Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ:ಮೊದಲ ಸ್ಥಾನಕ್ಕೆ ಕರ್ನಾಟಕ ತರುವ ಗುರಿ

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಅನುಷ್ಠಾನದಲ್ಲಿ ಕರ್ನಾಟಕ ದೇಶದಲ್ಲಿಯೇ 5ನೇ ಸ್ಥಾನದಲ್ಲಿದ್ದು ವರ್ಷಾಂತ್ಯದೊಳಗೆ ಮೊದಲ ಸ್ಥಾನಕ್ಕೆ ತರುವುದೇ ನನ್ನ ಗುರಿ ಎಂದು ಸ್ವನಿಧಿ ಯೋಜನೆಯ ರಾಜ್ಯ ಸಂಚಾಲಕ,
ಮಾಜಿ ಶಾಸಕ ಎಸ್ ಎ.ರಾಮದಾಸ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸ್ವನಿಧಿ ಯೋಜನೆಯ ಸಮರ್ಪಕವಾಗಿ ಅನುಷ್ಠಾನ ಗೊಳಿಸಲು ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಈಗಾಗಲೇ 26 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ.
ಸ್ವನಿಧಿ ಯೋಜನೆಯಡಿ ರಾಜ್ಯದ 311ನಗರ, ಪಟ್ಟಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಿಗೆ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ 3.31ಲಕ್ಷ ಗುರಿ ಹೊಂದಲಾಗಿದ್ದು, 3.08 ಲಕ್ಷ ಮಂದಿಗೆ ಸವಲತ್ತು ಕಲ್ಪಿಸಲಾಗಿದೆ. ನವೆಂಬರ್ ಅಂತ್ಯದೊಳಗೆ ಗುರಿ ಸಾಧನೆ ಮಾಡಲಾಗುವುದು ಎಂದರು.

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಕೇಂದ್ರ ಸರಕಾರವು ರಾಜ್ಯಕ್ಕೆ 555ಕೋಟಿ ರೂ. ಅನುದಾನ ನೀಡಿದೆ. ಈ ಯೋಜನೆಯಲ್ಲಿ ವ್ಯಾಪಾರಸ್ಥರು ಮಾತ್ರವಲ್ಲದೆ ಅಸಂಘಟಿತ ವಲಯದ ಕಾರ್ಮಿಕರನ್ನು ತರಲು ಉದ್ದೇಶಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಯೋಜನೆ ಜಾರಿಯಲ್ಲಿದ್ದು, ಯೋಜನೆ ಸೌಲಭ್ಯಕ್ಕಾಗಿ ಮಂಡ್ಯ ಜಿಲ್ಲೆಯಲ್ಲಿ 4181ಮಂದಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ 4065 ಅರ್ಜಿಗಳನ್ನು ಶಿಫಾರಸ್ಸು ಮಾಡಲಾಗಿದೆ. ಇದರಲ್ಲಿ 3795 ಮಂದಿಗೆ ಸಾಲ ನೀಡುವ ಮೂಲಕ ಶೇ.97ರಷ್ಟು ಸಾಧನೆ ಮಾಡಲಾಗಿದೆ ಎಂದು ವಿವರಿಸಿದರು.

ಯೋಜನೆಯಡಿ ಪ್ರಾರಂಭಿಕ ಹಂತದಲ್ಲಿ10,000ರೂ. ಸಾಲ ವಿತರಿಸಲಾಗುವುದು. ಸಾಲ ಮರುಪಾವತಿ ಮಾಡಿದಲ್ಲಿ 20,000 ಹಾಗೂ 50,000ರೂ.ಗೆ ಏರಿಕೆ ಮಾಡಲಾಗುತ್ತದೆ. ಈ ಸಾಲವನ್ನು ನಿಗದಿತ ಸಮಯದೊಳಗೆ ಮರುಪಾವತಿ ಮಾಡಿದಲ್ಲಿ ಮುದ್ರಾ ಯೋಜನೆಗೆ ಪರಿವರ್ತನೆ ಮಾಡಿ 10 ಲಕ್ಷ ರೂ.ಗಳವರೆಗೆ ಯಾವುದೇ ಗ್ಯಾರಂಟಿಗಳಿಲ್ಲದೆ ಸಾಲ ನೀಡಲಾಗುತ್ತದೆ ಎಂದರು.

