-
ಅಧ್ಯಕ್ಷರಿಗೆ ಚೆಕ್ ಸಹಿಇಲ್ಲಾ
- ಲೈಸನ್ಸ್, ಇ- ಸ್ವತ್ತು ಗೆ ಸಭೆಯ ಹಂಗಿಲ್ಲಾ
- ಅಧಿಕಾರಶಾಹಿಗೆ ಮಣೆ
- ರಮೇಶ್ ಕುಮಾರ್ ನೇತೃತ್ವದ ಸಮಿತಿ ತಂದ ತಿದ್ದುಪಡಿಗಳು ಕಾರಣ
ಅಧಿಕಾರವಿಕೇಂದ್ರಕರಣಕ್ಕೆ ಒತ್ತು ನೀಡುವ ಆಶಯದಿಂದ ರೂಪುಗೊಂಡ ಪಂಚಾಯುತ್ ರಾಜ್ ಸಂಸ್ಥೆ ಗಳು ಗ್ರಾಮ ಸ್ವರಾಜ್ಯದ ಪರಿಕಲ್ಪನೆಯಡಿ ಕಾರ್ಯನಿರ್ವಹಿಸುತ್ತಿದ್ದವು.
ಗ್ರಾಮಸಭೆಗೆ ವಿಶೇಷ ಒತ್ತು ನೀಡುವ ಮೂಲಕ ಗ್ರಾಮದ ಬೇಕು-ಬೇಡಗಳ ನಿರ್ಧಾರ ಗ್ರಾಮಸಭೆಗೆ ನೀಡಲಾಗಿತ್ತು.
ಆ ಮೂಲಕ ನೇರಪ್ರಜಾಪ್ರಭುತ್ವ ಪರಿಕಲ್ಪನೆ ಮತ್ತು ಅದಿಕಾರ ಗ್ರಾಮಸಭೆಗೆ ನೀಡಲಾಗಿತ್ತು. ಸಾಮಾನ್ಯ ಸಭೆಗಳು ಸಂಸದೀಯಮಾದರಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿವೆ.
ಒಂದು ಕಾಲಕ್ಕೆ ಪಂಚಾಯುತ್ ರಾಜ್ ಕಾಯ್ದೆ ಜಾರಿಗೆ ಕರ್ನಾಟಕದ ಸ್ಥಳೀಯಾಡಳಿತ ಮಾದರಿಯು ಪ್ರೇರಣೆಯು ಆಗಿತ್ತು.
ಈ ಎಲ್ಲದರ ಹಿನ್ನಲೆಯಲ್ಲಿ ಪ್ರಜಾಪ್ರಭುತ್ವದ ಆಡಳಿತದ ನೈಜ ಜಾರಿಗಾಗಿ ಗ್ರಾ. ಪಂ. ಅಧ್ಯಕ್ಷರಿಗೆ ಚೆಕ್ ಸಹಿ ಅಧಿಕಾರ ನೀಡಲಾಗಿತ್ತು.
1993 ರಲ್ಲಿ ಸಂವಿದಾನದ 73 ನೇತಿದ್ದುಪಡಿ ಮೂಲಕ ಜಾರಿಗೆ ಬಂದ ಪಂಚಾಯುತ್ ರಾಜ್ ವ್ಯವಸ್ಥೆಯಲ್ಲಿ ಕರ್ನಾಟಕದಲ್ಲಿ ವಿಶೇಷವಾಗಿ ಚೆಕ್ ಸಹಿ ಅಧಿಕಾರ ನೀಡಿತ್ತು.
ಇಂತಹ ಅಧಿಕಾರ ಕಾಯ್ದೆ ಬದ್ದವಾಗಿ ನೀಡಿಲ್ಲಾವಾದರು ಸುತ್ತೊಲೆ/ಆದೇಶ ದ ಮೂಲಕ ಇಂತಹ ಅಧಿಕಾರ ನೀಡಲಾಗಿತ್ತು.
ಆದರೆ ಪ್ರಸ್ತುತ ಸರ್ಕಾರ ಗ್ರಾ ಪಂ ಅಧ್ಯಕ್ಷರಿಗಿದ್ದ ಇಂತಹ ಚೆಕ್ ಸಹಿ ಅಧಿಕಾರವನ್ನು ಹಿಂತೆಗೆದುಕ್ಕೊಂಡು, ಪಿ. ಡಿ. ಓ. ಹಾಗೂ ದ್ವಿತೀಯ ದರ್ಜೆಯ ಲೆಕ್ಕಸಹಾಯಕರಿಗೆ ನೀಡಲು ಮುಂದಾಗಿದೆ. ಇದು ಅಧಿಕಾರ ವಿಕೇಂದ್ರೀಕರಣ ಆಶಯಗಳಿಗೆ ಕೊಳ್ಳಿ ಇಡುವ ತಿರ್ಮಾನವಾಗಿದೆ.
