ಉತ್ತಮ ಆಡಳಿತದ ಜೊತೆಗೆ ನೂತನ ಅಭಿವೃದ್ದಿ ಯೋಜನೆಗಳನ್ನು ತಂದು ನಿಮ್ಮ ಮನೆಯ ಮಗನಾಗಿ
ಕ್ಷೇತ್ರವನ್ನು ಅಭಿವೃದ್ದಿ ಪಡಿಸಲು ಬದ್ದನಾಗಿದ್ದು, ಮತ್ತೊಮ್ಮೆ ಆಶೀರ್ವದಿಸಿ ಶಾಸಕರನ್ನಾಗಿ ಮಾಡುವುದರ ಮೂಲಕ ಮತ್ತಷ್ಟು ಸೇವೆ ಮಾಡಲು ಅವಕಾಶ ಕಲ್ಪಿಸಬೇಕೆಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ಮನವಿ ಮಾಡಿದರು.
ಮಳವಳ್ಳಿ ತಾಲ್ಲೂಕಿನ ಮಾರ್ಕಾಲು ಗೇಟ್ ಆವರಣದಲ್ಲಿ ಬ್ಲಾಕ್ ಕಾಂಗ್ರೆಸ್ ಮಳವಳ್ಳಿ ಎಸ್ ಸಿ ವಿಭಾಗದ ವತಿಯಿಂದ ನಡೆದ ಕಿರುಗಾವಲು ಹೋಬಳಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಣ, ಕೃಷಿ, ಆರೋಗ್ಯ, ಕೈಗಾರಿಕಾ ಕ್ಷೇತ್ರದಲ್ಲಿ, ಕಾರ್ಖಾನೆ ವಿಚಾರದಲ್ಲಿ, ಕುಡಿಯುವ ನೀರು ಹಾಗೂ ನೀರಾವರಿ ಯೋಜನೆಗಳನ್ನು ತರಲು ಮಂಡ್ಯ ಜಿಲ್ಲೆಯ ಜೆಡಿಎಸ್ ಮತ್ತು ಬಿಜೆಪಿ ಶಾಸಕರು ಸಂಪೂರ್ಣ ನಿಷ್ಕ್ರಿಯರಾಗಿದ್ದು,ಇದನ್ನು ಖಂಡಿಸುತ್ತೇನೆ, ಇದು ಜಿಲ್ಲೆಗೆ ಮಾಡಿರುವ ಮೋಸವಾಗಿದೆ ಎಂದು ಆರೋಪಿಸಿದರು.
ಹತ್ತು ವರ್ಷದ ನನ್ನ ಆಡಳಿತ ಅವಧಿಯಲ್ಲಿ ಹನಿನೀರಾವರಿ, ಏತ ನೀರಾವರಿ, ನಾಲಾ ಆಧುನೀಕರಣ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಇಂದಿರಾಗಾಂಧಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಪಾಲಿಟೆಕ್ನಿಕ್ ಕಾಲೇಜು, ಮಹಿಳಾ ಕಾಲೇಜು, ಆದರ್ಶ ಶಾಲೆ, ಕೆಎಸ್ಆರ್ಟಿಸಿ ಚಾಲಕ ತರಬೇತಿ ಕೇಂದ್ರ, ಶಾಲಾ ಕಾಲೇಜು, ಕಟ್ಟಡ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಅಂಬೇಡ್ಕರ್ ಭವನ ಕ್ರೀಡಾಂಗಣ, ಪಾರ್ಕ್ ಗಳ ಸುಂದರೀಕರಣ, ಮೀನು ಮಾರುಕಟ್ಟೆ, ಅಗ್ನಿ ಶಾಮಕ ಠಾಣೆ, ಎಪಿಎಂಸಿ, ಬಿಜಿಪುರ, ಕಿರುಗಾವಲು ಬಹು ಹಳ್ಳಿಗಳ ಕುಡಿಯುವ ನೀರಿನ ಯೋಜನೆ, ಮಳವಳ್ಳಿ 24*7 ಕುಡಿಯುವ ನೀರಿನ ಯೋಜನೆ , ಸೇತುವೆಗಳ ನಿರ್ಮಾಣ, ಸೇರಿದಂತೆ ರಸ್ತೆಗಳ ಅಭಿವೃದ್ದಿಗೊಳಿಸುವುದರ ಜೊತೆಗೆ ಪಟ್ಟಣದಂತಿದ್ದ ಮಳವಳ್ಳಿಯನ್ನು ನಗರವನ್ನಾಗಿಸಲು ಶ್ರಮಿಸಿದ್ದೇನೆಂದು ಹೇಳಿದರು.
