-
ಬಿಜೆಪಿಯಲ್ಲಿದ್ದುಕೊಂಡೆ ಸರ್ಕಾರ-ಸಚಿವರನ್ನು ಟೀಕಿಸಿದ ಹಳ್ಳಿಹಕ್ಕಿ
- ಸದ್ಯದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ-ಕಾಂಗ್ರೆಸ್ ಸೇರುವ ಸಾಧ್ಯತೆ
ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಅವರ ವಿರೋಧಿಗಳು ಅಪಪ್ರಚಾರ ಮಾಡಿದ್ದರು, ಆದರೆ ಅವರು ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯಿಂದ ಅವರ ಉನ್ನತವಾದ ವ್ಯಕ್ತಿತ್ವ ಜನಸಾಮಾನ್ಯರಿಗೆ ತಿಳಿಯುತ್ತಿದ್ದು, ಕಾಂಗ್ರೆಸ್ ಪಕ್ಷದ ಶಕ್ತಿ ವೃದ್ಧಿಸುತ್ತಿದೆ ಎಂದು ವಿಧಾನ ಪರಿಷತ್ ನ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಬಿಜೆಪಿ ಪಕ್ಷದಲ್ಲೇ ಇದ್ದು ಕೊಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಹೊಗಳುವ ಮೂಲಕ ಮತ್ತೆ ನಮ್ಮ ಮೂಲ ಪಕ್ಷದತ್ತ ಹೆಜ್ಜೆ ಹಾಕಲು ಹಳ್ಳಿ ಹಕ್ಕಿ ವಿಶ್ವನಾಥ್ ಉತ್ಸುಕರಾಗಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅಭಿನಂದಿಸಿರುವ ವಿಶ್ವನಾಥ್, ಸದ್ಯದಲ್ಲೇ ಬೆಂಗಳೂರಿನಲ್ಲಿ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.
ಮತ್ತೆ ಕಾಂಗ್ರೆಸ್ ಸೇರುವಿರಾ?’ ಎಂಬ ಸುದ್ದಿಗಾರರ ಪ್ರಶ್ನೆಗೆ ಮೈಸೂರಿನಲ್ಲಿ ಉತ್ತರಿಸಿದ ಅವರು ‘ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇವತ್ತಿನ ರಾಜಕಾರಣ ಹೀಗೆಯೇ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಾಲಚಕ್ರದಲ್ಲಿ ಏನು ಬೇಕಾದರೂ ಆಗಬಹುದು’, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ ಯಾವ ಪಕ್ಷಗಳೂ ಮುಳುಗುವ ಹಡಗುಗಳಲ್ಲ. ಅವು ಜನರೊಂದಿಗೆ ತೇಲುವಂಥವು; ಇರುವಂಥವು’ ಎಂದು ಹೇಳಿದರು. .
ಈಗ ಬಿಜೆಪಿಯಲ್ಲಿರುವ ವಿಶ್ವನಾಥ್ ಆ ಪಕ್ಷದಿಂದಲೂ ದೂರ ಸರಿದಿದ್ದಾರೆ. ತಮ್ಮದೇ ಪಕ್ಷದ ಸರಕಾರ ಹಾಗೂ ಸಚಿವರನ್ನು ಟೀಕಿಸುತ್ತಿದ್ದಾರೆ. ಮೂಲತಃ ಜಾತ್ಯತೀತ, ಸಮಾಜವಾದಿ ವ್ಯಕ್ತಿತ್ವದವರಾದ ವಿಶ್ವನಾಥ್ ಅವರು, ಹಿಂದೂತ್ವದ ಅಜೆಂಡ ಇಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲ ಎಂಬುದು ಅವರ ಹೇಳಿಕೆಯಿಂದ ತಿಳಿದು ಬರುತ್ತದೆ.