ಇಷ್ಠಕ್ಕೆ ನಿಲ್ಲದ ಸರ್ಕಾರದ ಗಧಾಪ್ರಹಾರ “ಸಾಮಾನ್ಯಸಭೆಗಳ “ಮೇಲು ಬೀಸಿದೆ ವಾಣಿಜ್ಯ ಉದ್ದೇಶದ ಲೈಸನ್ಸ್ ಗಳು, ಇ-ಖಾತೆಗಳು ಸಾಮಾನ್ಯ ಸಭೆಯ ಒಪ್ಪಿಗೆ ಪಡೆಯಬೇಕಿತ್ತು.
ಇದನ್ನ ತೆಗೆದು ಇಂತಹ ಅಧಿಕಾರ ಸಭೆಯ ಬದಲಿಗೆ ಪಿ.ಡಿ.ಓ.ಗೆ ನೀಡಿ ಘಟನ್ನೋತ್ತರ ಸಭೆಯ ಗಮನಕ್ಕೆ ತರಲು ಸೂಚಿಸಿದೆ.
ಇದರಿಂದ ಗ್ರಾಮಪಂಚಾಯಿತಿಯ ಆಡಳಿತ ಮಂಡಳಿಗಾಗಲಿ, ಅಧ್ಯಕ್ಷ ಉಪಾಧ್ಯಕ್ಷರಿಗಾಗಲಿ ನೂತನ ಲೈಸನ್ಸ್ ನೀಡಿದ್ದರ ಕುರಿತು ಮಾಹಿತಿಯೇ ಇರದ ಸ್ಥಿತಿ ಇದರಿಂದ ನಿರ್ಮಾಣವಾಗಿದೆ.
ಲೈಸನ್ಸ್ ನೀಡಿದ ಮೇಲೆ ಸಭೆಯ ಗಮನಕ್ಕೆ ತಂದು ಮಾಡುವುದೇನಿದೆ ಎಂಬ ಪ್ರಶ್ನೆಯು ಉದ್ಭವಿಸುತ್ತದೆ.
ಸರ್ಕಾರ ನೀಡಿರುವ ಕಾರಣಗಳು
ಇದಕ್ಕೆ ಸರ್ಕಾರ ನೀಡಿರುವ ಕಾರಣ ನಿಯಮಿತವಾಗಿ ಗ್ರಾ.ಪಂ. ಸಭೆಗಳು ನಡೆಯುತ್ತಿಲ್ಲ ಎಂಬುದು.
ಗ್ರಾ. ಪಂ. ಅಧ್ಯಕ್ಷರು ಚೆಕ್ ನೀಡಲು ಲಂಚ ಪಡೆಯುವ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ ಎಂಬ ಪಿಳ್ಳೆ ನೆವಗಳನ್ನು ಸರ್ಕಾರ ನೀಡಿದೆ.
ನಿಯಮಿತವಾಗಿ ಸಭೆ ನಡೆಯದಿದ್ದರೆ ಅದಕ್ಕೆ ಕಾಯ್ದೆಯಲ್ಲಿ ಶಿಕ್ಷೆ ತಿಳಿಸಲಾಗಿದೆ. ಈ ಸಂಬಂಧವಾಗಿ ಎಷ್ಠು ಗ್ರಾ. ಪಂ. ಮೇಲೆ ಸರ್ಕಾರವು ಕ್ರಮ ಜರುಗಿಸಿದೆ?
ಇನ್ನು ಲೋಕಾಯುಕ್ತದ ಬಲೆಗೆ ಬಿದ್ದ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ಅದರೆ ಬೆರಳೆಣಿಕೆಯಷ್ಟು ಪ್ರಕರಣ ಮುಂದಿಟ್ಟುಕೊಂಡು, ಅದನ್ನೆ ನೆಪ ಮಾಡಿ ಚೆಕ್ ಸಹಿ ಅಧಿಕಾರ ತೆಗೆಯುತ್ತೇವೆ ಎನ್ನುವುದಾದರೆ, ಪಿ.ಡಿ.ಓ.ಗಳು ಲೋಕಾಯುಕ್ತದ ಲಂಚದ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವುದಕ್ಕೆ ಸರ್ಕಾರದ ಸಮಜಾಯಿಷಿ ಎನಿದೆ?