ಪ್ರಧಾನಮಂತ್ರಿ ಸ್ವನಿಧಿ, ಸಮೃದ್ಧಿ ತಕ್, ವಿಶ್ವಕರ್ಮ, ಅತ್ಮನಿರ್ಭರ, ಜೀವನ್ ಸುರಕ್ಷಾ ಸೇರಿದಂತೆ 7 ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈ ಪೈಕಿ ಸ್ವನಿಧಿ ಯೋಜನೆಯಲ್ಲಿ ಇದುವರೆಗೆ ಬೀದಿಬದಿ ವ್ಯಾಪಾರಿಗಳು, ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ನೀಡಲಾಗುತ್ತಿತ್ತು. ಇದೀಗ ಮನೆ ಮನೆಗೆ ಪತ್ರಿಕೆ, ಹಾಲು ವಿತರಿಸುವವರು, ಇಸ್ತ್ರಿ ಮಾಡುವವರು, ಕ್ಯಾಟರಿಂಗ್, ಟೈಲರಿಂಗ್, ಮನೆ ಮನೆಗೆ ಆಹಾರ, ಇತರೆ ವಸ್ತುಗಳನ್ನು ವಿತರಣೆ ಮಾಡುವವರಿಗೆ ಸಾಲ ನೀಡುವ ಹೊಸ ಯೋಜನೆಯನ್ನು ಜಾರಿಗೊಳಿಸಲಾಗಿದ್ದು,ಜನತೆ ಇದರ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.

ಪ್ರಧಾನಮಂತ್ರಿ ಜೀವನ್ ಸುರಕ್ಷಾ ಯೋಜನೆಯಡಿ ಅಪಘಾತ, ಸ್ವಾಭಾವಿಕ ಸಾವು ಸಂಭವಿಸಿದಲ್ಲಿ 2 ಲಕ್ಷ ರೂ.ಗಳ ಪರಿಹಾರ ವಿತರಣೆ,ಮಾತೃವಂದನಾ ಯೋಜನೆಯಲ್ಲಿ ಗರ್ಭಿಣಿ ಸ್ತ್ರೀಯರಿಗೆ ಪ್ರತಿ ತಿಂಗಳು 5,000ರೂ., ಹೆರಿಗೆಯಾದ ನಂತರ ತಾಯಂದಿರಿಗೆ ಪ್ರತಿ ತಿಂಗಳು 6,000ರೂ.ಗಳನ್ನು ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಕೆ.ಆರ್. ಪೇಟೆ, ಪಾಂಡವಪುರ, ನಾಗಮಂಗಲ ಹಾಗೂ ಬೆಳ್ಳೂರು ಸ್ಥಳೀಯ ಸಂಸ್ಥೆಗಳಲ್ಲಿ ಈ ಯೋಜನೆ ಜಾರಿಯಲ್ಲಿದ್ದು, ಯೋಜನೆ ಪಡೆದ ಕುಟುಂಬದ ಮಕ್ಕಳಿಗೂ ಸಹ ಸಹಾಯ ಮಾಡುವಂತಹ ಪೂರ್ಣ ಪ್ರಮಾಣದ ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಜೆ.ಅಶೋಕ್ ಜಯರಾಂ, ಬಿಜೆಪಿ ಮುಖಂಡರಾದ ಇಂಡುವಾಳು ಎಸ್.ಸಚ್ಚಿದಾನಂದ , ಸಿ.ಟಿ.ಮಂಜುನಾಥ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!