, ಕಾರ್ಯಧ್ಯಕ್ಷ ಮಲ್ಲಯ್ಯ, ಗಂಗರಾಜೇಅರಸು, ಶಿವಕುಮಾರ್ , ದ್ಯಾಪೇಗೌಡ ಮುಖಂಡರಾದ ಬಸವರಾಜು, ಮಹದೇವಸ್ವಾಮಿ, ಸೇರಿದಂತೆ ಇತರರು ಇದ್ದರು.