ಪಿ ಎಂ ವಿಶ್ವಕರ್ಮ ಯೋಜನೆ 18 ವಿಧದ ಸಾಂಪ್ರದಾಯಕ ಕುಶಲಕರ್ಮಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಉಪಯುಕ್ತವಾಗಿದ್ದು, ಅರ್ಹ ಫಲಾನುಭವಿಗಳನ್ನು ಗುರುತಿಸಿ ನೋಂದಣಿ ಚುರುಕುಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.
ಮಂಡ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪಿ ಎಂ ವಿಶ್ವಕರ್ಮ ಯೋಜನೆ ಅನುಷ್ಠಾನ ಕುರಿತು ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ನಡೆಸಿ ಮಾತನಾಡಿದ ಅವರು, ಮರೆಗೆಲಸಗಾರರು, ಗಾರೆ ಕೆಲಸಗಾರರು, ವಿಗ್ರಹ ತಯಾರಕರು/ಕಲ್ಲು ಹೊಡೆಯುವವರು, ಟೈಲರ್, ಅಕ್ಕಸಾಲಿಗರು, ಕ್ಷೌರಿಕರು, ಅಗಸರು(ದೋಬಿ), ಬುಟ್ಟಿ/ಚಾಪೆ/ಕಸ ಪೊರಕೆ ತಯಾರಕರು, ಕಾಯರ್ ನೇಕಾರರು, ಕಮ್ಮಾರರು, ಕುಂಬಾರರು, ಹೂವಿನ ಹಾರ ತಯಾರಕರು, ಮೀನು ಬಲೆ ತಯಾರಕರು, ಧೋಣಿ ತಯಾರಕರು, ಚರ್ಮಕಾರರು, ಆಯುಧ ತಯಾರಕರು, ಕಬ್ಬಿಣದ ಉಪಕರಣಗಾರರು, ಆಟಿಕೆ ತಯಾರಕರು, ಬೀಗ ತಯಾರಕರನ್ನು ಒಳಗೊಂಡಂತೆ ವಿವಿಧ ರೀತಿಯ ಒಟ್ಟು 18 ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಪಿ ಎಂ ವಿಶ್ವಕರ್ಮ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.
ಪಿ ಎಂ ವಿಶ್ವಕರ್ಮ ಯೋಜನೆಯಡಿ ನೋಂದಣಿಯಾದ ನಂತರ ಡಿಜಿಟಲ್ ಐಡಿ, ಪಿ ಎಂ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಐಡಿ ಕಾರ್ಡ್ ನೀಡಲಾಗುವುದು. ಆಸಕ್ತರಿಗೆ 500 ರೂ ಸಂಭಾವನೆಯೊಂದಿಗೆ 5 ದಿನದ ಕೌಶಲ್ಯ ತರಬೇತಿ ನೀಡಿ, ರೂ 15,000 ವರೆಗಿನ ಟೂಲ್ ಕಿಟ್ ನೀಡಲಾಗುವುದು ಎಂದರು.
ತರಬೇತಿಯ ನಂತರ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್ ನಿಂದ ಶೇ.5 ರ ಬಡ್ಡಿ ದರದಲ್ಲಿ 2 ಹಂತಗಳಲ್ಲಿ ಸಾಲವನ್ನು ನೀಡಲಾಗುವುದು. ಮೊದಲ ಹಂತ ಗರಿಷ್ಠ ರೂ 1 ಲಕ್ಷ , 18 ತಿಂಗಳ ಮರುಪಾವತಿ ಹಾಗೂ ಎರಡನೇ ಹಂತದಲ್ಲಿ ಗರಿಷ್ಠ ರೂ 2 ಲಕ್ಷ , 30 ತಿಂಗಳ ಮರುಪಾವತಿ ಷರತ್ತಿನೊಂದಿಗೆ ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ ಇದುವರೆಗೂ ಪಿ ಎಂ ವಿಶ್ವಕರ್ಮ ಯೋಜನೆಗೆ ಒಟ್ಟು 44,000 ನೋಂದಣಿಯಾಗಿದ್ದು, ಇನ್ನೂ ಹೆಚ್ಚಿನ ಕುಶಲರ್ಮಿಗಳ ನೋಂದಣಿಯಾಗಬೇಕು. ಇದಕ್ಕಾಗಿ ವಿವಿಧ ಕುಶಲರ್ಮಿಗಳ ಸಂಘಟನೆಗಳ ಸಹಯೋಗದೊಂದಿಗೆ ಕಾರ್ಯಾಗಾರ ನಡೆಸಿ ಎಂದರು.
ಈ -ಶ್ರಮ್ ಪೋರ್ಟಲ್ ನಲ್ಲಿ ಅಸಂಘಟಿತ ಕಾರ್ಮಿಕರ ಮಾಹಿತಿ ಲಭ್ಯವಿದ್ದು ಕಾರ್ಮಿಕ ಇಲಾಖೆ ಸಹಕಾರದೊಂದಿಗೆ ಈ ಯೋಜನೆಯಡಿ ಬರುವ ಸಾಂಪ್ರದಾಯಿಕ ಕುಶಲಕರ್ಮಿಗಳನ್ನು ಗುರುತಿಸಿ ನೋಂದಣಿ ಮಾಡಿ ಎಂದರು.
ಪಿ ಎಂ ವಿಶ್ವಕರ್ಮ ಯೋಜನೆಗೆ 18 ವರ್ಷ ತುಂಬಿರುವ ಹಾಗೂ ನಿಗಧಿಪಡಿಸಿರುವ ವೃತ್ತಿಗಳಲ್ಲಿ ಕೆಲಸ ಮಾಡುತ್ತಿರುವವರು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಜೋಡಿತ ಮೊಬೈಲ್ ಸಂಖ್ಯೆ, ರೇಷನ್ ಕಾರ್ಡ್ ಹಾಗೂ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಅರ್ಜಿ ಸಲ್ಲಿಸಲು ಬೇಕಿರುವ ದಾಖಲೆಗಳು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರ ಕಛೇರಿ ದೂ. ಸಂ. 08232-200964, 08232-221358 ಅಥವಾ ಪಿ ಎಂ ವಿಶ್ವಕರ್ಮ ಯೋಜನೆ ಸಾಮಾನ್ಯ ಸೇವಾ ಕೇಂದ್ರ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು ಎಂದರು.
ಸಭೆಯಲ್ಲಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಶೇಖ್ ತನ್ವಿರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ. ಎಚ್ .ಎಲ್ . ನಾಗರಾಜು, ಉಪವಿಭಾಗಾಧಿಕಾರಿ ಶಿವಮೂರ್ತಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್ ಕುಮಾರ್, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್ ಹಾಗೂ ಇನ್ನಿತರು ಉಪಸ್ಥಿತರಿದ್ದರು