ಮಂಡ್ಯ ತಾಲ್ಲೂಕಿನ ಸಾತನೂರು ಗ್ರಾಮದ ಕಾಡಾ ಫಾರಂ ವ್ಯಾಪ್ತಿಯ ಪ್ರದೇಶಕ್ಕೆ ಸರಬರಾಜಾಗುತ್ತಿದ್ದ ವಿದ್ಯುತ್ ಪೂರೈಕೆ ಸ್ಥಗಿತ ಮಾಡಿರುವುದನ್ನು ವಿರೋಧಿಸಿ ಸಾತನೂರು ಗ್ರಾಮಸ್ಥರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಚೆಸ್ಕಾಂನ ಅಧೀಕ್ಷಕ ಇಂಜಿನಿಯರ್ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟಿಸಿ ಮನವಿ ಸಲ್ಲಿಸಿದರು.
ಗ್ರಾಮದ ಕಾಡಾ ಫಾರಂ ವ್ಯಾಪ್ತಿಯ ಐಪಿ ಸೆಟ್, ಪೌಟ್ರಿ ಫಾರಂ, ರೇಷ್ಮೆ ಸಾಕಾಣಿಕೆ ಮನೆಗಳಿಗೆ ಕಳೆದ ನಾಲ್ಕು ದಶಕದಿಂದ ಮಂಡ್ಯ ನಗರದ ಫೀಡರ್ ನಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತಿತ್ತು, ಆದರೆ ಇದನ್ನು ಕಡಿತ ಮಾಡಿ ಗ್ರಾಮಾಂತರ ಪ್ರದೇಶದ ಬಸವನಪುರ ಫೀಡರ್ ನಿಂದ ವಿದ್ಯುತ್ ನೀಡಲಾಗುತ್ತಿದೆ, ಆದರೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಯಾಗದಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಕೆ ಆರ್ ಎಸ್ ನಲ್ಲಿ ನೀರಿನ ಕೊರತೆ ಮತ್ತು ಬರ ಪರಿಸ್ಥಿತಿ ಇರುವುದರಿಂದ ಬೆಳೆಗೆ ಕೊಳವೆ ಬಾವಿಗಳಿಂದ ನೀರು ಪೂರೈಸಲು ಪಂಪ್ ಸೆಟ್ ಗಳಿಗೆ ನಿರಂತರ ವಿದ್ಯುತ್ ಅವಶ್ಯಕವಾಗಿದೆ, ಆ ನಿಟ್ಟಿನಲ್ಲಿ ಈ ಹಿಂದಿನಂತೆ ಮಂಡ್ಯ ಫೀಡರ್ ನಿಂದ ವಿದ್ಯುತ್ ಸರಬರಾಜು ಮಾಡುವಂತೆ ಒತ್ತಾಯಿಸಿದರು.
ಸಾತನೂರು ಗ್ರಾಮದ ಮುಖಂಡ ಮಹೇಶ್, ದೇವರಾಜ್, ಅಶೋಕ್, ಉಮೇಶ್, ರವಿ, ಜಗದೀಶ್, ರಾಮಲಿಂಗ ನೇತೃತ್ವ ವಹಿಸಿದರು.