ವಿಧಾನ ಪರಿಷತ್ತು ಮತ್ತು ವಿಧಾನಸಭೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡದ ಕಾರಣ ಬಿಜೆಪಿ ಮತ್ತು ಜೆಡಿಎಸ್ ನಿಂದ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತಿಳಿಸಿದರು.
ಮಂಡ್ಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ವಾಲ್ಮೀಕಿ ಮತ್ತು ಮುಡಾ ಹಗರಣದ ಬಗ್ಗೆ ನಿಲುವಳಿ ಸೂಚನೆ ಮಂಡಿಸಿದ್ದೇವೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀವು ಮಾತನಾಡಿ, ನಿಮಗೆ ಉತ್ತರ ಕೊಡುವ ದಾಖಲೆಗಳು ನಮ್ಮಲ್ಲಿವೆ ಅಂದಿದ್ದರು ಎಂದು ತಿಳಿಸಿದರು.
ನಾನು ವಿಧಾನಮಂಡಲದಲ್ಲಿ 3 ಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದೇನೆ. ಸಂತೆ ಭಾಷಣ ಮಾಡಲಿಲ್ಲ .ದಾಖಲೆ ಸಮೇತ ಹೇಳಿದ್ದೇನೆ ಎಂದರು.
ಮುಡಾ ಹಗರಣದ ಬಗ್ಗೆಯೂ ನಿಲುವಳಿ ಸೂಚನೆ ಮಂಡಿಸಲಾಗಿತ್ತು. ಆದರೆ ಅವಕಾಶ ಸಿಗಲಿಲ್ಲ. ಮುಖ್ಯಮಂತ್ರಿಗಳು ಅವಕಾಶ ನೀಡದೆ ಪಲಾಯನ ಮಾಡಿದರು. ಒಂದು ವೇಳೆ ಅವಕಾಶ ನೀಡಿದ್ದರೆ ಪಾದಯಾತ್ರೆ ಬಗ್ಗೆ ಚಿಂತನೆ ನಡೆಸಬಹುದಿತ್ತು ಎಂದರು.
ಡಿ.ಕೆ ಶಿವಕುಮಾರ್ ಅವರು ಬಿಚ್ಚಿಡುತ್ತೇನೆ, ಬಿಚ್ಚಿಡುತ್ತೇನೆ ಎನ್ನುತ್ತಿದ್ದಾರೆ. ಅವರು ನಮ್ಮ ವಿಚಾರದ ಬಗ್ಗೆ ವಿಧಾನಸಭೆಯಲ್ಲಿ ಎಲ್ಲವನ್ನು ಬಿಚ್ಚಿಡಬಹುದಿತ್ತು. ಆದರೆ ಏನನ್ನು ಮಾಡಲಿಲ್ಲ, ವಿಧಾನಸಭೆಯಲ್ಲಿ ನಿಲುವಳಿ ಮಂಡನೆಗೆ ಅವಕಾಶ ವಂಚನೆ ಮಾಡಿದ ಕಾರಣ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಆದರೆ ಇವರು ಆಡಳಿತ ಪಕ್ಷದವರಾಗಿ ಯಾಕೆ ಸಮಾವೇಶ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ದಾಖಲೆ ನೀಡಿದ್ದರೆ ಇಷ್ಟು ಆಗುತ್ತಿರಲಿಲ್ಲ ಎಂದು ತಿಳಿಸಿದ ಅವರು, ರೀಡೂ ಮಾಡಿದ್ದು ಅವರಿಗೆ ಕಪ್ಪುಚುಕ್ಕೆ ಅಲ್ಲವೇ ಎಂದು ಮತ್ತೊಮ್ಮೆ ಪ್ರಶ್ನಿಸಿದರು. ಬೊಮ್ಮಾಯಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಾಚಾರ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಅವರು ಈ ಬಗ್ಗೆ ವಿರೋಧ ಪಕ್ಷದವರಾಗಿ ದಾಖಲೆಯನ್ನು ಬಿಡುಗಡೆ ಮಾಡಬಹುದಿತ್ತು. ಆಗ ಮಾಡದೆ ಈಗ ಅಧಿಕಾರದಲ್ಲಿರುವಾಗ ಬಿಜೆಪಿ ಮೇಲೆ ಆಪಾದನೆ ಮಾಡಿದರೆ ಜನರು ಇದಕ್ಕೆ ಬೆಲೆ ಕೊಡುತ್ತಾರಾ ? ಎಂದು ಮತ್ತೊಂದು ಬಾರಿ ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಭ್ರಷ್ಟ ಕಾಂಗ್ರೆಸ್ ಹಗರಣಗಳ ಸರ್ಕಾರ ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ವಕ್ತಾರ ಚಂದ್ರಶೇಖರ್, ಮಾಧ್ಯಮ ಸಂಚಾಲಕ ನಾಗೇಶ್, ಶಾಸಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ವಕ್ತಾರ ಸಿಟಿ ಮಂಜುನಾಥ್, ಕನಕಮೂರ್ತಿ, ನಾಗನಂದ್ ಉಪಸ್ಥಿತರಿದ್ದರು