ಶಾಲಾ- ಕಾಲೇಜುಗಳಿಗೆ ತೆರಳುವ ಸಂದರ್ಭದಲ್ಲಿ ಸಾರಿಗೆ ಬಸ್ಸುಗಳು ಸಕಾಲಕ್ಕೆ ಆಗಮಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ಗ್ರಾಮದಲ್ಲಿ ವಿದ್ಯಾರ್ಥಿಗಳು ಸೋಮವಾರ ಮುಂಜಾನೆ ರಸ್ತೆತಡೆ ನಡೆಸಿ, ಪ್ರತಿಭಟಿಸಿದರು.
ಈ ಭಾಗದ ಸುತ್ತಮುತ್ತ ಗ್ರಾಮದ ವಿದ್ಯಾರ್ಥಿಗಳೂ ಕೊಡಿಯಾಲ ಗ್ರಾಮ ಬಂದು ಶಾಲಾ ಕಾಲೇಜಿಗೆ ತೆರಳಲು ಕೆ ಎಸ್ ಆರ್ ಟಿ ಸಿ ಬಸ್ಸಿಗಾಗಿ ಕಾದು ಕುಳಿತಿರುತ್ತೇವೆ, ಆದರೆ ಸಕಾಲಕ್ಕೆ ಬಸ್ ಗಳು ಬಾರದ ಕಾರಣ ನಮ್ಮ ವ್ಯಾಸಂಗಕ್ಕೆ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದರು.
ಒಂದು ವೇಳೆ ಬಸ್ ಗಳು ಬಂದರೂ ಸಹ ವಿದ್ಯಾರ್ಥಿಗಳು ಮತ್ತು ಇತರೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಮುಂದಾಗುತ್ತಿಲ್ಲ, ನಿರ್ವಾಹಕರು ವಿದ್ಯಾರ್ಥಿಗಳ ಜೊತೆ ಉಡಾಫೆಯಾಗಿ ವರ್ತಿಸುತ್ತಾರೆ, ನಿಲ್ದಾಣಗಳಲ್ಲಿ ನಿಲುಗಡೆ ಮಾಡದೆ ಸ್ವಲ್ಪ ದೂರ ಮುಂದೆ ಹೋಗಿ ನಿಲ್ಲಿಸುತ್ತಾರೆ, ಅಲ್ಲದೆ ಬಸ್ ಗಳಲ್ಲಿ ಪ್ರಯಾಣಿಕರು ತುಂಬಿದ್ದಾರೆ ಎಂದು ನಿಲ್ಲಿಸದೆ ಹೋಗುತ್ತಾರೆ ಎಂದು ಅಳಲು ತೋಡಿಕೊಂಡರು.
ಪೊಲೀಸರು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಮನವೊಲಿಕೆಗೆ ಮುಂದಾದರೂ ಸಹ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ನಿಗಮದ ವಿಭಾಗೀಯ ನಿಯಂತ್ರಣ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಬಸ್ ಗಳು ಸಕಾಲಕ್ಕೆ ಬರುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಕೈಬಿಟ್ಟರು.