ಸರ್ಕಾರದ ಮುಖ್ಯ ಅಧಿಕಾರಿಗಳಿಂದ ಜವಾನನವರೆಗೆ ಲಂಚ ಪಡೆದ ಆರೋಪಗಳಿವೆ, ಸಿಕ್ಕಿಬಿದ್ದ ಉದಾಹರಣೆಗಳಿವೆ, ಶಿಕ್ಷೆ ಆದದ್ದು ಇದೆ. ಆಗಿದ್ದ ಮೇಲೆ ಪಿ ಡಿ ಓ ಗಳಿಗೆ ಯಾವ ಆಧಾರದ ಮೇಲೆ ಚೆಕ್ ಸಹಿ ಅಧಿಕಾರ ಮುಂದುವರೆಸಲಾಗುತ್ತಿದೆ, ಇದಕ್ಕೆ ಸರ್ಕಾರ ಉತ್ತರಿಸಬೇಕಾಗಿದೆ.
ಗ್ರಾ. ಪಂ. ಅಧ್ಯಕ್ಷರು ಸುರಕ್ಷಿತವಾಗಿ (ಸೇಪಾಗಿ) ಇರಬೇಕು ಎನ್ನುವುದು ಸರ್ಕಾರದ ನಿಲುವಾದರೆ, ಬಡಪಾಯಿ ಪಿ.ಡಿ.ಓ. ಗಳ ಮೇಲೆ ಕನಿಕರ ತೋರಿ ಚೆಕ್ ನ ಅಧಿಕಾರ (ಪವರ್) ತೆಗೆದಿಲ್ಲಾವೇಕೇ?
ಇಂತಹ ಅವಾಂತರಗಳಿಗೆಲ್ಲಾ ಮಾಜಿ ವಿಧಾನಸಭಾ ಅಧ್ಯಕ್ಷರಾಗಿದ್ದ ರಮೇಶ್ ಕುಮಾರ್ ನೇತೃತ್ವದ ಸಮಿತಿ ತಂದ ತಿದ್ದುಪಡಿಗಳು ಕಾರಣವಾದವು. ರಮೇಶ್ ಕುಮಾರ್ ಸಮಿತಿ 2015 ರಲ್ಲಿ ಸಮಿತಿ ರಚನೆ ಆಗಿ 2016 ರಲ್ಲಿ ವರದಿ ನೀಡಿತ್ತು. ಈ ಸಮಿತಿಯು ಚೆಕ್ ಪವರ್ ಹಿಂಪಡೆಯುವ ಬಗ್ಗೆ ಹೇಳಿಲ್ಲಾ, ಆದರೆ ಸುತ್ತೋಲೆ ಮೂಲಕ ಜಾರಿಯಲ್ಲಿದ್ದ ಗ್ರಾ ಪಂ ಅಧ್ಯಕ್ಷರ ಸಹಿ ಅಧಿಕಾರವನ್ನು ಕಾಯ್ದೆಯಲ್ಲಿ ಸೇರಿಸಬಹುದಿತ್ತು.
ಗ್ರಾಮಸಭೆ ಹಳ್ಳಿಯ ವಿಧಾನ ಸಭೆ ಎನ್ನುವ ವ್ಯಾಖ್ಯಾನ ಕ್ಕೆ ರಮೇಶ್ ಕುಮಾರ್ ಸಮಿತಿ ಬಲಹೀನ ಗೊಳಿಸಿ, ಗ್ರಾಮಸಭೆಗಳಿಗಿದ್ದ ಕಾರ್ಯಕ್ರಮಗಳು, ಕಾಮಗಾರಿಗಳ ಆಯ್ಕೆಯ ಅಧಿಕಾರವನ್ನು ಮೊಟಕುಗೊಳಿಸಿತು.
ಗ್ರಾಮಸಭೆ ಕಾಮಗಾರಿಗಳ ಪಟ್ಟಿ ಮಾಡಬಹುದು ಅಷ್ಠೇ. ಸಾಮಾನ್ಯ ಸಭೆ ಅಂತಿಮ ಗೊಳಿಸುವಾ/ ಆಧ್ಯತೆ ಗೊಳಿಸುವ ಅಧಿಕಾರ ಸಾಮನ್ಯ ಸಭೆಗೆ ನೀಡಲಾಗಿತ್ತು.ಇದೀಗ ಸಾಮನ್ಯ ಸಭೆಯ ಅಧಿಕಾರವನ್ನು ಕಸಿದುಕ್ಕೊಂಡು ಪ್ರಜಾಪ್ರಭುತ್ವ ಮತ್ತು ಅಧಿಕಾರ ವಿಕೇಂದ್ರೀಕರಣ ಆಶಯಗಳಿಗೆ ಕೊಳ್ಳಿ ಇಟ್ಟಿದೆ ಸರ್ಕಾರ.
