ಕೆ.ಆರ್.ಪೇಟೆ ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿ ಭಾರತೀಯ ಪುರ ಕ್ರಾಸ್ ಗ್ರಾ.ಪಂ ಪಿಡಿಓ ದಿನೇಶ್ ಅವರ ಬೇಜವಾಬ್ದಾರಿತನ ಹಾಗೂ ಕರ್ತವ್ಯ ನಿರ್ಲಕ್ಷ್ಯವನ್ನು ಖಂಡಿಸಿ ಪಂಚಾಯಿತಿಯ ವ್ಯಾಪ್ತಿಯ ಗ್ರಾಮಗಳು ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ಮತ್ತು ಗ್ರಾ.ಪಂ ಸದಸ್ಯರು ಪಂಚಾಯಿತಿ ಕಾರ್ಯಾಲಯಕ್ಕೆ ಬೀಗ ಜಡಿದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಮುಖಂಡ ಕುಂದೂರು ರಾಮೇಗೌಡ, ಗ್ರಾಮ ಪಂಚಾಯಿತಿ ಎಂದರೆ ಗ್ರಾಮೀಣ ಜನರಿಗೆ ಶಕ್ತಿಸೌಧವಾಗಿದೆ. ಆದರೆ ನಮ್ಮ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಬೇಜವಾಬ್ದಾರಿ ಕಾರ್ಯವೈಖರಿಯಿಂದ ಈ ವ್ಯಾಪ್ತಿಗೆ ಬರುವ ಪ್ರತಿಯೊಂದು ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳು ಕುಂಠಿತವಾಗುತ್ತಿದೆ. ಅವರ ಉದ್ಧಟತನದಿಂದ ಗ್ರಾ.ಪಂ ಹಲವಾರು ಸಾರ್ವಜನಿಕರು ಸೂಕ್ತ ದಾಖಲೆಯೊಂದಿಗೆ ರಾಸುಗಳ ಅನುಕೂಲಕ್ಕಾಗಿ ನಿರ್ಮಿಸಿ ಹಲವಾರು ತಿಂಗಳಿಗಳು ಕಳೆದರೂ ಕೊಟ್ಟಿಗೆ ಹಣ ಪಾವತಿಯಾಗಿಲ್ಲ ಎಂದು ದೂರಿದರು.
ಗ್ರಾ.ಪಂ ಸದಸ್ಯ ಬೆಡದಹಳ್ಳಿ ಸುನೀಲ್ ಮಾತನಾಡಿ, ಪಿಡಿಒ ಉದ್ದಟತನದಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿವೆ. ಇವರ ಬೇಜವಾಬ್ದಾರಿತನದಿಂದ ಸಾರ್ವಜನಿಕರು ಜನಪ್ರತಿನಿಧಿಗಳಾದ ನಮಗೆ ದಿನನಿತ್ಯವೂ ಹಿಡಿಶಾಪ ಹಾಕುತ್ತಿದ್ದಾರೆ. ಪಿಡಿಒ ಅವರ ಶಿಸ್ತಿನ ಕಾರ್ಯವೈಖರಿ ಇಲ್ಲದೆ ಗ್ರಾ.ಪಂ ಕೆಲ ಸಿಬ್ಬಂದಿಗಳು ಸೂಕ್ತ ದಾಖಲೆಗಳು ಇರುವ ಸಾರ್ವಜನಿಕರ ಕೆಲಸಗಳು ಕುಂಠಿತವಾಗುತ್ತಿವೆ ಎಂದು ದೂರಿದರು.
ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಶ್ರೀನಿವಾಸ್, ಗ್ರಾ.ಪಂ ಸದಸ್ಯ ಕುಬೇರ, ಮಾಜಿ ಅಧ್ಯಕ್ಷೆ ಶಶಿಕಲಾ ಶಿವಕುಮಾರ್, ಸದಸ್ಯ ಶಿವರಾಮು, ಕುಂದೂರು ರಾಮೇಗೌಡ, ಬೆಡದಹಳ್ಳಿ ಮಂಜುನಾಥ್ , ಭಾರತಿಪುರ ಬಲರಾಮು, ಕೊರಟಿಗೆರೆ ಮಂಜೇಗೌಡ, ದೇವರಾಜು, ಭಾರತಿಪುರ ಕೊಪ್ಪಲು ಕುಮಾರ್ , ಕುಂದೂರು ಲೋಕೇಶ್ ಸೇರಿದಂತೆ ಸಾರ್ವಜನಿಕರು ಇತರರಿದ್ದರು.