ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಜ್ವಲ್ ರೇವಣ್ಣ ಶೀಘ್ರವಾಗಿ ಬಂಧಿಸಲು ಒತ್ತಾಯಿಸಿ ಮಹಿಳಾ ಕೃಷಿ ಕೂಲಿಕಾರರ ಉಪಸಮಿತಿ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಪ್ರಜ್ವಲ್ ರೇವಣ್ಣ ಬಂಧಿಸಲು ಆಗ್ರಹಿಸಿದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಕಚೇರಿಗೆ ತಲುಪಿಸಲಾಯಿತು.
ಹಾಸನದ ಪ್ರಜ್ವಲ್ ರೇವಣ್ಣ ನಡೆಸಿರುವ ವಿಕೃತ ಲೈಂಗಿಕ ಹಗರಣವನ್ನು ಕಂಡು ನಾಗರೀಕ ಸಮಾಜವೇ ತಲೆ ತಗ್ಗಿಸುವಂತಾಗಿದೆ.ಪ್ರಜ್ವಲ್ ರೇವಣ್ಣ ಲೈಂಗಿಕ ಕ್ರಿಯೆಗಳನ್ನು ನಡೆಸಿರುವ ಸುಮಾರು 2900 ವೀಡಿಯೋಗಳನ್ನು ಮತ್ತು ಪೋಟೋಗಳನ್ನು ಸೆರೆ ಹಿಡಿದಿಟ್ಟುಕೊಂಡಿರುವುದಂತೂ ಅತ್ಯಂತ ಖಂಡನೀಯವಾಗಿದೆ. ಸಂತ್ರಸ್ತರು ದೂರು ನೀಡದಂತೆ ಬೆದರಿಸುವುದು, ಅಪಹರಿಸುವುದು, ಆನೇಕ ವರ್ಷಗಳಿಂದ ಮುಚ್ಚಿಟ್ಟಿರುವುದು ಘನ ಘೋರ ಅಪರಾಧವಾಗಿದೆ. ಇಂತಹ ದುಸ್ಸಾಹಸವನ್ನು ಪ್ರೋತ್ಸಾಹಿಸಿರುವ ಹೆಚ್ ಡಿ ರೇವಣ್ಣ ಸಹ ಅಷ್ಟೇ ಅಪರಾಧಿಯಾಗಿದ್ದಾರೆ ಎಂದು ಸಂಘಟನಾಕಾರರು ದೂರಿದರು.
ಜಗತ್ತಿನಲ್ಲಿ ಹಿಂದೆಂದೂ ಕೇಳರಿಯದಂತಹ ಈ ಹಗರಣವನ್ನು ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರು ತಮ್ಮ ಹಿತಾಸಕ್ತಿಗೆ ಬಳಸಿರುವುದು ಮತ್ತಷ್ಟು ಆಘಾತಕಾರಿಯಾಗಿದೆ. ಈ ಕೃತ್ಯದ ಬಗ್ಗೆ ತಿಳಿದೂ ಇವರಿಗೆ ಲೋಕಸಭೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿರುವ ಮೋದಿಯ ಬಿಜೆಪಿ ರಾಜಕೀಯವಾಗಿ ದಿವಾಳಿಯಾಗಿದೆ.ಕೂಡಲೇ ಪ್ರಜ್ವಲ್ ರೇವಣ್ಣನನ್ನು ಪತ್ತೆ ಮಾಡಿ ತಕ್ಷಣ ಬಂಧಿಸಬೇಕು.ಐಪಿಸಿ ಹಾಗೂ ಯುಎಪಿಎ ಕಾಯಿದೆಯಡಿ ಪ್ರಕರಣ ದಾಖಲಿಸಿ ಮೊಕದ್ದಮೆ ಹೂಡಬೇಕು. ಸಂತ್ರಸ್ತ ಮಹಿಳೆಯರನ್ನು ರಕ್ಷಿಸಬೇಕು ಮತ್ತು ಅವರ ಕುಟುಂಬದವರಿಗೆ ಕಿರುಕುಳ, ಪ್ರಾಣಭಯ, ತೊಂದರೆ ನೀಡುವವರಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.ಎಸ್ಐಟಿ ತನಿಖೆ ಕಾಯಿದೆಯ ಅನುಸಾರ ಕಾಲ ಮಿತಿಯೊಳಗೆ ನಡೆಯಬೇಕು. ದೇಶ ಬಿಟ್ಟು ಪರಾರಿಯಾಗಲು ಅವಕಾಶ ಕಲ್ಪಿಸಿರುವ ಕೇಂದ್ರ ಗೃಹ ಇಲಾಖೆ ಮತ್ತು ಗುಪ್ತಚರ ವಿಭಾಗದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇದರ ಹೊಣೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಹೊರಬೇಕು. ದೇಶದ ಜನರಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಪ್ರಾಂತ ಕೃಷಿ ಕೂಲಿಕಾರ ಸಂಘಟನೆ ರಾಜ್ಯಾಧ್ಯಕ್ಷ ಎಂ. ಪುಟ್ಟಮಾದು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಸುರೇಂದ್ರ, ತಳಗವಾದಿ ರಾಮಣ್ಣ, ಅಮಾಸಯ್ಯ, ಅಬ್ದುಲ್ಲಾ ಮತ್ತಿತರರಿದ್ದರು.