ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರ ಅಧ್ಯಕ್ಷತೆಯಲ್ಲಿ ಇಂದು ಮದ್ದೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಸ್ತಿ ಸಮೀಕ್ಷೆ ಸಂಬಂಧ ತಾಲ್ಲೂಕಿನ 42 ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಲಾಯಿತು.
ಸಭೆಯಲ್ಲಿ ಮನೆ ಮನೆ ಸಮೀಕ್ಷೆ, ಕಂದಾಯ ವಸೂಲಾತಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕೂಲಿ ಮತ್ತು ಸಾಮಾಗ್ರಿ ಅನುಪಾತ, ಇ – ಸ್ವತ್ತು ಸಂಬಂಧ ಪ್ರಗತಿ ಪರಿಶೀಲನೆ ನಡೆಯಿತು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವೀರ್ ಆಸಿಫ್ ಅವರು ಪ್ರತಿಯೊಬ್ಬ ಪಿಡಿಒರವರು ತಮ್ಮ ಪಂಚಾಯತಿಯಲ್ಲಿ ನಡೆಸಿರುವ ಮನೆ ಮನೆ ಸಮೀಕ್ಷೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಮಾತನಾಡಿ ಕಡಿಮೆ ಸಮೀಕ್ಷೆ ಮಾಡಿದ್ದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಡಿಸೆಂಬರ್ ಅಂತ್ಯದ ವೇಳೆಗೆ ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿಯ ಸಮೀಕ್ಷೆಗಳನ್ನು ನಿಯಮಾನುಸಾರ ಕೈಗೊಂಡು ಸದರಿ ಮಾಹಿತಿಯನ್ನು ಪಂಚತಂತ್ರ 2.0 ತಂತ್ರಾಂಶದಲ್ಲಿ ಆರೋಹಿಸಲು ಸೂಚಿಸಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರತಿ ದಿನ ಕನಿಷ್ಠ ಮೂರು ಆಸ್ತಿಗಳಿಗೆ ಇ-ಸ್ವತ್ತು ವಿತರಣೆ ಮಾಡಬೇಕು. ಪ್ರತಿ ತಿಂಗಳು ಗರಿಷ್ಠ 100 ಆಸ್ತಿಗಳಿಗೆ ಇ-ಸ್ವತ್ತು ವಿತರಣೆ ಮಾಡಬೇಕು. ಈ ರೀತಿ ಸರ್ಕಾರಿ ಆಸ್ತಿಗಳಿಗೆ ಡಿಸೆಂಬರ್ ಅಂತ್ಯದ ವೇಳೆಗೆ ಇ –ಸ್ವತ್ತು ವಿತರಿಸಲು ಸೂಚಿಸಿದರು. ನಂತರ 2022-2023 ವರ್ಷದ ಕಂದಾಯ ವಸೂಲಾತಿ ಮಾಡುವಂತೆ ಸೂಚಿಸಿದರು.