ಪ್ರೊ.ಹೆಚ್.ಎಲ್ ಕೇಶವ ಮೂರ್ತಿ ಪ್ರತಿಷ್ಠಾನದ ಪ್ರೊ. ಎಚ್ಚೆಲ್ಕೆ ವೈಚಾರಿಕ ಪ್ರಶಸ್ತಿ ಪ್ರದಾನ ಸಮಾರಂಭ ಡಿ. 28 ರಂದು ಬೆಳಿಗ್ಗೆ 10:30ಕ್ಕೆ ಮಂಡ್ಯದ ಗಾಂಧಿ ಭವನದಲ್ಲಿ ನಡೆಯಲಿದೆ.
ಕುಂದಗೋಳದ ಬೀಬೀ ಪಾತಿಮಾ ಮಹಿಳಾ ಸ್ವಸಹಾಯ ಸಂಘ ಆರನೇ ವರ್ಷದ ಪ್ರೊ. ಎಚ್ಚೆಲ್ಕೆ ವೈಚಾರಿಕ ಪ್ರಶಸ್ತಿಗೆ ಬಾಜನರಾಗಿದ್ದು, ನಿವೃತ್ತ ಪ್ರಾಂಶುಪಾಲೆ ಡಾ.ಲೀಲಾ ಅಪ್ಪಾಜಿಪ್ರಶಸ್ತಿ ಪ್ರಧಾನ ಮಾಡಲಿದ್ದು, ಮೈಸೂರಿನ ಸಹಜ ಸಮೃದ್ಧ ನಿರ್ದೇಶಕ ಕೃಷ್ಣಪ್ರಸಾದ ಪ್ರಶಸ್ತಿ ಪುರಸ್ಕೃತರ ಕುರಿತು ಮಾತನಾಡಲಿದ್ದು, ಪ್ರೊ.ಹೆಚ್.ಎಲ್ ಕೇಶವ ಮೂರ್ತಿ ಪ್ರತಿಷ್ಠಾನದ ಅಧ್ಯಕ್ಷ ಗುರುಪ್ರಸಾದ್ ಕೆರಗೋಡು ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲೆಯ ಜನತೆ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಪ್ರತಿಷ್ಠಾನದ ಕೆ.ಬೋರಯ್ಯ ಮನವಿ ಮಾಡಿದ್ದಾರೆ.
ಪ್ರಶಸ್ತಿ ಪುರಸ್ಕೃತ ಸಂಘದ ಪರಿಚಯ…
ಬೀಬೀ ಫಾತಿಮಾ ಮಹಿಳಾ ಸ್ವ ಸಹಾಯ ಸಂಘ ಧಾರವಾಡದ ಕುಂದಗೋಳ ತಾಲ್ಲೂಕಿನ ತೀರ್ಥ ಗ್ರಾಮದಲ್ಲಿ 2018 ರಲ್ಲಿ ಆರಂಭಗೊಂಡು 12 ಜನ ಮಹಿಳಾ ಸದಸ್ಯರಿದ್ದ ಸಂಘವು ಪ್ರಾರಂಭದಲ್ಲಿ ನೈಸರ್ಗಿಕ ಉತ್ಪನ್ನಗಳಾದ ಸೋಪು, ಶಾಂಪು ಮತ್ತು ಫೇಸ್ ವಾಶ್ ತಯಾರಿಸುವ ತರಬೇತಿಯನ್ನು ಪಡೆದು ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲು ಪ್ರಾರಂಭಿಸಿತು.
