ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2023 -24ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯನ್ನು ಸೆಪ್ಟೆಂಬರ್ 21ರಂದು ಬೆಳಿಗ್ಗೆ 11:30 ಗಂಟೆಗೆ ಸಂಘದ ಪ್ರಧಾನ ಕಛೇರಿ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಯು.ಸಿ .ಶೇಖರ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಸಭೆಯಲ್ಲಿ ಹಿಂದಿನ ವಾರ್ಷಿಕ ಮಹಾಸಭೆಯ ನಡಾವಳಿಯನ್ನು ಓದಿ ದಾಖಲಿಸಲಾಗುವುದು. 2023- 24ನೇ ಸಾಲಿನ ಆಡಳಿತ ವರದಿಯನ್ನು ಪರಿಶೀಲಿಸಲಾಗುವುದು. ಲೆಕ್ಕ ಪರಿಶೋಧಕರಿಂದ ಪರಿಶೋಧಿಸಲ್ಪಟ್ಟ 2023-24ನೇ ಸಾಲಿನ ಜಮಾ ಖರ್ಚು ವ್ಯಾಪಾರ ತಕ್ತೆ, ಲಾಭ ನಷ್ಟ ತಕ್ತೆ ಮತ್ತು ಆಸ್ತಿ ಜವಾಬ್ದಾರಿ ತಕ್ತೆ ಹಾಗೂ ವರದಿ ಮತ್ತು ಈ ವರದಿಗೆ ಆಡಳಿತ ಮಂಡಳಿ ನೀಡಿರುವ ಸಮಜಾಯಿಸಿಯನ್ನು ಒಪ್ಪಿ ಅಂಗೀಕರಿಸುವ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
2023- 24ನೇ ಸಾಲಿನಲ್ಲಿ ಮಂಜೂರಾಗಿರುವ ಬಜೆಟ್ ಗಿಂತ ಹೆಚ್ಚಿಗೆ ಖರ್ಚಾಗಿರುವ ಬಗ್ಗೆ ಮತ್ತು 2024 -25ನೇ ಹಾಗೂ 2025- 26ನೇ ಸಾಲಿನ ಬಜೆಟ್ಗೆ ಮಂಜೂರಾತಿ ನೀಡುವ ಬಗ್ಗೆ ಚರ್ಚಿಸಲಾಗುವುದು ಎಂದರು.
2023- 24ನೇ ಸಾಲಿಗೆ ಲಾಭಾಂಶ ವಿಲೇವಾರಿ ಮಾಡಲು ಅಂದು ತೀರ್ಮಾನ ತೆಗೆದುಕೊಳ್ಳಲಾಗುವುದು .2024- 25ನೇ ಸಾಲಿನ ಸಂಘದ ಲೆಕ್ಕಪರಿಶೋಧನೆಗಾಗಿ ಲೆಕ್ಕ ಪರಿಚೋಧಕರನ್ನು ನೇಮಿಸಿಕೊಳ್ಳುವ ಬಗ್ಗೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ಸಂಘದ ಸದಸ್ಯರು ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಸಭೆ ನಡೆಯುವ ಏಳು ದಿನಗಳ ಮುಂಚಿತವಾಗಿ ಲಿಖಿತ ಮೂಲಕ ತಲುಪಿಸಬೇಕು. ಸದಸ್ಯರು ಸಭೆಗೆ ಬರುವಾಗ ಆಹ್ವಾನ ಪತ್ರಿಕೆಯನ್ನು ಕಡ್ಡಾಯವಾಗಿ ತರಬೇಕು. ತಪ್ಪದೇ ಗುರುತಿನ ಚೀಟಿಯನ್ನು ತರಬೇಕು. ಒಂದು ವೇಳೆ ಗುರುತಿನ ಚೀಟಿ ಪಡೆಯದೆ ಇರುವ ಸದಸ್ಯರು ಪಾಸ್ಪೋರ್ಟ್ ಆಳತೆಯ ಮೂರು ಭಾವಚಿತ್ರಗಳನ್ನು ನೀಡಿ ಗುರುತಿನ ಚೀಟಿ ಪಡೆಯಬೇಕು ಎಂದರು. ವಾರ್ಷಿಕ ಮಹಾಸಭೆಯ ಆಹ್ವಾನ ಪತ್ರಿಕೆ ತಲುಪದೇ ಇದ್ದಲ್ಲಿ ಇದನ್ನೇ ಆಹ್ವಾನ ಪತ್ರಿಕೆಯೆಂದು ಪರಿಗಣಿಸಿ ಸಭೆಗೆ ಹಾಜರಾಗುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಬೇಲೂರು ಸೋಮಶೇಖರ್, ಕೆ ಸಿ ರವೀಂದ್ರ, ಜಿ.ಎನ್.ಉದಯ್ ಕುಮಾರ್, ಸಿ ಕೆ ಪಾಪಯ್ಯ , ಕೆ ಟಿ ಚಂದ್ರಶೇಖರ್, ಹೆಚ್ ಅಶೋಕ್ ಉಪಸ್ಥಿತರಿದ್ದರು.