ಹೆಂಡತಿ ಹೆಸರಿನಲ್ಲಿದ್ದ ಕೋಟ್ಯಾಂತರ ರೂ.ಗಳ ಆಸ್ತಿ ಲಪಟಾಯಿಸುವುದಕ್ಕಾಗಿ ಗಂಡನೇ ಧರ್ಮಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಮಂಡ್ಯದ ವಿ.ವಿ ನಗರ ಬಡಾವಣೆ ನಡೆದಿದೆ.
ಮಂಡ್ಯನಗರದ ವಿ.ವಿ ನಗರ ಬಡಾವಣೆಯ ಎಸ್ .ಶ್ರುತಿ (32) ಕೊಲೆಯಾದ ಗೃಹಿಣಿ ಟಿ.ಎನ್ ಸೋಮಶೇಖರ್(41) ಎಂಬಾತನೇ ಹೆಂಡತಿ ಮಲಗಿದ್ದ ವೇಳೆ ಮುಖಕ್ಕೆ ದಿಂಬು ಬೆಡ್ ಶೀಟ್ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಘಟನೆಯ ವಿವರ
ತಂದೆ, ತಾಯಿ ಹಾಗೂ ತಂಗಿ ಸಾವಿನ ಬಳಿಕ ಎಸ್ .ಶ್ರುತಿ ಅವರ ಹೆಸರಿಗೆ ಕೋಟ್ಯಾಂತರ ರೂಪಾಯಿ ಆಸ್ತಿ ಬಂದಿತ್ತು. ಕೆಲ ವರ್ಷಗಳ ಹಿಂದೆಯಷ್ಟೆ ಈಕೆಯ ತಂದೆ, ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿದರು. 2018ರಲ್ಲಿ ಈಕೆಯ ತಂಗಿ ಸುಶ್ಮಿತ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದರು. ಇದರಿಂದ ಇಡೀ ಕುಟುಂಬದ ಸುಮಾರು ₹10 ಕೋಟಿ ಆಸ್ತಿಯು ಈಕೆಯ ಹೆಸರಿನಲ್ಲಿತ್ತು. ಮೈಸೂರಿನ ಪ್ರಮುಖ ನಗರಗಳಲ್ಲಿದ್ದ ಕಮರ್ಷಿಯಲ್ ಬಿಲ್ಡಿಂಗ್ ಮನೆ ಹಾಗೂ ಸೈಟ್ಗಳು ಈಕೆಯ ಹೆಸರಿಗೆ ಬಂದಿದ್ದವು. ಈ ಆಸ್ತಿಯನ್ನು ಮಾರಾಟ ಮಾಡಲು ಪತಿ ಸೋಮಶೇಖರ್ ಆಗಾಗ್ಗೆ ಒತ್ತಾಯಿಸುತ್ತಿದ್ದ.
ಮೈಸೂರಿನ ಆಸ್ತಿ ಮಾರಾಟ ಮಾಡಿ ಬೇರೆಡೆ ಆಸ್ತಿ ಖರೀದಿಗೆ ಪ್ಲಾನ್ ಮಾಡಿದ್ದ ಆದರೆ ಶೃತಿ ಆಸ್ತಿ ಮಾರಾಟಕ್ಕೆ ನಿರಾಕರಿಸಿದ್ದರು. ಇದೇ ವಿಚಾರಕ್ಕೆ ಹಲವು ಬಾರಿ ಗಂಡ, ಹೆಂಡತಿ ಮಧ್ಯೆ ಜಗಳ ನಡೆದಿದ
ಕಳೆದ ಶನಿವಾರ ಶ್ರುತಿ ಮನೆಯಲ್ಲಿ ಮಲಗಿದ್ದ ವೇಳೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಪಲ್ಸ್ ರೇಟ್ ಕಡಿಮೆಯಾಗಿ ಆಕೆ ಸಾವನ್ನಪ್ಪಿದ್ಧಾಳೆಂದು ಶ್ರುತಿ ಅವರ ಚಿಕ್ಕಪ್ಪನಿಗೆ ಕರೆ ಮಾಡಿ ತಿಳಿಸಿದ್ದ. ಇದರಿಂದ ಅನುಮಾನಕೊಂಡ ಆಕೆ ಚಿಕ್ಕಪ್ಪ ಕುಮಾರಸ್ವಾಮಿ ಮಂಡ್ಯ ಪಶ್ಷಿಮ ಪೊಲೀಸ್ ಠಾಣೆಯ ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ್ದ ಪೊಲೀಸರಿಗೆ ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂಬ ಸತ್ಯ ತಿಳಿದು ಬಂದಿದೆ.
ಮರಣೋತ್ತರ ಪರೀಕ್ಷೆಯ ವರದಿ ಆಧಾರದ ಮೇಲೆ ಪತಿ ಸೋಮಶೇಖರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ವಿಚಾರಣೆ ವೇಳೆ ತಾನೇ ಕೊಲೆ ಮಾಡಿರುವುದಾಗಿ ಪ್ರೊಫೆಸರ್ ಸೋಮಶೇಖರ್ ತಪ್ಪೊಪ್ಪಿಕೊಂಡಿದ್ದಾರೆಂದು ತಿಳಿದು ಬಂದಿದೆ.