ತದನಂತರದಲ್ಲಿ ರೈತರ ಜೊತೆಗೆ ಸಾವಯವ ಕೃಷಿಗೆ ಬೆಂಬಲವಾಗಿ ನಿಂತು ಸಿರಿಧಾನ್ಯ ಉತ್ಪಾದನೆಗೆ ಒತ್ತು ನೀಡಿತು. ಕುಂದಗೋಳ ಭಾಗವು ಒಂದು ಕಾಲದಲ್ಲಿ ಸಿರಿಧಾನ್ಯ ಉತ್ಪಾದನೆಗೆ ಹೆಸರವಾಸಿಯಾಗಿತ್ತು. ಬದಲಾದ ಕೃಷಿ ವ್ಯವಸ್ಥೆಯಿಂದ ಸಿರಿಧಾನ್ಯ ಉತ್ಪಾದನೆ ತುಂಬಾ ಕಡಿಮೆಯಾಗಿತ್ತು. ಆ ವೇಳೆ ಸಂಘವು ಸಮುದಾಯ ಬೀಜಬ್ಯಾಂಕ್ ಸ್ಥಾಪಿಸಿ ರೈತರಿಗೆ ಜವಾರಿ ಬೀಜಗಳನ್ನು ವಿತರಿಸಿತು.
ಸಂಘವು ರೈತರಿಗೆ ಅರಿವು ಮೂಡಿಸಿ ಸಿರಿಧಾನ್ಯ ಬೆಳೆಯಲು, ಬಳಸಲು ಪ್ರೋತ್ಸಾಹಿಸುತ್ತಿದೆ. ಬೀಜ ಬ್ಯಾಂಕ್ ಮೂಲಕ ಬೀಜಗಳನ್ನು ಮೊದಲು ಸ್ಥಳೀಯ 22 ಹಳ್ಳಿಗಳಿಗೆ ಮಾತ್ರ ವಿತರಿಸಲಾಗುತ್ತಿತ್ತು, 2022ರಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೂ ಬೀಜ ವಿತರಣೆ ಮಾಡುತ್ತಿದ್ದಾರೆ. ಕಳೆದ ವರ್ಷ ಐದು ಜಿಲ್ಲೆಗಳ ರೈತರಿಗೆ ವಿತರಿಸಿದ್ದಾರೆ. ಸರ್ಕಾರದ ಅನೇಕ ಯೋಜನೆಗಳಿಗೆ ಸಂಘದ ಬೀಜಬ್ಯಾಂಕ್ ಮೂಲಕ ಗುಣಮಟ್ಟದ ದೇಸೀ ಬೀಜಗಳನ್ನು ಮಾರಾಟ ಮಾಡುತ್ತಿದ್ದಾರೆ. ಸಂಘದ ಕೆಲಸಗಳನ್ನು ವಿಸ್ತರಿಸುವ ದೃಷ್ಟಿಯಿಂದ ‘ದೇವಧಾನ್ಯ ರೈತ ಉತ್ಪಾದಕರ ಕಂಪನಿ’ ಸ್ಥಾಪಿಸಿದ್ದು, ಈ ಕಂಪನಿಯ ಬೆನ್ನೆಲುಬಾಗಿ ಸಂಘವು ಸಿರಿಧಾನ್ಯಗಳ ಸಂಸ್ಕರಣೆ ಮಾಡಿ ಮಾರಾಟಕ್ಕೆ ಒದಗಿಸುತ್ತಿದೆ.
ಸಂಘದ ಮುಂದಾಳತ್ವ ವಹಿಸಿರುವ ಬೀಬಿಜಾನ್ ಮೌಲಾನಾಜ್ ಹಳೇಮನಿ, ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಮುನ್ನಡೆಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ. ಇವರ ಪ್ರಯತ್ನವನ್ನು ಗುರುತಿಸಿ ‘ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ ಅವಾರ್ಡ್ 2022’ ಲಭಿಸಿದೆ. ಬೆಂಗಳೂರು ಸ್ಫೂರ್ತಿಧಾಮ ನೀಡುವ ‘ಬೋಧಿವರ್ಧನ ಪ್ರಶಸ್ತಿ’ ಲಭಿಸಿದೆ. ದೇಶದ ಅನೇಕ ಕಡೆ ಇವರ ಪ್ರಯತ್ನವನ್ನು ಗುರುತಿಸಿ ಗೌರವ ಪುರಸ್ಕಾರ ಸಂದಿವೆ.