ಇದನ್ನೂ ಓದಿ : ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ
ನೆರವಾದ ಅಂಶ
ಗ್ರಾಮಪಂಚಾಯಿತಿ ಅಧ್ಯಕ್ಷರಿಗೆ ಚೆಕ್ ಸಹಿಮಾಡುವ ಅಧಿಕಾರ ಕಾಯ್ದೆ ಬದ್ದವಾಗಿ ನೀಡಿದ್ದಲ್ಲಾ. ಬದಲಾಗಿ ಸುತ್ತೊಲೆ / ಆದೇಶದ ಮೂಲಕ ನೀಡಿದ್ದಾಗಿತ್ತು.
ಇದಕ್ಕೆ ಪೂರಕವಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯುತ್ ರಾಜ್ ಕಾಯ್ದೆಯು ಗ್ರಾಮಪಂಚಾಯಿತಿ ಅಯ್ಯವ್ಯಯ ಮತ್ತು ಲೆಕ್ಕಪತ್ರಗಳ ನಿಯಮಕ್ಕೆ 2006 ರಲ್ಲಿ ತಂದಿರಿಸಿಕ್ಕೊಂಡಿಹ ತಿದ್ದುಪಡಿಯಂತೆ ” ಗ್ರಾಮಪಂಚಾಯಿಯ ಹಣಕಾಸಿನ ವ್ಯವಹಾರವನ್ನು ಸರ್ಕಾರ ಸೂಚಿಸುವ ಅಧಿಕಾರಿಗಳು ಅಥವಾ ಪ್ರಾಧಿಕಾರ ನಿರ್ವಹಿಸಬಹುದು ಎಂದಿದೆ.
ಇಂತಹ ರಕ್ಷಣಾತ್ಮಕ ಆಟದ ಮೂಲಕ ಪ್ರಜಾಪ್ರಭುತ್ವ ಮತ್ತು ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಗೆ ಮಾರಕವಾದ ಪ್ರಕ್ರಿಯೆಯನ್ನು ಸರ್ಕಾರ ಮಾಡಲು ಹೊರಟಿರುವ ಸರ್ಕಾರದ ಕ್ರಮ ಖಂಡನೀಯವಾದದ್ದು.
ಇಂತಹ ಪ್ರಕ್ರಿಯೆ ಸಚಿವ ಸಂಪುಟದ ಮುಂದೆ ಚರ್ಚೆ ಆಗಬೇಕಾದ ಅಗತ್ಯವು ಇಲ್ಲಾ. ಇದು ಕೇವಲ ಪಂಚಾಯುತ್ ರಾಜ್ ಸಚಿವರ ಒಪ್ಪಿಗೆ ಸಿಕ್ಕರೆ ಜಾರಿಗೆ ಬಂದು ಬಿಡುತ್ತದೆ. ಸದ್ಯ ಇನ್ನು ಪಂಚಾಯುತ್ ರಾಜ್ ಸಚಿವರ ಸಹಿ ಈ ಪ್ರಕ್ರಿಯೆಗೆ ಬಿದ್ದಿಲ್ಲಾ ಎಂಬುದು ಸಮಾಧಾನಕರ ಸಂಗತಿ.
ಸದ್ಯ ಪಂಚಾಯುತ್ ರಾಜ್ ಖಾತೆಯನ್ನು ತಮ್ಮ ಬಳಿಯೇ ಮುಖ್ಯಮಂತ್ರಿಗಳು ಇಟ್ಟುಕ್ಕೊಂಡಿದ್ದು ಇಂತಹ ಜನ ವಿರೋದಿ ಪ್ರಜಾತಂತ್ರ ವಿರೋದಿ ಪ್ರಕ್ರಿಯೆಗೆ ಸಹಿ ಹಾಕದೆ, ಅಧಿಕಾರಶಾಹಿ ಅಟ್ಟಹಾಸಗೈಯಲು ಬಿಡದೆ,ಕರ್ನಾಟಕವು ದೇಶಕ್ಕೆ ಮಾದರಿಯು ಅನುಕರಣೀಯಾಗುವ ರೀತಿಯಲ್ಲಿ ಚೆಕ್ ಸಹಿ ಅಧಿಕಾರ ಗ್ರಾ.ಪಂ. ಅಧ್ಯಕ್ಷರಲ್ಲಿಯೆ ಉಳಿಸುವುದು ಒಳ್ಳೆಯದು.
– ನ.ಲಿ.ಕೃಷ್ಣ
ನಗರಕೆರೆ ಗ್ರಾ. ಪಂ.ಮಾಜಿ ಅಧ್ಯಕ್ಷ, ಮದ್ದೂರು ತಾ. ಮಂಡ್ಯ ಜಿಲ್ಲೆ