ಪ್ರಸ್ತುತ ದಿನಗಳಲ್ಲೂ ಲಿಂಗ ಭೇದ ನೀತಿ ಹೆಚ್ಚಾಗುತ್ತಿದೆ, ಹೆಣ್ಣು-ಗಂಡು ಎಂಬ ತಾರತಮ್ಯ ಸಾಕಷ್ಟು ಇದೆ, ಸಮಾನ ಮನೋಭಾವ ಇಲ್ಲದಾಗುತ್ತಿದೆ, ಹಿಂದುಳಿದ ರಾಷ್ಟ್ರವಾಗಿರುವ ಭಾರತ ದೇಶದಲ್ಲಿ ಇವೆಲ್ಲ ಇನ್ನೂ ಜೀವಂತವಾಗಿವೆ, ಸಂವಿಧಾನ ಜಾರಿಯಾದ ಮೇಲೆ ಒಂದುಷ್ಟು ಕಾನೂನುಗಳು ಅನಿಷ್ಟ ಪದ್ದತಿಗಳನ್ನು ತಡೆದಿವೆ ಎಂದು ಪ್ರೊ.ಕಾಳೇಗೌಡ ನಾಗವಾರ ಹೇಳಿದರು.
ಮಂಡ್ಯ ನಗರದ ಮಹಿಳಾ ಸರ್ಕಾರಿ ಕಾಲೇಜಿನ ವನರಂಗದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ಮಂಡ್ಯ ಆಯೋಜಿಸಿದ್ದ 2023-24ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ ಮತ್ತು ಗೈಡ್ಸ್ ಹಾಗೂ ರೆಡ್ಕ್ರಾಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ದೇಶದಲ್ಲಿ ವಿಶೇಷವಾಗಿ ವರ್ಣ ವ್ಯವಸ್ಥೆ, ವರ್ಗ ವ್ಯವಸ್ಥೆ, ಲಿಂಗಭೇದ, ಜಾತಿಭೇದ, ಹೆಣ್ಣು ಭ್ರೂಣ ಹತ್ಯೆ, ಅಸ್ಪೃಷ್ಯತಾ ಆಚರಣೆ, ಮರ್ಯಾದಾ ಹತ್ಯೆ ಸಾಕಷ್ಟು ಇದ್ದರೂ, ಮಂಡ್ಯ ಜಿಲ್ಲೆಯಲ್ಲಿ ಜಿಲ್ಲೆಯ ಜನತೆ ಸಾಕಷ್ಟು ಮುಗ್ಧರು ಮತ್ತು ಮೌಢ್ಯಾಚರಣೆಯಲ್ಲಿ ಮುಂದಿದ್ದಾರೆ, ಹೆಣ್ಣುಭ್ರೂಣ ಹತ್ಯೆಯಲ್ಲಿ ಮುಂಚೂಣಿಯಲ್ಲಿದೆ, ಇದು ಸರಿಯಾದ ಬೆಳವಣಿಗೆಯಲ್ಲ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಸರ್ಕಾರಿ ಕಾಲೇಜು ಪ್ರಾಂಶುಪಾಲ ಡಾ.ಆರ್.ದಶರಥ, ಸಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಕುಮಾರ್ ಬೆಳಲೆ, ಖಜಾಂಚಿ ಡಾ.ಜ್ಯೋತ್ಸ್ನಾ ಕಾರಂತ್, ಕ್ರೀಡಾ ಸಂಚಾಲಕ ಕೆ.ಆರ್.ಲೋಕೇಶ್, ಎನ್.ಎಸ್.ಎಸ್ ಅಧಿಕಾರಿ ಘಟಕ-1ರ ಡಾ.ಎಂ.ಕೆಂಪಮ್ಮ, ಡಾ.ಎಚ್.ಎಸ್. ಶಿವರಾಜ್, ಸ್ಕೌಟ್ ಮತ್ತು ಗೈಡ್ಸ್ ಸಂಚಾಲಕಿ ಡಾ.ಎಂ.ಎಸ್.ರೇಖಾ, ಪ್ರಾಧ್ಯಾಪಕಿ ಡಾ.ಪ್ರಮೀಳಾ, ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ನವ್ಯಶ್ರೀ, ಉಪಾಧ್ಯಕ್ಷೆ ಲಾವಣ್ಯ, ಸ್ನಾತಕೋತರ ವಿಭಾಗದ ಉಪಾಧ್ಯಕ್ಷೆ ನಿಸರ್ಗ, ಕಾರ್ಯದರ್ಶಿ ಮಾನ್ಯಶ್ರೀ, ಪದಾಧಿಕಾರಿಗಳಾದ ತನುಶ್ರೀ, ತೇಜನಾ, ಪೂರ್ಣಿಮಾ, ನೂರ್ಆಯೇಷಾ, ಪೂಜಾ, ದಾಕ್ಷಾಯಿಣಿ ಮತ್ತಿತರರಿದ್ದರು.