ಅಭಿವೃದ್ದಿಯ ನೀಲ ನಕ್ಷೆಯ ಬಗ್ಗೆ ಮಾತನಾಡುವವರು ಶೂನ್ಯ ಅಭಿವೃದ್ದಿಯೊಂದಿಗೆ ವಾಪಸ್ ಜನರ ಬಳಿಗೆ ಬಂದು ಭವನಗಳು ಹಾಗೂ ಸಮುದಾಯ ಓಲೈಕೆ ಹೆಸರಿನಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಜನರ ಬದುಕಿನಲ್ಲಿ ಚೆಲ್ಲಾಟ ಆಡುವುದು ಬೇಡ, ಐದು ವರ್ಷಗಳ ಅವಧಿಯ ಐದು ಬಜೆಟ್ನಲ್ಲಿ ನನ್ನ ಕ್ಷೇತ್ರದ ಜವಾಬ್ದಾರಿಯಲ್ಲಿ ಪಾಲು ಎಷ್ಟು ಎಂದು ದಕ್ಷತೆಯಿಂದ ಹೇಳುವ ಸಮಯ ಬಂದಿದೆ.ಬಜೆಟ್ನಲ್ಲಿ ತಂದಿರುವ ಯೋಜನೆಗಳ ಬಗ್ಗೆ ಹೇಳಲು ಅವರಲ್ಲಿ ಏನು ಇಲ್ಲ, ಬರೀ ಸುಳ್ಳು, ನಾಟಕ, ಕೆಟ್ಟ ಆರೋಪ, ಕುತಂತ್ರ ರಾಜಕಾರಣ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಶೋಷಣೆ ಮಾಡುವುದನ್ನು ಜನರು ನೋಡಿದ್ದಾರೆ.ಕ್ಷೇತ್ರದ ಜನರು ಎರಡು ಅವಧಿಯನ್ನು ಹೋಲಿಕೆ ಮಾಡುತ್ತಿದ್ದು, ಯಾರ ಅವಧಿಯಲ್ಲಿ ಎಷ್ಟು ಅಭಿವೃದ್ದಿಯಾಗಿದೆ ಎನ್ನುವುದು ಜನರಿಗೆ ತಿಳಿದಿದೆ ಎಂದರು.
ಸದನ ಸಮಿತಿಯ ಅಧ್ಯಕ್ಷರಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನತೆಗೆ ಎಲ್ಲಾ ಕ್ಷೇತ್ರಗಳಲ್ಲಿ ಮೀಸಲಾತಿ ಸಿಗುವಂತೆ ಮಾಡಿದ್ದೇನೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉದ್ಯೋಗ ಕ್ರಾಂತಿಯ ಜೊತಗೆ ಆಧುನಿಕ ಕೃಷಿ ಪದ್ದತಿಯನ್ನು ಜಾರಿಗೊಳಿಸಲಾಗುವುದು. ರೈತನ ಬದುಕಿನಲ್ಲಿ ಹಸನ್ಮಾಖಿಯನ್ನಾಗಿ ಮಾಡಲು, ಯುವಕ- ಯುವತಿಯರ ಬಾಳಲ್ಲಿ ಉದ್ಯೋಗದ ಭರವಸೆ ಮೂಡಿಸುವುದು, ಆದಾಯ ವೃದ್ದಿ ಮಾಡುವುದರ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಜಿಲ್ಲೆಯಲ್ಲಿ ಹೆಚ್ಚಿಸಿ, ಜಿಲ್ಲೆ ಒಂದು ಉತ್ತಮ ಪ್ರವಾಸಿ ತಾಣವನ್ನಾಗಿ ಮಾಡಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ, ಮನೆ ಮಕ್ಕಳಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಿಲ್ಲಾಧ್ಯಕ್ಷ ಸುರೇಶ್ ಕಂಠಿ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಾಧು, ಚಂದ್ರಶೇಖರ್, ಶಾಂತರಾಜು,ಸಾಗ್ಯಾ ಕೆಂಪಣ್ಣ,ಜಗದೀಶ್ ಶಿವಕುಮಾರ್,ರಮೇಶ್ ಸೇರಿದಂತೆ ಇತರರಿದ್ದರು.