ಪ್ರಕೃತಿ ವಿಕೋಪ ತಡೆಯಬೇಕಾದರೆ ಸಸಿ ನೆಟ್ಟು ಮರ ಬೆಳೆಸುವುದು, ಮರಗಳನ್ನು ಸಂರಕ್ಷಿಸಿ, ಪ್ರಕೃತಿ ಉಳಿಸುವುದು ಅತ್ಯಾವಶ್ಯಕ ಎಂದು ಜಿ.ಪಂ.ಮಾಜಿ ಸದಸ್ಯ ಚಂದಗಾಲು ಎನ್.ಶಿವಣ್ಣ ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ನಿಮಿತ್ತ ಹಾಗೂ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ತಾಲ್ಲೂಕು ಹಲ್ಲೇಗೆರೆ ಗ್ರಾಮದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಅ. 2ರವರೆಗೆ ದೇಶದಾದ್ಯಂತ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪರಿಸರ ಸಂರಕ್ಷಣೆ, ಸ್ವಚ್ಚತೆ, ಕೆರೆ-ಕಟ್ಟೆಗಳ ಸಂರಕ್ಷಣೆ, ಸ್ವಚ್ಚತಾ ಕಾರ್ಮಿಕರಿಗೆ ಗೌರವ ಸಮರ್ಪಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದರು.
ಜಾಗತಿಕ ತಾಪಮಾನ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ, ಓಝೋನ್ ಪದರ ಸಹ ಹಾಳಾಗುತ್ತಿದೆ. ಸೂರ್ಯನ ಕಿರಣಗಳು ನೇರವಾಗಿ ಮನುಷ್ಯನ ಮೇಲೆ ಬಿದ್ದರೆ ಚರ್ಮರೋಗ ಸೇರಿದಂತೆ ವಿವಿಧ ಕಾಯಿಲೆಗಳು ಉಂಟಾಗುತ್ತವೆ ಎಂದರು.
ಮಂಡ್ಯ ನಗರಾಧ್ಯಕ್ಷ ವಿವೇಕ್, ಬಿಜೆಪಿ ಮುಖಂಡ ಡಾ. ಸದಾನಂದ, ಗ್ರಾಮಾಂತರ ಅಧ್ಯಕ್ಷೆ ಸುಜಾತ ರಮೇಶ್, ಮುಖಂಡರಾದ ಸಾಗರ್, ಶಿವಕುಮಾರ್ ಆರಾಧ್ಯ, ವರದರಾಜು, ಜವರೇಗೌಡ, ಸುಬ್ಬಣ್ಣ, ಹಲ್ಲೆಗೆರೆ ವಿನಯ್ ಭಾಗವಹಿಸಿದ್ದರು. ಇದೇ ವೇಳೆ ಸ್ವಚ್ಚತಾ ಕಾರ್ಯಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.