ಪ್ರಧಾನಿ ನರೇಂದ್ರ ಮೋದಿ ಅವರು ಜಾತಿ ಗಣತಿ ಮಾಡಲು ಅಸಮರ್ಥರಾಗಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಬಳಿಕ ರಾಹುಲ್ ಗಾಂಧಿ ಅವರು ವಾಗ್ದಾಳಿ ನಡೆಸಿದರು.
”ದೇಶದಲ್ಲಿ ಜಾತಿ ಗಣತಿಯನ್ನು ಬೆಂಬಲಿಸಲು ಸರ್ವಾನುಮತದಿಂದ ನಿರ್ಧರಿಸಿದೆ” ಎಂದು ರಾಹುಲ್ ಗಾಂಧಿ ಸೋಮವಾರ ಘೋಷಿಸಿದ್ದಾರೆ.
”ದೇಶದಲ್ಲಿ ಜಾತಿ ಗಣತಿಯನ್ನು ಬೆಂಬಲಿಸಲು CWC ಸರ್ವಾನುಮತದಿಂದ ನಿರ್ಧರಿಸಿದೆ. ಇದು ದೇಶದ ಬಡವರ ವಿಮೋಚನೆಗೆ ಪ್ರಬಲವಾದ ಪ್ರಗತಿಪರ ಹೆಜ್ಜೆಯಾಗಿದೆ” ಎಂದು ಸಭೆಯ ನಂತರ ರಾಹುಲ್ ಗಾಂಧಿ ಹೇಳಿದ್ದಾರೆ.
”ಪ್ರಧಾನಿ ಜಾತಿ ಗಣತಿ ಮಾಡಲು ಅಸಮರ್ಥರಾಗಿದ್ದಾರೆ. ನಮ್ಮ 4 ಸಿಎಂಗಳಲ್ಲಿ 3 ಮಂದಿ ಒಬಿಸಿ ವರ್ಗದವರು. 10 ಬಿಜೆಪಿ ಸಿಎಂಗಳ ಪೈಕಿ ಒಬ್ಬ ಸಿಎಂ ಮಾತ್ರ ಒಬಿಸಿ ವರ್ಗದವರು. ಒಬಿಸಿ ವರ್ಗದಿಂದ ಎಷ್ಟು ಬಿಜೆಪಿ ಸಿಎಂಗಳು ಇದ್ದಾರೆ? ಪ್ರಧಾನ ಮಂತ್ರಿಗಳು ಒಬಿಸಿಗಳಿಗಾಗಿ ಕೆಲಸ ಮಾಡುವುದಿಲ್ಲ” ಎಂದು ಅವರು ಹೇಳಿದರು.
ಬಿಹಾರದಲ್ಲಿ ಜಾತಿಗಣತಿಯ ವರದಿಯನ್ನು ಸರಕಾರ ಬಿಡುಗಡೆಗೊಳಿಸಿದೆ. ಈ ಮೂಲಕ ದೇಶದಲ್ಲಿ ಜಾತಿ ಆಧಾರಿತ ಸಮೀಕ್ಷೆಯ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಬಿಹಾರ ಪಾತ್ರವಾಗಿದೆ.
ರಾಜ್ಯದಲ್ಲಿ 36%ದಷ್ಟು ಅತಿಹೆಚ್ಚು ಹಿಂದುಳಿದಿರುವ ಮತ್ತು 27% ಹಿಂದುಳಿದ ವರ್ಗದ ಜನರಿದ್ದಾರೆ. 19.7% ಪರಿಶಿಷ್ಟ ಜಾತಿಯ ಜನ ಮತ್ತು 1.7% ಪರಿಶಿಷ್ಟ ಪಂಗಡಗಳ ಜನರಿದ್ದಾರೆ. ಸಾಮಾನ್ಯ ವರ್ಗದ ಜನಸಂಖ್ಯೆಯು 15.5% ದಷ್ಟಿದೆ. ರಾಜ್ಯದ ಒಟ್ಟು ಜನಸಂಖ್ಯೆ 13.1 ಕೋಟಿಗೂ ಹೆಚ್ಚು ಎಂದು ಜಾತಿಗಣತಿಯಲ್ಲಿ ಬಹಿರಂಗವಾಗಿದೆ. ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲೂ ಜಾತಿ ಸಮೀಕ್ಷೆ ನಡೆಸುವಂತೆ ಆದೇಶ ಹೊರಡಿಸಿದೆ.
”ಸಾಮಾಜಿಕ ನ್ಯಾಯದ ಹೊಸ ಅಧ್ಯಾಯವಾಗಿದೆ ಈ ಜಾತಿಗಣತಿ.. ಆದರೆ ಕೇಂದ್ರ ಸರಕಾರ ದೇಶದಲ್ಲಿ ಜಾತಿ ಗಣತಿಯಿಂದ ನುಣುಚಿಕೊಳ್ಳುತ್ತಿದೆ. ಇದರಿಂದ ಸಾಮಾಜಿಕ ನ್ಯಾಯಕ್ಕೆ ತೊಡಕುಂಟಾಗಿದೆ. ಆದ್ದರಿಂದ, ರಾಜಸ್ಥಾನದ ಎಲ್ಲಾ ನಿರ್ಗತಿಕರಿಗೆ ಪ್ರಯೋಜನಗಳನ್ನು ಖಾತ್ರಿಪಡಿಸಿಕೊಳ್ಳಲು ರಾಜ್ಯ ಸರ್ಕಾರವು ತನ್ನ ಸಂಪನ್ಮೂಲಗಳ ಮೂಲಕ ಜಾತಿ ಸಮೀಕ್ಷೆಯನ್ನು ನಡೆಸಲು ನಿರ್ಧರಿಸಿದೆ” ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಮಾಡಿದ್ದಾರೆ.