ರೋಗವನ್ನು ದೂರವಿಟ್ಟು ಆರೋಗ್ಯವನ್ನು ವೃದ್ಧಿಸುವ ಶಕ್ತಿ ಯೋಗಾಭ್ಯಾಸಕ್ಕೆ ಇದೆ. ಯೋಗ ಎಂಬುದು ದಿನನಿತ್ಯ ರೂಡಿಸಿಕೊಂದರೆ, ಅದು ಹಣ ಕಟ್ಟದೆ ಸ್ವಂತ ಶ್ರಮದಿಂದ ಪಡೆಯುವ ಆರೋಗ್ಯ ವಿಮೆ ಇದ್ದಂತೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಯೋಗ ಮನಸ್ಸು ಹಾಗೂ ದೇಹದ ಆರೋಗ್ಯಕ್ಕೆ ಪೂರಕವಾಗಿದ್ದು, ಯೋಗವನ್ನು ಸಂಜೀವಿನಿ ಎಂದು ಕರೆಯಬಹುದು. ಪ್ರತಿಯೊಬ್ಬರೂ ದಿನದ 24 ಗಂಟೆಯಲ್ಲಿ ಒಂದು ಗಂಟೆ ಯೋಗಾಭ್ಯಾಸಕ್ಕೆ ಮೀಸಲಿಡಿ ಎಂದರು.
ಯೋಗ ಬಲ್ಲವನಿಗೆ ರೋಗದ ಭಯವಿಲ್ಲ, ರೋಗ ಇರುವವನಿಗೆ ಯೋಗದ ಅರಿವಿಲ್ಲ. ರೋಗ ಬರುವ ಮುಂಚೆ ಯ ಯೋಗಾಭ್ಯಾಸ ಮಾಡುವ ಯೋಗ ನಮ್ಮದಾಗಲಿ ಎಂದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಶ್ರೀಪುರುಷೋತ್ತಮನಂದ ನಾಥ ಸ್ವಾಮೀಜಿ ಮಾತನಾಡಿ, ದೇಹ ದಂಡನೆ ಮಾಡಲು ಹೋಗಿ ಎಷ್ಟೋ ಜನರು ಪ್ರಾಣ ಕುತ್ತು ತಂದು ಕೊಂಡಿರುವವರು ಕೂಡ ಇದ್ದಾರೆ, ಆದರೆ ಯೋಗ ಮಾಡುವುದರಿಂದ ಯಾವುದೇ ತರಹ ಪ್ರಾಣ ಹಾನಿ ಇಲ್ಲ, ಹಣ ಖರ್ಚು ಮಾಡುವ ಆಗಿಲ್ಲ. ಹೆಚ್ಚು ಶ್ರಮ ಕೂಡ ಹಾಕುವ ಆಗಿಲ್ಲ ಆದ್ದರಿಂದ ಪ್ರತಿಯೊಬ್ಬರು ಕೂಡ ಯೋಗವನ್ನು ಮಾಡಿ ಮನಸ್ಸಿನ ನೆಮ್ಮದಿಯನ್ನು ಪಡೆದುಕೊಳ್ಳಿ ಎಂದು ಹೇಳಿದರು.
ಶ್ರೀರಂಗಪಟ್ಟಣ ಬೇಬಿ ಮಠ ಮತ್ತು ಚಂದ್ರವನಾಶ್ರಮ ಪೀಠಧ್ಯಕ್ಷರಾದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಗಳು ಮಾತಾನಾಡಿ ಇಡೀ ವಿಶ್ವಕ್ಕೆ ಯೋಗ ಪರಿಚಯಿಸಿದ ಹೆಮ್ಮೆ ಭಾರತ ದೇಶಕ್ಕಿದೆ.
ಇಂದು ಎಲ್ಲಾ ರಾಷ್ಟ್ರಗಳ ಜೊತೆಗೆ ಏಕಕಾಲಿಕವಾಗಿ ಯೋಗದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಕಾರ್ಯನಿರ್ವಾಹಣಾಧಿಕಾರಿ ಶೇಕ್ ತನ್ವಿರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜ್, ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ.ಸೀತಾಲಕ್ಷ್ಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಓಂ ಪ್ರಕಾಶ್, ನೆಹರು ಯುವ ಕೇಂದ್ರದ ಅಧಿಕಾರಿ ರಾಜೇಶ್ ಕಾರಂತ್ ಸೇರಿದಂತೆ ಮತ್ತಿತರರಿದ್ದರು.